ನನ್ನ ಆತ್ಮಕತೆಯಲ್ಲಿ ಸುಳ್ಳಿಲ್ಲ… ಜನಾರ್ದನ ಪೂಜಾರಿ

12:47 PM, Wednesday, February 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

janardhan-poojaryಮಂಗಳೂರು: ನನ್ನ ಆತ್ಮಕತೆಯಲ್ಲಿ ಸುಳ್ಳಿಲ್ಲ. ಇದಕ್ಕಾಗಿಯೇ ನಾರಾಯಣ ಗುರು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಹಾಗೂ ಸರ್ವ ದೇವರ ಕಾಲಿಗೆ ಸಮರ್ಪಿಸಿ ಅದನ್ನು ಬಿಡುಗಡೆ ಮಾಡಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನಲ್ಲಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಹೇಳಿದ್ದಾರೆ.

ಜನಾರ್ದನ ಪೂಜಾರಿ ಅವರ ಆತ್ಮಕತೆ `ಸಾಲಮೇಳದ ಸಂಗ್ರಾಮ’ದ ಮರು ಮುದ್ರಿತ ಕೃತಿಯ ಅನಾವರಣ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲೂ ಜನಾರ್ದನ ಪೂಜಾರಿ ಅವರು, ಸಚಿವ ರಮಾನಾಥ ರೈ ವಿರುದ್ಧ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು. `ಜಿಲ್ಲೆಯ ದೊಡ್ಡ ವ್ಯಕ್ತಿಯೊಬ್ಬರು ನನ್ನನ್ನು ಹೀನಾಯವಾಗಿ ಬೈದರು. ಇದನ್ನು ಎಲ್ಲರೂ ನನ್ನ ಬಳಿ ಹೇಳಿದರು. ಅದು ಹೌದೋ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ ಬಳಿ ಕೇಳಿದೆ.

ಹೌದು ಎಂದರು. ಹಿಂದೆ ಅದೇ ಮನುಷ್ಯನಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿದ್ದೆ. ಇತ್ತೀಚೆಗೆ ಅವರಿಗೆ ಕ್ಷೇತ್ರದಲ್ಲಿ ನಿಂತು ಆಶೀರ್ವಾದ ಮಾಡಿದೆ. ಇದರಿಂದ ಹರಿಕೃಷ್ಣ ಬಂಟ್ವಾಳ್‌ಗೆ ಬಹಳ ಕೋಪ ಬಂತು. ಈ ರೀತಿ ಮಾಡೋದು ಸರಿಯಾ ಎಂದು ಕೇಳಿದರು. ಆದರೆ ನಾನು ಅವರ ಹಾಗೆ ಅಲ್ಲ’ ಎಂದರು.

ಬಳಿಕ ಮಾಜಿ ಸಚಿವೆ ಸುಮಾ ವಸಂತ್ ಬಗ್ಗೆಯೂ ವಾಗ್ದಾಳಿ ಮಾಡಿದರು. ಸುಮಾ ವಸಂತ್‌ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದಕ್ಕೆ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾ ವಸಂತ್ ಅವರು ಶಿವರಾತ್ರಿ ಸಂದರ್ಭ ದೇವಾಲಯಕ್ಕೆ ಬಂದು ಜಾಗರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬಂದಿಲ್ಲ. ಈ ಹಿಂದೆ ದೆಹಲಿ ಮಟ್ಟದಲ್ಲಿ ಮಾತನಾಡಿ, ಅವರನ್ನು ಮಂತ್ರಿಯನ್ನಾಗಿ ಮಾಡಿದೆ. ಏಕೆಂದರೆ ಅವರು ಕುದ್ರೋಳಿ ದೇವರ ಭಕ್ತೆ ಎಂಬ ಕಾರಣಕ್ಕೆ. ಅಧಿಕಾರ ಸಿಕ್ಕಿದ ಬಳಿಕ ದೇವರನ್ನು ಮರೆಯಬಾರದು. ಅಧಿಕಾರ ನಿಮ್ಮಿಂದಾಗಿ ಬಂದಿದ್ದಲ್ಲ. ದೇವರು ನೀಡಿದ್ದು ಎಂಬುದು ನೆನಪಿರಲಿ ಎಂದರು.

ಪೂಜಾರಿಯವರು ಭಾಷಣ ಆರಂಭ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವಾಲಯ ಪಕ್ಕದ ಮಸೀದಿಯಿಂದ ನಮಾಜ್ ಭಾಂಗ್ ಕೇಳಿ ಬಂತು. ಕೂಡಲೇ ಮಾತು ನಿಲ್ಲಿಸಿದ ಪೂಜಾರಿ, ಭಾಂಗ್ ಮುಗಿಯುವವರೆಗೂ ಮೌನ ವಹಿಸಿದ್ದರು. ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಜಾತಿ, ಧರ್ಮಗಳ ಜನರ ನಡುವೆ ಕುದ್ರೋಳಿ ಗೋಕರ್ಣನಾಥ ದೇವಾಲಯವಿದೆ.

ಈ ದೇವಾಲಯ ಸ್ಥಾಪನೆ ಮಾಡಿದ ನಾರಾಯಣ ಗುರುಗಳು ಎಲ್ಲ ಧರ್ಮಗಳಿಗೆ ಭಕ್ತಿಪೂರ್ವಕ ಗೌರವ ನೀಡಿದವರು. ಅವರ ಸಂದೇಶವೂ ಅದೇ ಆಗಿತ್ತು. ನಮ್ಮ ದೇಶ ನಡೆದು ಬಂದ ಸಂಸ್ಕೃತಿ ಅದು. ಅವರ ತತ್ವಗಳನ್ನು ಬಿಲ್ಲವರು ಸೇರಿದಂತೆ ಎಲ್ಲರೂ ಪಾಲನೆ ಮಾಡಬೇಕು. ಪ್ರಾಣ ಹೋದರೂ ಬೇರೆ ಜಾತಿ, ಧರ್ಮದವರಿಗೆ ನೋವುಂಟು ಮಾಡಲ್ಲ ಎಂಬ ಶಪಥವನ್ನು ಹಿಂದೆಯೂ ನಮ್ಮ ಸಮಾಜ, ನಮ್ಮ ಜಾತಿಯವರು (ಬಿಲ್ಲವರು) ಮಾಡಿದ್ದರು. ಇನ್ನು ಮುಂದೆಯೂ ಮಾಡಬೇಕು” ಎಂದು ಹೇಳಿದರು.

ಜನವರಿ 26ರಂದು ಪೂಜಾರಿಯವರ ಆತ್ಮಕತೆ ಬಿಡುಗಡೆಯಾದಾಗ ಗಂಟೆಯೊಳಗೆ ಒಂದು ಸಾವಿರ ಪ್ರತಿ ಮಾರಾಟವಾಗಿದ್ದವು. ಮರುಮುದ್ರಣಕ್ಕೆ ಭಾರೀ ಬೇಡಿಕೆ ಬಂದಿದ್ದರಿಂದ ಎರಡನೆ ಆವೃತ್ತಿಯಲ್ಲಿ ಐದು ಸಾವಿರ ಪ್ರತಿಗಳನ್ನು ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English