ಚಿಕ್ಕಬಳ್ಳಾಪುರ : ಇಲ್ಲಿಗೆ ಸಮೀಪದ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ ವಿಶಿಷ್ಟ ಕಾರ್ಯಕ್ರಮ ಭಾನುವಾರ ಶಾಲಾ ಮೈದಾನದಲ್ಲಿ ಜರುಗಿತು.
ಸಂತೆಯಲ್ಲಿ 1 ರಿಂದ 4ನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಬಗೆಬಗೆಯ ತರಕಾರಿ, ಹಣ್ಣುಗಳು, ಸೊಪ್ಪು, ಮಜ್ಜಿಗೆ, ಬಿಸ್ಕೆಟ್, ಬಾಳೆಹಣ್ಣು, ದ್ರಾಕ್ಷಿ, ಬಜ್ಜಿ, ಬೊಂಡ, ಕಡಲೆಕಾಯಿ, ಹೂವು ಇತ್ಯಾದಿ ಆಹಾರ ಪದಾರ್ಥಗಳನ್ನು ತಂದು ಸಂತೆಯಲ್ಲಿ ಜೋಡಿಸಿದಂತೆ ಜೋಡಿಸಿಕೊಂಡು ಮಾರುಕಟ್ಟೆಯನ್ನು ನಾಚಿಸುವಂತೆ ಮಕ್ಕಳು ಪೈಪೋಟಿಯಿಂದ ಪೋಷಕ ಗ್ರಾಹಕರನ್ನು ತಮ್ಮತ್ತ ಸೆಳೆದರು.
ಮಕ್ಕಳು ಖುಷಿ ಖುಷಿಯಿಂದ ಹಣವನ್ನು ಪಡೆದು ಚಿಲ್ಲರೆ ಕೊಟ್ಟು ವಸ್ತುಗಳನ್ನು ಕೊಡುತ್ತಿದ್ದರು. ಪೋಷಕರು ತಮ್ಮ ಮಕ್ಕಳು ಮಾಡುತ್ತಿದ್ದ ವ್ಯಾಪಾರದ ರೀತಿಯನ್ನು ಕಂಡು ಮೂಕವಿಸ್ಮಿತರಾದರು. ಇಡೀ ಶಾಲಾ ವಾತಾವರಣವೇ ಸಂತೆಯ ರೀತಿಯಲ್ಲಿ ಶೋಭಿಸುತಿತ್ತು. ಮಕ್ಕಳು ಪೈಪೋಟಿಯಿಂದ ತರಕಾರಿ ಬೇಕೆ ತರಕಾರಿ ತರಕಾರಿ, ಕ್ಯಾರೆಟ್, ಬೀನ್ಸ್, ನವಿಲುಕೋಸು ಬೇಕೆ ಬೇಕೆ 10 ರೂಪಾಯಿ, 20 ರೂಪಾಯಿ, 5 ರೂಪಾಯಿ ಎಂದು ಕೂಗುತ್ತಾ ಮಾರಿದರು. ಪೋಷಕ ಗ್ರಾಹಕರು ಹಣವನ್ನು ಕೊಟ್ಟು ತರಕಾರಿ, ಹಣ್ಣು, ಸೊಪ್ಪು ತೆಗೆದುಕೊಂಡು ಚೀಲ ತುಂಬಿಸಿಕೊಂಡು ಮನೆ ಕಡೆಗೆ ಹೋಗುತ್ತಿದ್ದ ದೃಶ್ಯ ಸಂತೆಯನ್ನು ನೆನಪಿಸುತಿತ್ತು. ಸಂತೆಯಲ್ಲಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ವ್ಯಾಪಾರಮಾಡಿ ಮಕ್ಕಳನ್ನು ಹುರಿದುಂಬಿಸಿದರು.
ಬಿಜಿಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಶಿವರಾಮರೆಡ್ಡಿ ಮುಖ್ಯಶಿಕ್ಷಕ ಮೋಹನ್ ಕುಮಾರ್ ಡಿ.ಸಿ, ಬಿಜಿಎಸ್ ಪಿಯು ಕಾಲೇಜಿನ ಡೀನ್ ಡಾ. ಮಧುಸೂಧನ್, ಪ್ರಾಂಶುಪಾಲ ರಮೇಶ್ ಹೆಚ್.ಬಿ, ಬಿಜಿಎಸ್ ನಿಲಯಪಾಲಕರಾದ ರಾಜು ಹೆಚ್.ಎಂ ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English