1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ: ಸಿಎಂ ಘೋಷಣೆ

3:33 PM, Wednesday, January 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

siddaramaihಬೆಂಗಳೂರು: ಜ್ಞಾನ ಮತ್ತು ಪ್ರತಿಭೆ ಯಾರ ಸ್ವತ್ತು ಅಲ್ಲ. ಅದು ಹುಟ್ಟಿನಿಂದಲೇ ಬರಬೇಕು. ನೀವು ಭವಿಷ್ಯದ ಪ್ರಜೆಗಳಾಗಬೇಕು ಎನ್ನುವುದು ‌ನನ್ನಾಸೆ. ನೀವೆಲ್ಲರೂ ಈ ಲ್ಯಾಪ್ ಟಾಪ್ ಸೌಲಭ್ಯವನ್ನು ಸದಪಯೋಗ ಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ನಡೆದ ಉಚಿತ ಲ್ಯಾಪ್ ಟಾಪ್ ವಿತರಣಾ ಸಮಾರಂಭದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 2016-17ನೇ ಸಾಲಿನ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಿಎಂ‌ ಸಿದ್ದರಾಮಯ್ಯ ಲ್ಯಾಪ್ ಟಾಪ್ ವಿತರಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 31,742 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ/ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಸಲಾಗಿದೆ. ಇನ್ನೂ 1.5 ಲಕ್ಷ ವಿದ್ಯಾರ್ಥಿಗಳಿಗೆ ಕೂಡ ಲ್ಯಾಪ್‌ ಟಾಪ್‌ ವಿತರಿಸಲಾಗುವುದು ಎಂದು‌ ಘೋಷಿಸಿದರು.

ಬಡ ವರ್ಗದ ಮಕ್ಕಳಿಗೆ ಅನುಕೂಲ ಆಗಲಿ ಎಂದು ಬಜೆಟ್‌ನಲ್ಲಿ ಲ್ಯಾಪ್ ಟಾಪ್ ನೀಡುವುದಾಗಿ ಘೋಷಣೆ ಮಾಡಿದ್ದೆವು. ಅದರಂತೆ ಈಗ ಲ್ಯಾಪ್ ‌ಟಾಪ್ ವಿತರಿಸಲಾಗುತ್ತಿದೆ ಎಂದರು.

ಲ್ಯಾಪ್‌ಟ್ಯಾಪ್‌ನಲ್ಲಿರುವ ಸೌಲಭ್ಯಗಳ ಬಗ್ಗೆ ವಿವರಿಸಿದ ಸಿಎಂ ಸಿದ್ದರಾಮಯ್ಯ, ಲ್ಯಾಪ್‌ಟಾಪ್ ವಿತರಣೆಯಿಂದ ವಿದ್ಯಾರ್ಥಿಗಳಿಗೆ ಖುಷಿ‌ಯಾಗಿದೆ. ಇದರ ಬಳಕೆಯಿಂದ ಹೆಚ್ಚು ಅಂಕ ಗಳಿಸಬೇಕು ಎಂದು ಕಿವಿಮಾತು ಹೇಳಿದರು.

ನಂತರ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ಲ್ಯಾಪ್‌ಟಾಪ್ ವಿತರಣೆ ಈ ಹಿಂದೆಯೇ ಆಗಬೇಕಿತ್ತು. ಪ್ರತಿಪಕ್ಷದವರು ಎಲ್ಲದರಲ್ಲೂ ರಾಜಕೀಯ ಮಾಡಿದ್ದರಿಂದ ತಡವಾಯಿತು. ಈಗಾಗಲೇ 1.5 ಲಕ್ಷದಷ್ಟು ಪ್ರಮಾಣದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಘೋಷಣೆಯನ್ನು ಸಿಎಂ ಮಾಡಿದ್ದಾರೆ. ಏಸರ್ ಲ್ಯಾಪ್‌ಟಾಪ್ ಮಾರುಕಟ್ಟೆ ಬೆಲೆ 21 ಸಾವಿರ ರೂ.ಇದೆ. ಆದೇ ಮಾದರಿಯ ಲ್ಯಾಪ್‌ಟಾಪ್ 14,500 ಕ್ಕೆ ವಿತರಣೆ ಮಾಡುತ್ತಿದ್ದೇವೆ. ನಮ್ಮದು ವಿದ್ಯಾರ್ಥಿಗಳ ಪರವಾದ ಸರ್ಕಾರ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬಸವರಾಜ‌ ರಾಯರೆಡ್ಡಿ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಹೆಚ್ ಆಂಜನೇಯ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಸುಧಾಕರ್, ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English