ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಕನ್ನಡ ಜಿಲ್ಲಾಧಿಕಾರಿ ಡಾ| ಎನ್.ಎಸ್. ಚನ್ನಪ್ಪ ಗೌಡ, ಪಶ್ಚಿಮ ವಲಯದ ಐಜಿಪಿ ಆಲೋಕ್ ಮೋಹನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹುತಾತ್ಮ ಪೊಲೀಸರಿಗೆ ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು. ಎರಡು ನಿಮಿಷ ಮೌನಾಚರಣೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ ಹುತಾತ್ಮ ಪೊಲೀಸರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸರಕಾರ ನೀಡುವ ವೇತನವನ್ನೇ ಅವಲಂಬಿಸಿ ಸಮಾಜದಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಬದುಕು ಸಾಗಿಸುವ ಪೊಲೀಸರಿಗೆ ಒದಗಿಸಲಾಗುತ್ತಿರುವ ಮೂಲಸೌಲಭ್ಯಗಳಿಂದ ಅವರೆಷ್ಟು ಸಂತುಷ್ಟರಾಗಿದ್ದಾರೆ ಎನ್ನುವ ಬಗ್ಗೆ ವಿಮರ್ಷಾತ್ಮಕ ಚಿಂತನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎನ್.ಎಸ್. ಚನ್ನಪ್ಪ ಗೌಡಹೇಳಿದರು.
ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಜನರ ಪ್ರಾಣ ಮತ್ತು ಆಸ್ತಿ-ಪಾಸ್ತಿ ರಕ್ಷಣೆಗಾಗಿ ಜಾಗೃತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಗೌರವಿಸಬೇಕು ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಗೌರವ ಅತಿಥಿಯಾಗಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್. ವಿಜಯ ಪ್ರಕಾಶ್ , ನವಮಂಗಳೂರು ಬಂದರು ಮಂಡಳಿಯ ಉಪಾಧ್ಯಕ್ಷ ಟಿ.ಎಸ್.ಎನ್. ಮೂರ್ತಿ, ರಾಜ್ಯ ಸರಕಾರದ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ 10 ಮಂದಿ ಹುತಾತ್ಮರಾಗಿದ್ದು , ದೇಶದಲ್ಲಿ ಕರ್ತವ್ಯದ ಸಂದರ್ಭದಲ್ಲಿ 636 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಪ್ರಾಣತ್ಯಾಗ ಮಾಡಿದ್ದಾರೆ ಅವರ ಹೆಸರುಗಳನ್ನು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ಅವರು ವಾಚಿಸಿದರು.
ರಾಜ್ಯದಲ್ಲಿ ಒಂದು ವರ್ಷದಲ್ಲಿ ಅವಧಿಯಲ್ಲಿ ಹುತಾತ್ಮರಾದವರು. ಎಸ್.ವಿ. ಪಾಟೀಲ್, ಚಂದ್ರಪ್ಪ ಟಿ. ಲಮಾನಿ (ಉ.ಕ.), ಮೊನ್ನಪ್ಪ (ಕೊಡಗು), ಚಂದ್ರಕಾಂತ, ತಿರುಪತಿ (ರಾಯಚೂರು), ಶಹನಾಜ್ (ಬೆಂಗಳೂರು ನಗರ), ನಾಮದೇವ ರಾಥೋಡ (ಬೀದರ), ಗಿರಿಜಾ ವಾಗೋಳ್ (ಬಾಗಲಕೋಟೆ), ಗೋಪಾಲ (ಚಾಮರಾಜನಗರ), ಕೆ. ರಾಜು (ಮೈಸೂರು). ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಮೃತಪಟ್ಟ ಮಾದೇವ ಎಸ್. ಮಾನೆ ಅವರ ಹೆಸರು ಮುಂದಿನ ವರ್ಷದ ಹುತಾತ್ಮರ ಪಟ್ಟಿಗೆ ಸೇರುತ್ತದೆ.
ಸಮಾರಂಭದಲ್ಲಿ ಡಿಸಿಪಿಗಳಾದ ಎಂ. ಮುತ್ತೂರಾಯ, ಡಿ. ಧರ್ಮಯ್ಯ ಮತ್ತು ಪಾರ ಶೆಟ್ಟಿ, ಅಡಿಶನಲ್ ಎಸ್.ಪಿ. ಪ್ರಭಾಕರ್, ಕೆಎಸ್ಆರ್ಪಿ ಕಮಾಂಡೆಂಟ್ ರಾಮದಾಸ್ ಗೌಡ, ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ನಿದರ್ಶ್ ಹೆಗ್ಡೆ ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಕಮಿಷನರೆಟ್ ಕಚೇರಿಯ ಲಿನೆಟ್ ಕ್ಯಾಸ್ಟಲಿನೊ ಕಾರ್ಯಕ್ರಮ ನಿರ್ವಹಿಸಿದರು.