ರಾಜ್ಯಪಾಲರ ನಿಲುವು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ

1:48 PM, Friday, May 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

congress-protestಮಂಗಳೂರು: ಪೂರ್ಣ ಬಹುಮತವಿಲ್ಲದ ಬಿಜೆಪಿಗೆ ಸರಕಾರ ನಡೆಸಲು ರಾಜ್ಯಪಾಲರು ಅವಕಾಶ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗುರುವಾರ ಸಂಜೆ ಮಂಗಳೂರು ಪುರಭವನ ಮುಂಭಾಗದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ಜೆ.ಆರ್‌.ಲೋಬೋ ಮಾತನಾಡಿ, ದೇಶದಲ್ಲಿ ಪ್ರಜಾ ಪ್ರಭುತ್ವ ವಿರೋಧಿ ನಿಲುವು ಹಾಗೂ ನಡವಳಿಕೆಗಳು ನಡೆಯುತ್ತಲೇ ಇವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತವಿಲ್ಲದ ಬಿಜೆಪಿ ಪಕ್ಷಕ್ಕೆ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿರುವುದು ಪ್ರಜಾ ಪ್ರಭುತ್ವದ ದುರಂತ. ರಾಜ್ಯಪಾಲ ಹುದ್ದೆಯಲ್ಲಿ ಕುಳಿತವರು ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿಹಿಡಿಯುವುದರ ಜತೆಗೆ ಗೌರವಯುತವಾಗಿ, ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು ಎಂದರು.

ರಾಜ್ಯಪಾಲರ ನಿರ್ಧಾರವನ್ನು ಖಂಡಿಸಿ ಇಂದು ಜನರು ಬೀದಿಗೆ ಬಂದು ನಿಂತಿದ್ದಾರೆ. ಬೇರೆ ರಾಜ್ಯಗಳಲ್ಲಿ ಸರಕಾರ ರಚನೆ ಸಂಬಂಧ ಯಾವ ರೀತಿಯ ನೀತಿ ನಿಯಮಗಳನ್ನು ಪಾಲಿಸಲಾಗಿದೆಯೋ ಅದೇ ನಿಲುವುಗಳನ್ನು ರಾಜ್ಯದಲ್ಲಿಯೂ ಪಾಲಿಸಬೇಕು. ಬಹುಮತ ತೋರಿಸಿದ ಪಕ್ಷಗಳಿಗೆ ಸರಕಾರ ನಡೆಸಲು ಅವಕಾಶ ನೀಡಬೇಕು. ರಾಜ್ಯದಲ್ಲಿ ಜನಾಂದೋಲನ ಆಗುವ ಮೊದಲು ರಾಜ್ಯಪಾಲರು ತನ್ನ ಈಗಿನ ನಿರ್ಧಾರವನ್ನು ಪರಾಮರ್ಶೆ ಮಾಡಬೇಕು. ರಾಜ್ಯಪಾಲರು ತನ್ನ ವ್ಯಕ್ತಿ ಮತ್ತು ಹುದ್ದೆಯ ಗೌರವ ಕಾಪಾಡಲಿ. ಇದು ಸಾಂಕೇತಿಕ ಮುಷ್ಕರ ಆಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮೇಯರ್‌ ಭಾಸ್ಕರ್‌ ಕೆ., ಉಪಮೇಯರ್‌ ಕೆ. ಮಹಮ್ಮದ್‌, ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ರಜನೀಶ್‌, ಸದಾಶಿವ ಉಳ್ಳಾಲ್‌, ಹರಿನಾಥ್‌, ವಿಶ್ವಾಸ್‌ ದಾಸ್‌, ಶಾಲೆಟ್‌ ಪಿಂಟೋ, ಅಪ್ಪಿ, ಮರಿಯಮ್ಮ ಥೋಮಸ್‌, ಅಬ್ದುಲ್‌ ಲತೀಫ್‌, ಅಬ್ದುಲ್‌ ಸಲೀಂ, ಸಂತೋಷ್‌ ಶೆಟ್ಟಿ, ಟಿ.ಕೆ. ಸುಧೀರ್‌, ಪ್ರವೀಣ್‌ ಆಳ್ವ, ನೀರಜ್‌ ಪಾಲ್‌, ಆರಿಫ್‌ ಬಾವಾ, ಮಹಮ್ಮದ್‌ ಹನೀಫ್‌, ನಝೀರ್‌ ಬಜಾಲ್‌, ವಸಂತ್‌ ಬೆರ್ನಾಡ್‌, ಉಮ್ಮರ್‌ ಫಾರೂಕ್‌ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English