ಮಂಗಳೂರು: ಮಂಗಳವಾರ ತಡರಾತ್ರಿ ತುಮಕೂರು ರಸ್ತೆಯ ನೆಲಮಂಗಲದ ತಾವರೆಕೆರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರು ಶ್ರೀನಿಧಿ ಅಸ್ರಣ್ಣ(21) ಮತ್ತು ಪ್ರಜ್ವಲ್(20)ಎನ್ನುವವರಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಇವರು ಇನ್ನಿಬ್ಬರು ಸ್ನೇಹಿತರೊಂದಿಗೆ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ನಿಟ್ಟೆಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ ಪ್ರತಿಭಾವಂತ ಹುಡುಗ ಶ್ರೀನಿಧಿ. ಯಕ್ಷಗಾನ ಕಲೆಯೂ ಸಿದ್ಧಿಸಿತ್ತು. ಚೆಂಡೆ ಬಾರಿಸುವುದರಲ್ಲಿ ಮೇಳದ ಕಲಾವಿದರಿಗೆ ಸಾಟಿಯಾಗುವಂತೆ ಇದ್ದ. ಪೂಜೆ, ಪುನಸ್ಕಾರ ಧಾರ್ಮಿಕ ವಿಧಿಗಳನ್ನು ಅಭ್ಯಾಸ ಮಾಡಿದ್ದ. ವಿನಯಶೀಲ, ಗುಣಶೀಲ, ಪ್ರತಿಭಾನ್ವಿತನಾಗಿ ವಿದ್ಯಾಭ್ಯಾಸದಲ್ಲೂ ತೀಕ್ಷ್ಣಮತಿಯಾಗಿದ್ದ ಶ್ರೀನಿಧಿ ನಿಜವಾಗಿಯೂ ಎಲ್ಲರ ಪಾಲಿನ ನಿಧಿಯಾಗಿದ್ದ. ಇಂಥ ಮಗನನ್ನು ಪ್ರೀತಿಯಿಂದ ಕಟೀಲು ಮಾತೆಯೇ ತನ್ನಡೆಗೆ ಕರೆಸಿಕೊಂಡಳೇ.
ಸ್ನೇಹಿತನನ್ನು ಮನೆಗೆ ಬಿಡಲೆಂದು ಕಾರಿನಲ್ಲಿ ತೆರಳಿದ್ದರು.ನಾಲ್ವರಿದ್ದ ಕಾರು ಲಾರಿಯೊಂದಕ್ಕೆ ಢಿಕ್ಕಿಯಾಗಿ ಬಳಿಕ ಸರಕಾರಿ ಬಸ್ಗೆ ಢಿಕ್ಕಿಯಾಗಿ ಸಂಪೂರ್ಣ ನಜ್ಜುಗುಜ್ಜಾ ಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟೀಲಿನಲ್ಲಿ ವಿಚಾರ ತಿಳಿದು ನೀರವ ಮೌನ ಆವರಿಸಿದ್ದು, ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.
Click this button or press Ctrl+G to toggle between Kannada and English