ಲೂಟಿಕೋರರು ಓಡಿ ಹೋಗುವುದು ಮೋದಿ ಸರ್ಕಾರದ ಹೊಸ ಘೋಷಣೆ: ಸುರ್ಜೇವಾಲಾ

4:58 PM, Friday, March 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

surjevalaಬೆಂಗಳೂರು: ದಿನಕ್ಕೊಂದು ಭ್ರಷ್ಟಾಚಾರ ಮತ್ತು ಲೂಟಿಕೋರರು ಓಡಿ ಹೋಗುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹೊಸ ಘೋಷಣೆ ಎಂದು ಎಐಸಿಸಿ ಮಾಧ್ಯಮ ಮತ್ತು ಕಮ್ಯೂನಿಕಷೇನ್ ವಿಭಾಗದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬ್ಯಾಂಕ್‌‌‌ಗಳಲ್ಲಿರುವ ಸಾರ್ವಜನಿಕರ ಹಣವನ್ನು ಉದ್ಯಮಿಗಳು, ಬಂಡವಾಳ ಶಾಹಿಗಳು ಲೂಟಿ ಮಾಡಲು ಸಹಕರಿಸಿದ ಆರೋಪ ಎದುರಿಸುತ್ತಿದೆ. ಇತ್ತೀಚೆಗೆ 11 ಬ್ಯಾಂಕ್‌‌‌ಗಳಿಂದ 61,036ಕೋಟಿ ರೂ. ಹಗರಣ ನಡೆದಿದೆ ಎಂದು ದೂರಿದರು.

11 ಬ್ಯಾಂಕ್‌‌ಗಳ ಹಗರಣದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ಆಂತರಿಕ ಹಾಗೂ ಬಾಹ್ಯ ಬ್ಯಾಂಕ್ ಆಡಿಟ್, ಆರ್‌‌‌ಬಿಐ ಆಡಿಟ್ ಸೇರಿ ನಾಲ್ಕು ಹಂತದ ಲೆಕ್ಕ ಪರಿಶೋಧನೆಯಲ್ಲೂ ಕಣ್ಣು ತಪ್ಪಿಸಿ ಲೆಟರ್ ಆಫ್ ಅಂಡರ್ ಟೇಕಿಂಗ್‌‌ನ್ನು ನಕಲಿ ಮಾಡುವ ಮೂಲಕ ಬ್ಯಾಂಕ್ ಹಣವನ್ನು ವಿಜಯಮಲ್ಯ, ಲಲಿತ್ ಮೋದಿ, ಚೋಟಾ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಚತಿನ್ ಮೆಹತಾ ಕೊಳ್ಳೆ ಹೊಡೆದಿದ್ದಾರೆ. ಪ್ರತಿ ದಿನ ಬ್ಯಾಂಕ್ ವಂಚನೆ ಪ್ರಕರಣಗಳು ಬಯಲಿಗೆ ಬರುತ್ತಲೇ ಇವೆ. ದೇಶದ ಜನ ಬ್ಯಾಂಕ್‌‌ನಲ್ಲಿ ಹಣ ಇಟ್ಟರೆ ಸುರಕ್ಷಿತ ಎಂಬ ನಂಬಿಕೆ ರೂಢಿಸಿಕೊಂಡಿದ್ದರು. ಆದರೆ, ಮೋದಿ ಆಡಳಿತದಲ್ಲಿ ಅದು ಹುಸಿಯಾಗುತ್ತಿದೆ ಎಂದು ಆರೋಪಿಸಿದರು.

ಬ್ಯಾಂಕ್ ಆಫ್ ಬರೋಡಾದಲ್ಲಿ 6400 ಕೋಟಿ ರೂ, ವಿಜಯ್ ಮಲ್ಯ 9000 ಕೋಟಿ ರೂ., ನೀಮೊ-ಚೌಕ್ಸಿ ಬ್ಯಾಂಕ್‌‌ನಲ್ಲಿ 23,484 ಕೋಟಿ ರೂ., ಮೆಹುಲ್ ಚೋಕ್ಸಿ ಜನ್‌ಧನ್ ಯೋಜನೆಯಲ್ಲಿ 5000 ಕೋಟಿ ರೂ., ರೋಟಮ್ಯಾಕ್ ಬ್ಯಾಂಕ್‌‌ಗೆ ವಿಕ್ರಮ್ ಕೊಠಾರಿ ಅವರಿಂದ 3695 ಕೋಟಿ ರೂ., ದ್ವಾರಕದಾಸ್ ಜ್ಯೂವೆಲರ್ಸ್ ಬ್ಯಾಂಕ್ 390 ಕೋಟಿ ರೂ., ಕೆನರಾ ಬ್ಯಾಂಕ್ 515ಕೋಟಿ ರೂ., ವಿನ್‌ಸಮ್ ಬ್ಯಾಂಕ್‌‌ಗೆ 6712 ಕೋಟಿ ರೂ., ಯೂನಿಯನ್ ಬ್ಯಾಂಕ್‌‌ಗೆ 1395 ಕೋಟಿ ರೂ., ಕನಿಷ್ಕಾ ಗೋಲ್ಡ್ ಜ್ಯೂವೆಲರಿಯಿಂದ 824 ಕೋಟಿ ರೂ., ಐಡಿಬಿಐ ಬ್ಯಾಂಕ್‌‌ಗೆ 772 ಕೋಟಿ ರೂ., ಐಸಿಐಸಿಐ ಬ್ಯಾಂಕ್‌‌‌ಗೆ 2890 ಕೋಟಿ ರೂ. ಸೇರಿ ಒಟ್ಟು 61,036 ಕೋಟಿ ವಂಚನೆಯಾಗಿದೆ ಎಂದು ಅಂಕಿ ಅಂಶ ಸಹಿತ ಮಾಹಿತಿ ನೀಡಿದರು.

ಇನ್ನು ಮೋದಿ ಸರ್ಕಾರ ಸಾಮಾನ್ಯ ಜನರ ಜನಧನ್ ಖಾತೆಯಲ್ಲಿರುವ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ನೀಮೊ ಮತ್ತು ಚೌಕ್ಸಿ ಅವರ ಚಿನ್ನದ ಯೋಜನೆಗಳಲ್ಲಿ ತೊಡಗಿಸಲಾಗಿತ್ತು. ಕಾನ್ಪುರ್ ಆಧಾರಿತ ವಿಕ್ರಂ ಕೊಠಾರಿಯವರು ರೋಟೊಮ್ಯಾಕ್ ಬ್ಯಾಂಕ್‌‌ಗೆ 3695 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ದೆಹಲಿಯ ಆಭರಣಕಾರ ದ್ವಾರಕದಾಸ್ ಸೇತ್ ಬೇರೆ ಬೇರೆ ದೇಶಗಳಿಂದ ಎಲ್‌‌ಒಸಿಗಳನ್ನು ಖರೀದಿಸಿ ಚಿನ್ನದ ಹಣವನ್ನು ವಂಚಿಸಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಸಿಬಿಐ ಎಫ್‌‌ಐಆರ್ ದಾಖಲಿಸಲಾಗಿದೆ. ಕೋಲ್ಕತ್ತಾ ಮೂಲದ ಇನ್ಪೋಸಿಸ್ಟಮ್ ಕೆನರಾ ಬ್ಯಾಂಕ್‌‌‌ಗೆ 515 ಕೋಟಿ ರೂ. ವಂಚಿಸಿದೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English