ರಮಾನಾಥ ರೈ ಸಹೋದರ ಬೆಳ್ಳಿಪ್ಪಾಡಿ ಸತೀಶ್ ರೈ ನಿಧನ

10:47 PM, Wednesday, May 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Satish Rai

ಮಂಗಳೂರು : ರಾಜ್ಯ ಪರಿಸರ ಹಾಗೂ ಅರಣ್ಯ ಇಲಾಖೆ ಸಚಿವ ಬಿ. ರಮಾನಾಥ ರೈ ಯವರ ಹಿರಿಯ ಸಹೋದರ  ಬೆಳ್ಳಿಪ್ಪಾಡಿ  ಡಾ. ಸತೀಶ್ ರೈ (74 ವರ್ಷ) ಇವರು ಹೃದಯ ಸಂಬಂಧಿ ಖಾಯಿಲೆಯಿಂದ ಇಂದು ಸಂಜೆ  ಬೆಂಗಳೂರಿನಲ್ಲಿ ನಿಧನಹೊಂದಿದರು ಎಂದು ಅವರ ಆಪ್ತ ಮೂಲಗಳು ಮೇಗಾ ಮೀಡಿಯಾ ನ್ಯೂಸ್‌ಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆ ಉಸಿರೆಳೆದಿದ್ದಾರೆ.

ಮೈಸೂರು ನಿವಾಸಿಯಾಗಿರುವ ಡಾ. ಸತೀಶ್ ರೈ ಖ್ಯಾತ ವೈದ್ಯರಾಗಿದ್ದು, ದಿನವೊಂದಕ್ಕೆ 400 ಕ್ಕೂ ಮೇಲ್ಪಟ್ಟು ರೋಗಿಗಳು ಇವರಲ್ಲಿಗೆ ಬರುತ್ತಿದ್ದರು. ಇವರ ಕೈಗುಗುಣವನ್ನು ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರೂ ಕೊಂಡಾಡುತ್ತಾರೆ. ಡಾ. ಸತೀಶ್ ರೈ ಯಕ್ಷಗಾನ ಕಲಾವಿದರೂ ಹೌದು.  ಸಾಹಿತ್ಯ, ಸಂಗೀತ ಮತ್ತು ಕಲೆಯ ಆರಾಧಕರಾಗಿದ್ದರು.

ಅವರು ತನ್ನ ವೈದ್ಯಕೀಯ ವೃತ್ತಿಯಲ್ಲಿ ಬಡವರಿಂದ ಎಂದೂ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಡೆಂಗ್ಯೂ, ಚಿಕನ್ ಗುನ್ಯ ರೋಗಿಗಳಿಗೆ ಉಚಿತ ಚಿಕಿತ್ಸೆ ಮಾಡುತ್ತಿದ್ದರು. ಯಾರ ಚಿಕಿತ್ಸೆಗೂ ಇಂತಿಷ್ಟು ಹಣ ಎಂದು ಕೇಳುತ್ತಿರಲಿಲ್ಲ ಕೊಟ್ಟದ್ದನ್ನು ತೆಗೆದುಕೊಳ್ಳುತ್ತಿದ್ದರು.

ಬೆಳ್ಳಿಪಾಡಿ ನಾರಾಯಣ ರೈ ದಂಪತಿಗಳಿಗೆ ನಾಲ್ವರು ಮಕ್ಕಳು ಮೊದಲನೆಯವರು ರಾಜಶೇಖರ ರೈ ಕಳ್ಳಿಗೆ, ಎರಡನೆಯವರು ಡಾ. ಸತೀಶ್ ರೈ ಮೈಸೂರು, ಮೂರನೆ ಮಗಳು ಸಕಲೇಶಪುರದಲ್ಲಿದ್ದಾರೆ. ಕೊನೆಯವರು ರಮಾನಾಥ ರೈ.

ಯಕ್ಷಗಾನ ಮತ್ತು ಯಕ್ಷಗಾನ ಕಲಾವಿದರ ಉನ್ನತಿಗಾಗಿ ಯಾವುದೇ ಫಲಾಪೇಕ್ಷಯಿಲ್ಲದೆ ತನ್ನೆಲ್ಲವನ್ನೂ ಧಾರೆಯೆರೆದ ಉದಾತ್ತ ಶ್ರೇಷ್ಠ ವ್ಯಕ್ತಿತ್ವ ಡಾ. ಸತೀಶ್ ರೈ  ಅವರದು.

ಡಾ. ಸತೀಶ್ ರೈ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ಕ್ಲಿನಿಕ್ ತೆರೆದು ವೈದ್ಯಕೀಯ ವೃತ್ತಿ ಆರಂಭಿಸಿದರು ಅದರ ಜೊತೆಗೆ ಮೈಸೂರಿನಲ್ಲಿ ಹೋಂಗಾರ್ಡ್ ಆಗಿಯೂ 25 ವರ್ಷ ಕೆಲಸ ಮಾಡಿದ್ದಾರೆ.

ಸಾಹಿತ್ಯಾಸಕ್ತಿ ಹೊಂದಿದ್ದ ಅವರು 22 ಕೃತಿಗಳನ್ನು ರಚಿಸಿದ್ದಾರೆ. ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ವೇದಿಕೆಯ ಮೂಲಕ ಯಕ್ಷಗಾನಕ್ಕೂ ಪ್ರಾಶಸ್ತ್ಯವನ್ನು ನೀಡಿ ಯಕ್ಷಗಾನವನ್ನು ಪೋಷಿಸಿದ್ದರು. ವೈದರ ತಂಡದೊಂದಿಗೆ ಆರೋಗ್ಯ ಯಜ್ಞ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಲಕ್ಷ ವೃಕ್ಷ ಯಜ್ಞ ಗಳ ಮೂಲಕ ಆರೋಗ್ಯ ಹಾಗೂ ಪರಿಸರ ಜಾಗೃತಿ ಮೂಡಿಸಿದ್ದರು. ಅದಕ್ಕಾಗಿ ಅವರಿಗೆ ಹಲವು ಪ್ರಶಸ್ತಿಗಳು ಬಂದಿದ್ದವು.

ಮೈಸೂರು ಪ್ರಾಂತ್ಯದ ಬಡವ ಹಳ್ಳಿಗರ ಅಷ್ಟೇಕೆ ಮೈಸೂರಿಗರ 2ರೂಪಾಯಿ ಡಾಕ್ಟರ್ರಪ್ಪ ಎಂದು ಹೆಸರುವಾಸಿಯಾಗಿದ್ದರು.

ಗುರುವಾರ ಬೆಳಿಗ್ಗೆ ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಅವರ ಸ್ವಗ್ರಹ ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಸತೀಶ್ ರೈ ಪತ್ನಿ ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English