ಮಂಗಳೂರು : ಮಂಗಳೂರನ್ನು ಕರ್ನಾಟಕದ 2ನೇ ಮುಖ್ಯ ನಗರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.
ಬೆಂದೂರ್ವೆಲ್ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜ್ಯೂಬಿಲಿ ಆಡಿಟೋರಿಯಮ್ನಲ್ಲಿ ಮಂಗಳವಾರ ನಡೆದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ ಸಹಿತ ಹಲವಾರು ಯೋಜನೆಗಳು ಮಂಜೂ ರಾಗಿದೆ. ನಗರದಲ್ಲಿ ಸುಮಾರು 2,500 ಕೋಟಿ ರೂ. ಯೋಜನೆಗಳು ಅನುಷ್ಠಾನಕ್ಕೆ ಬಾಕಿ ಇವೆ ಎಂದು ತಿಳಿಸಿದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ಈಗಾಗಲೇ ನಗರದ ಉರ್ವಸ್ಟೋರ್ ಮತ್ತು ನೆಹರೂ ಮೈದಾನ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ್ದೇವೆ. ಕಾವೂರು ಮತ್ತು ಸುರತ್ಕಲ್ನಲ್ಲಿಯೂ ಇದೇ ದಿನ ಉದ್ಘಾಟನೆಯಾಗಬೇಕಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಪಂಪ್ವೆಲ್ ಅಥವಾ ಕಂಕನಾಡಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತದೆ ಎಂದರು.
ಮೇಯರ್ ಆಗಿ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ನಗರದ ಮಂದಿಗೆ ಏನೇನು ಭರವಸೆ ನೀಡಿದ್ದೇನೆಯೋ, ಅದನ್ನು ಈಡೇರಿಸುವಲ್ಲಿ ಸರ್ವ ಪ್ರಯತ್ನ ಮಾಡಿದ್ದೇನೆ ಎಂದರು.
ಉಪಮೇಯರ್ ರಜನೀಶ್ ಕಾಪಿಕಾಡ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಬಲ್ಲಾಳ್, ಪಾಲಿಕೆ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಪಟ್ಟಣ ಯೋಜನೆ, ಸುಧಾರಣೆ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಲೆಕ್ಕ ಪತ್ರ ಸ್ಥಾಯೀ ಸಮಿತಿಯ ಸಬಿತಾ ಮಿಸ್ಕಿತ್, ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಕೆ ನಾಗವೇಣಿ, ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್ ಪಾಲ್ಗೊಂಡಿದ್ದರು.
ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೇಶದಲ್ಲೇ ವಾಸ್ತವ್ಯಕ್ಕೆ ಯೋಗ್ಯವಾದ ನಗರಗಳ ಪೈಕಿ ಮಂಗಳೂರಿಗೆ ಪ್ರಥಮ ಸ್ಥಾನವಿದೆ. ಏಷ್ಯಾದಲ್ಲಿ ಎರಡನೇ ಸ್ಥಾನವಿದ್ದು, ವಿಶ್ವದಲ್ಲಿ 11ನೇ ಸ್ಥಾನವನ್ನು ಪಡೆದಿದೆ. ವಾಸ್ತವ್ಯಕ್ಕೆ ಯೋಗ್ಯವಾದ ನಗರವಾಗಬೇಕಾದರೆ ಮೂಲ ಸೌಕರ್ಯದ ಜತೆಗೆ ಜನರ ಚಿಂತನೆ ಕೂಡ ಅತೀ ಮುಖ್ಯವಾದುದು.
Click this button or press Ctrl+G to toggle between Kannada and English