ಪಬ್ ದಾಳಿ ಆರೋಪಿಗಳ ಖುಲಾಸೆಯಲ್ಲಿ ಕಾಂಗ್ರೆಸ್‌ನದ್ದೂ ತಪ್ಪಿದೆ: ಪ್ರಕಾಶ್ ರೈ

1:54 PM, Wednesday, March 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

prakash-raiಮಂಗಳೂರು: ಪಬ್ ದಾಳಿ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ ಆಗುವಲ್ಲಿ ಕಾಂಗ್ರೆಸ್‌ ಪಕ್ಷದ್ದೂ ತಪ್ಪಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಮಂಗಳೂರು ಪ್ರೆಸ್ ಕ್ಲಬ್ ಬುಧವಾರ ಆಯೋಜಿಸಿರುವ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸರು ತಪ್ಪು ಮಾಡಿರಬಹುದು. ಕೋಮುವಾದದ ವಿರುದ್ಧ ಇದ್ದೇನೆ ಎಂದು ಹೇಳಿಕೊಂಡ ಕಾಂಗ್ರೆಸ್ ಈ ಪ್ರಕರಣದ ತನಿಖೆ ಕುರಿತು ಎಚ್ಚರ ವಹಿಸಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ನಾನು ಯಾವ ಪಕ್ಷದ ಪರವೂ ಇರುವುದಿಲ್ಲ. ಆದರೆ, ಬಿಜೆಪಿ ಮತ್ತು ಅದರ ಕೋಮುವಾದಿ ರಾಜಕೀಯವನ್ನು ವಿರೋಧಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಚಿಹ್ನೆಗಿಂತ ಅಭ್ಯರ್ಥಿಗಳ ಮುಖಕ್ಕೆ ಪ್ರಾಧಾನ್ಯತೆ ದೊರೆಯಬೇಕು. ನಾನು ಚುನಾವಣಾ ರಾಜಕೀಯ ಪ್ರವೇಶಿಸುವುದಿಲ್ಲ. ಪ್ರಶ್ನಿಸುವ ರಾಜಕೀಯದಲ್ಲಿ ಮಾತ್ರ ಇರುತ್ತೇನೆ. ಕರ್ನಾಟಕದ ಉದ್ದಗಲಕ್ಕೆ ‘Just asking’ ಅಭಿಯಾನ ಕಟ್ಟುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದರು.

ಇಂದು ಹೋರಾಟಗಾರರು ಚೆಲ್ಲಾಪಿಲ್ಲಿ ಆಗಿದ್ದಾರೆ. ವ್ಯಕ್ತಿಗತ ಗುರುತು ಉಳಿಸಿಕೊಂಡು ಅವರೆಲ್ಲ ಒಗ್ಗೂಡಬೇಕು. ಮಹಾರಾಷ್ಟ್ರದ ರೈತ ಹೋರಾಟ ನಮಗೆ ಮಾದರಿ ಆಗಬೇಕು. ಯಾವುದೇ ಪಕ್ಷವೂ ಅಧಿಕಾರ ಹಿಡಿದ ಬಳಿಕ ಪಕ್ಷವಾಗಿ ಕೆಲಸ ಮಾಡಬಾರದು. ಅದು ಸರ್ಕಾರ ಆಗಬೇಕು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನನ್ನನ್ನು ಬಹುವಾಗಿ ಕಾಡಿತು. ಕೊಲೆಯನ್ನು ಸಂಭ್ರಮಿಸುವ ಜನರ ಕಂಡು ಆತಂಕವಾಯಿತು. ಆ ಘಟನೆ ನಡೆಯದೇ ಇದ್ದರೆ ನಾನು ಇಷ್ಟು ಸಕ್ರಿಯವಾಗಿ ಇರುತ್ತಿರಲಿಲ್ಲವೇನೋ ಎಂದು ಅವರು ಹೇಳಿದರು.

ಕೊಲೆ‌ ಪಾತಕಿಯನ್ನು ಬಂಧಿಸಿದರೆ ಸಾಲದು. ಅದಕ್ಕೆ ಕಾರಣವಾದ ಸಿದ್ಧಾಂತದ ಗುರುತು ಹಿಡಿಯಬೇಕು. ಅದನ್ನು ನಿಯಂತ್ರಣ ಮಾಡಬೇಕು ಎಂದು ಪ್ರಕಾಶ್ ರೈ ಹೇಳಿದರು.

‘ಮಂಗಳೂರಿನಲ್ಲಿ ನನ್ನನ್ನು ಹಿಂಬಾಲಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ನಾನು ಇಲ್ಲಿಗೆ ಬರುವಾಗಲೆಲ್ಲ ಕೆಲವರು ವಿಮಾನ ನಿಲ್ದಾಣದ ಬಳಿ ಬಂದು ವಿಚಾರಿಸಿ ಹೋಗುತ್ತಿದ್ದಾರೆ. ನನ್ನ ಚಾಲಕನ ಬಳಿ ಬಂದು ಓಡಾಟದ ಬಗ್ಗೆ ಮಾಹಿತಿ ಪಡೆಯಲು ಯತ್ನಿಸುತ್ತಿದ್ದಾರೆ. ಇವೆಲ್ಲವೂ ಭಯ ಹುಟ್ಟಿಸುವ ಪ್ರಯತ್ನಗಳು. ಇಂತಹ ಬೆದರಿಕೆಗೆ ನಾನು ಹೆದರಲ್ಲ. ಹೆದರಿಸಿದಷ್ಟೂ ನನಗೆ ಹೆಚ್ಚು ಕೋಪ ಬರುತ್ತೆ’

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English