ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾ ಹಣಾಹಣಿ ನಡೆಯುತ್ತಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರನ್ನು ಓಲೈಸಲು ಮುಂದಾಗಿದ್ದಾರೆ.
ಇದೇ ವೇಳೆ, ಹಾಲಿ ಶಾಸಕ ವಸಂತ ಬಂಗೇರಾ ಅವರಿಗೆ ಉತ್ತಮ ಜನಬೆಂಬಲ ದೊರೆಯುತ್ತಿದೆ. ಮಾಜಿ ಸಚಿವ ಗಂಗಾಧರ ಗೌಡ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹದ ಅಲೆ ಎಬ್ಬಿಸಿದೆ. ಇನ್ನೊಂದೆಡೆ, ಮಹೇಶ್ ಶೆಟ್ಟಿ ತಿಮರೋಡಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಸ್ವಂತ ವರ್ಚಸ್ಸು ಹೊಂದಿರುವ ವಸಂತ ಬಂಗೇರಾ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಲು ನಿರ್ಧರಿಸಿವೆ. ಶಾಸಕರಾಗಿ ವಸಂತ ಬಂಗೇರ ಕೃಷಿಕರು, ರೈತರ ಬೇಡಿಕೆಗಳನ್ನು ಸದನದಲ್ಲಿ ಪ್ರಬಲವಾಗಿ ಮಂಡಿಸಿದ್ದಾರೆ. ಅಲ್ಲದೆ, ರೈತರ ಯಾವುದೇ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಿದ್ದಾರೆ ಎಂದು ರೈತ ಮುಖಂಡ ಮನೋಹರ ಶೆಟ್ಟಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರಾ ಅವರಿಗೆ ಸಿಪಿಐ, ಸಿಪಿಐಎಂ ಸೇರಿದಂತೆ ಎಡ ಪಕ್ಷಗಳೂ ಬೆಂಬಲ ನೀಡಿವೆ. ಕಳೆದ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಸಿಪಿಎಂ ಸುಮಾರು 5000 ಮತಗಳನ್ನು ಪಡೆದುಕೊಂಡಿತ್ತು. ಆದರೆ, ತನ್ನ ಆಂತರಿಕ ಸಮಸ್ಯೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಪಕ್ಷ, ವಸಂತ ಬಂಗೇರಾ ಅವರಿಗೆ ಬೆಂಬಲ ನೀಡಿದ್ದು ಮಾತ್ರವಲ್ಲ, ಅವರ ಪರವಾಗಿ ಪ್ರಚಾರಕ್ಕೂ ಇಳಿದಿದೆ. ಈ ಮೂಲಕ ಬಂಗೇರಾ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
Click this button or press Ctrl+G to toggle between Kannada and English