ಮೂಡಬಿದಿರೆ : ವಾರಗಳ ಹಿಂದೆ ಮಂಗಳೂರಿನಲ್ಲಿ ಲವ್ ಜಿಹಾದ್ ಎಂಬ ಗುಲ್ಲು ಎಬ್ಬಿಸಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮೂಡಬಿದಿರೆಯ ಧರೆಗುಡ್ಡೆ ನಿವಾಸಿ ವಧು ಇದೀಗ ಜೈಲು ಪಾಲಾಗಿದ್ದಾಳೆ.
ಮದುವೆಗೆ ಎರಡು ದಿನ ಇರುವಾಗಲೇ ಅನ್ಯಕೋಮಿನ ಯುವಕನ ಜೊತೆಗೆ ಆಕೆ ಪರಾರಿಯಾಗಿದ್ದಳು. ಮಂಗಳೂರಿನ ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಜೋಡಿಯನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದರು.
ಬಳಿಕ ಮಂಗಳೂರಿಗೆ ಕರೆತಂದಿದ್ದು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ವಧು, ತಮ್ಮ ಮನೆಯವರಿಗೆ ಆಹಾರದಲ್ಲಿ ಅಮಲು ಪದಾರ್ಥ ನೀಡಿ ನಾಪತ್ತೆಯಾಗಿದ್ದಳು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಆಕೆಯ ತಾಯಿ ದೂರು ದಾಖಲಿಸಿದ್ದರು.
ಅದರಂತೆ ಪ್ರಕರಣ ದಾಖಲಾಗಿದ್ದು ಕೋರ್ಟ್ ಯುವತಿಗೆ ಡಿಸೆಂಬರ್ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಮದುವೆಯಾಗಿ ಗಂಡನ ಮನೆ ಸೇರಬೇಕಿದ್ದ ಯುವತಿ ಈಗ ಜೈಲು ಸೇರಿದ್ದಾಳೆ.
ಆದರೆ ಆಕೆಯನ್ನು ಕರೆದೊಯ್ದಿದ್ದ ಪ್ರಿಯಕರ ಫರಂಗಿಪೇಟೆಯ ಹೈದರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಿಂದು ಸಂಘಟನೆಗಳು ಯುವತಿ ನಾಪತ್ತೆ ವಿಚಾರವನ್ನು ಲವ್ ಜಿಹಾದ್ ಅಂತಾ ಆರೋಪಿಸಿ ಪ್ರತಿಭಟನೆ ನಡೆಸಿದ್ದವು.
ಡಿಸೆಂಬರ್ 11 ಕ್ಕೆ ಈ ಯುವತಿ ಮದುವೆ ಕುಂದಾಪುರ ಮೂಲದ ಯುವಕನ ಜೊತೆ ನಿಗದಿಯಾಗಿತ್ತು. ಆದರೆ ಎರಡು ದಿನ ಮುನ್ನ ಡಿಸೆಂಬರ್ 9ರಂದು ನಡೆದ ಮೆಹಂದಿ ಶಾಸ್ತ್ರದ ರಾತ್ರಿ ಯುವತಿ ನಾಪತ್ತೆಯಾಗಿದ್ದು ಸಾಕಷ್ಟು ಚರ್ಚೆಗೀಡು ಮಾಡಿತ್ತು. ಇದೊಂದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು.
Click this button or press Ctrl+G to toggle between Kannada and English