ಮಂಗಳೂರು:ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ದ್ವಿ ಚಕ್ರ ವಾಹನವೊಂದು ರಸ್ತೆ ವಿಭಜಕಕ್ಕೆ ಢಿಕ್ಕಿಯಾದ ಪರಿಣಾಮ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಪುತ್ತೂರು ನಗರದ ದರ್ಬೆ ಎಂಬಲ್ಲಿ ನಡೆದಿದೆ.
ಇಲ್ಲಿನ ಕೂರ್ನಡ್ಕ ನಿವಾಸಿ, ನಗರದ ಸಿಟಿ ಬಝಾರ್ ಅಂಗಡಿಯ ಮಾಲಕ ಹಸೈನಾರ್ ಹಾಜಿ ಎಂಬವರ ಪುತ್ರಿ ಮರಿಯಮ್ ಸಮ್ರೀನಾ (18) ಮೃತರು ಎಂದು ಗುರುತಿಸಲಾಗಿದೆ.
ಮರಿಯಮ್ ಅವರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಕಾಲೇಜಿಗೆ ತೆರಳಲೆಂದು ಮನೆಯಿಂದ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತ ಮರಿಯಮ್ ಜ್ವರದಿಂದ ಬಳಲುತಿದ್ದರು ಎನ್ನಲಾಗಿದ್ದು, ಅನಾರೋಗ್ಯದ ನಡುವೆಯೂ ತನ್ನ ದ್ವಿ ಚಕ್ರ ವಾಹನದಲ್ಲಿ ಕಾಲೇಜಿಗೆ ಹೊರಟಿದ್ದರು.
ಪ್ರತಿದಿನ ಸ್ಕೂಟರ್ ಅನ್ನು ಪುತ್ತೂರು ಬಸ್ ನಿಲ್ದಾಣದ ಸಮೀಪ ನಿಲ್ಲಿಸಿ ಬಳಿಕ ಬಸ್ ನಲ್ಲಿ ಕಾಲೇಜಿಗೆ ತೆರಳುತಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English