ಮಂಗಳೂರು : ನಗರದ ಉರ್ವ ಚರ್ಚ್ನ ಹಿಂದಿನ ಪಾದ್ರಿ ಫಾದರ್ ವಿಕ್ಟರ್ ಡಿಮೆಲ್ಲೋ ಮೇಲೆ ಮಹಿಳೆಯೊಬ್ಬರು ಮೃತಪಟ್ಟ ನಂತರ ಆಕೆಯ ಶವದ ಹೆಬ್ಬೆಟಿನ ಸಹಿ ಪಡೆದು ನಕಲಿ ಉಯಿಲು ಸಿದ್ದಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಅನ್ನಿ ಪಾಯಸ್ ಎಂಬುವವರು 2010 ಜು.31ರಂದು ಮೃತರಾಗಿದ್ದು, ಅವರ ಶವದ ಹೆಬ್ಬೆರಳಿನ ಗುರುತನ್ನು ಪಡೆದು ನಕಲಿ ಪ್ರಮಾಣ ಪತ್ರ ತಯಾರಿಸಿ ಅವರ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಡ್ರಾ ಮಾಡಿ ವಂಚಿಸಿದ ಆರೋಪ ಪಾದ್ರಿ ಮೇಲಿದೆ. 2008ರ ಫೆಬ್ರವರಿ 4ರಂದು ಮೃತ ಅನ್ನಿಪಾಯಸ್ ಉಯಿಲು ಪತ್ರವೊಂದನ್ನು ಬರೆಸಿ ಇದಕ್ಕೆ ಸಹಿ ಮಾಡಿದ್ದರು. ಇದಕ್ಕೆ ಪತ್ರ ಬರಹಗಾರ ಸಿ.ಟಿ.ಜೆ ಗೊನ್ಸಾಲ್ವೇಸ್, ನೋಟರಿ ಕ್ಲಿಯರೆನ್ಸ್ ಪಾಯಸ್ ಮತ್ತು ಉಯಿಲಿನ ಅನುಷ್ಠಾನ ಅಧಿಕಾರಿಯಾಗಿ ನೇಮಕವಾಗಿದ್ದ ಜೋಸೆಫ್ ಡಿ’ಸೋಜ ಈ ಪತ್ರಕ್ಕೆ ಸಹಿ ಮಾಡಿದ್ದರು.
ಈ ಉಯಿಲಿನಲ್ಲಿ ಎಲ್ಲಾ ಸ್ಥಿರಾಸ್ತಿಗಳನ್ನು ತಮ್ಮ ಸಂಬಂಧಿಕರಿಗೆ ಹಂಚಿಕೆ ಮಾಡಿ ಅವುಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುವುದಾಗಿ ಅದರಲ್ಲಿ ಷರತ್ತುಗಳನ್ನು ವಿಧಿಸಿದ್ದರು. ತಮ್ಮ ಬ್ಯಾಂಕ್ ಖಾತೆಗಳಲ್ಲಿ ಇದ್ದ ಹಣದ ವಿನಿಯೋಗದ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಿ ಎಲ್ಲಾ ಪತ್ರಗಳಿಗೂ ಸ್ವತಃ ಅನ್ನಿ ಪಾಯಸ್ ಸಹಿ ಮಾಡಿದ್ದರು. ಆದರೆ ಅನ್ನಿ ಪಾಯಸ್ ಮೃತರಾದ ಬಳಿಕ ಶವದ ಹೆಬ್ಬೆಟಿನ ಸಹಿ ಪಡೆದು ನಕಲಿ ಉಯಿಲು ತಯಾರಿಸಲಾಗಿದೆ ಎಂದು ಅನ್ನಿ ಪಾಯಸ್ ಸಂಬಂಧಿ ವಿನ್ನಿ ಪಿಂಟೋ ಎಂಬುವವರು ಜೂನ್ 14ರಂದು ದೂರು ನೀಡಿದ್ದಾರೆ.
ಸದ್ಯ ಪಾದ್ರಿ ವಿಕ್ಟರ್ ಡಿಮೆಲ್ಲೋ ಸೇರಿ 4 ಜನರ ವಿರುದ್ದ ಜೂ.4ರಂದು ಎಫ್ಐಆರ್ ದಾಖಲಾಗಿದೆ. ಮೃತ ಅನ್ನಿಪಾಯಸ್ ಸ್ನೇಹಿತೆ ಐರಿನ್ ಲೋಬೊ ಅವರು ಅನ್ನಿ ಪಾಯಸ್ ಖಾತೆಯಿಂದ ಪಾದ್ರಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ. ಉಳಿದಂತೆ ಉರ್ವ ಚರ್ಚ್ ಮಂಡಳಿಯ ಆಗಿನ ಉಪಾಧ್ಯಕ್ಷ ಕೆವಿನ್ ಅಜಯ್ ಮಾರ್ಟಿಸ್ ಮತ್ತು ಪಾದ್ರಿ ಸಂಬಂಧಿ ಅದೇ ಚರ್ಚ್ನ ಹಿಂದಿನ ಕಾರ್ಯದರ್ಶಿ ಜೆನೆವಿನ್ ಬಿ. ಮಥಾಯಿಸ್ ಎಂಬುವವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಸದ್ಯ ಕಿನ್ನಿಗೋಳಿ ಸಮೀಪದ ಕಿರೇಮ್ ಎಂಬಲ್ಲಿಯ ಚರ್ಚ್ನಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Click this button or press Ctrl+G to toggle between Kannada and English