ಮಂಗಳೂರು : ಕಾವ್ಯ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಹಾಗೂ ಕಾವ್ಯ ಪ್ರಕರಣದಲ್ಲಿ ಪೋಷಕರಿಗಿರುವ ಸಂಶಯಗಳಿಗೆ ಉತ್ತರ ಸಿಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಅವರ ಮನೆಗೆ ಈಗಾಗಲೇ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಕಾವ್ಯ ಪ್ರಕರಣದಲ್ಲಿ ಹಲವು ಸಂಶಯಗಳಿವೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಿ ಕಾವ್ಯಳ ಸಾವಿಗೆ ಕಾರಣ ಹಾಗೂ ಕಾರಣಿಕರ್ತರ ಬಗ್ಗೆ ಸ್ಪಷ್ಟಪಡಿಸಬೇಕೆಂದು ಎಂದರು.
ಆಳ್ವಾಸ್ ವಿದ್ಯಾಸಂಸ್ಥೆಯ ಬಗ್ಗೆ ಯಾವುದೇ ರೀತಿಯ ಆರೋಪಗಳಿಲ್ಲ. ಆದರೆ. ಉಗ್ರಪ್ಪ ಅವರು ನೇತೃತ್ವದ ಸಮಿತಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ಉಲ್ಲೇಖಿಸಿರುವ ಲೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಹಿಂದೆ 10ಕ್ಕಿಂತ ಹೆಚ್ಚು ಆತ್ಮಹತ್ಯೆ ಸೇರಿದಂತೆ ಅಸಹಜ ಸಾವುಗಳು ನಡೆದಿವೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಹೇಳಿದರು .
ಕಲ್ಲಡ್ಕದ ಶಾಲೆಗಳಿಗೆ ಅನುದಾನ ಕಡಿತಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿದ ಬಿ.ಕೆ ಹರಿಪ್ರಸಾದ್, ರಾಜ್ಯ ಸರ್ಕಾರ ಕಲ್ಲಡ್ಕ ಶಾಲೆಯ ಮಕ್ಕಳ ಅನ್ನ ಕಸಿದಿಲ್ಲಿ ಬದಲಿಗೆ ಕಲ್ಲಡ್ಕ ಪ್ರಭಾಕರ ಭಟ್ಟ ಹೊಟ್ಟೆಯ ಮೇಲೆ ಹೊಡೆದಿದೆ ಎಂದು ಅವರು ವ್ಯಂಗ್ಯವಾಡಿದರು .
Click this button or press Ctrl+G to toggle between Kannada and English