ಮಂಗಳೂರು: ಹೇಗಾದರೂ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ನೀಚ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಬಿಜೈ ಮದರಸಾದ ಅಮಾಯಕ ಮೌಲವಿ ಹತ್ಯೆಯ ಪ್ರಧಾನ ಆರೋಪಿಗಳಾಗಿದ್ದ ಹಿಂದೂತ್ವ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿದ್ದ ಟಿಕ್ಕಿ ರವಿ, ಪದ್ದು ಮೊದಲಾದವರನ್ನು ಮಂಗಳೂರು ಉತ್ತರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಕ್ಷದ ಧ್ವಜ ನೀಡಿ, ಶಾಲು ಹೊದಿಸಿ ವೇದಿಕೆಯ ಮೇಲೆ ಬಿಗಿದಪ್ಪಿ ಇನ್ನಿಲ್ಲದ ಪ್ರೀತಿ ತೋರಿಸಿದ್ದಾರೆ. ಇದು ಸಮಾಜಘಾತುಕತನದ ಪರಮಾವಧಿ ಎಂದು ಮುನೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಅತ್ಯಂತ ನೀಚ ರಾಜಕಾರಣ. ಕೋಮುವಾದದ ವಿರುದ್ಧ ಮಾತನಾಡುವ, ಅಲ್ಪಸಂಖ್ಯಾತರ ರಕ್ಷಕ, ರಾಜ್ಯತೀತತೆಯ ಗುತ್ತಿಗೆ ಪಡೆದವರು ಎಂಬಂತೆ ಫೋಸ್ ನೀಡುತ್ತಿದ್ದ, ಭರ್ಜರಿ ಹೇಳಿಕೆಗಳನ್ನು ನೀಡುತ್ತಿದ್ದ ಮೊಯ್ದೀನ್ ಬಾವಾ ಅವರೇ ಈ ಹೀನಾಯ ಸ್ಥಿತಿಗೆ ಇಳಿದಿರುವುದು ಕಾಂಗ್ರೆಸ್ ನ ದುರಂತ ಎಂದು ಕಾಟಿಪಳ್ಳ ಬಣ್ಣಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ನೈಜ ಜಾತ್ಯತೀತತೆ ಉಳಿದಿದ್ದರೆ ತಕ್ಷಣ ಬಾವಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English