ನಾನು ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ :ಯೆಡ್ಡಿ

2:31 PM, Monday, December 19th, 2011
Share
1 Star2 Stars3 Stars4 Stars5 Stars
(8 rating, 7 votes)
Loading...

yeddyurappa Darmasthala

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ರವಿವಾರ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ನಾನೀಗ ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ. ತನ್ನ ಮೇಲೆ ಆರೋಪ ಬಂದಾಗ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ. ಮುಂದೆ ವರಿಷ್ಠರು ಉನ್ನತ ಹುದ್ದೆ ನೀಡಿದರೆ ಸ್ವೀಕರಿಸುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ ಎಂದು ವಿವರಿಸಿದರು.

ತನಗೆ ಸೂಕ್ತ ಸ್ಥಾನಮಾನ ನೀಡಲು ದಿಲ್ಲಿ ಭೇಟಿ ಸಂದರ್ಭ ವರಿಷ್ಠರಿಗೆ ಯಾವುದೇ ಗಡುವು ವಿಧಿಸಲಾಗಿಲ್ಲ. ಕೊಟ್ಟಾಗ ತೆಗೆದುಕೊಳ್ಳುತ್ತೇನೆ ಯಾವುದೇ ಕಾರಣಕ್ಕೂ ಬಿಜೆಪಿ ತೊರೆದು ಹೋಗಲಾರೆ . ನಾನು ಕಟ್ಟಿ ಬೆಳೆಸಿದ ಪಕ್ಷ, ಇದನ್ನು ಬಿಡಲಾರೆ ಎಂದರು. ಹೊಸ ಪಕ್ಷ ಸ್ಥಾಪನೆ ಆಲೋಚನೆಯೂ ಇಲ್ಲ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಉಳಿಗಾಲವಿಲ್ಲ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಶ್ರೀರಾಮುಲು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಶ್ರೀರಾಮುಲು ಮರಳಿ ಬರುವುದಾದರೆ ಬರಲಿ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ. ತಪ್ಪು ತಿಳಿವಳಿಕೆಯಿಂದ ಶ್ರೀರಾಮುಲು ಪಕ್ಷದಿಂದ ಹೊರ ಹೋಗಿದ್ದಾರೆ ಅವರ ಜತೆ ಮಾತುಕತೆ ನಡೆಸಿ ಅವರು ಬರುವುದಾದರೆ ಸ್ವಾಗತಿಸುವುದಾಗಿ ಈಶ್ವರಪ್ಪ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂದರು.

ಡಿ.ವಿ. ಸದಾನಂದ ಗೌಡರು ವಿಧಾನಪರಿಷತ್ತಿಗೆ ಆಯ್ಕೆಯಾಗುವುದು 101 ಶೇ.ದಷ್ಟು ಖಚಿತ ಎಂದ ಅವರು, ಯಾವುದೇ ಅಡ್ಡಿ ಆತಂಕ ಇಲ್ಲದೇ ದೊಡ್ಡ ಅಂತರದಿಂದ ಡಿವಿ ಆಯ್ಕೆಯಾಗುತ್ತಾರೆ ಎಂದರು. ಚುನಾವಣೆ ಕುರಿತು ದೇವೇಗೌಡ, ಕುಮಾರಸ್ವಾಮಿ, ಪರಮೇಶ್ವರ್‌ ಜತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್‌ ಜತೆ ಜೆಡಿಎಸ್‌ ಕೈ ಜೋಡಿಸುವ ಸಾಧ್ಯತೆ ಕಡಿಮೆ. ಅಭ್ಯರ್ಥಿ ಹಾಕದಂತೆ ಜೆಡಿಎಸ್‌ನವರಿಗೆ ಮನವಿ ಮಾಡಿದ್ದು ಅದರಂತೆ ಅವರು ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್‌ನವರ ಜತೆ ಮಾತುಕತೆ ನಡೆಸಿದ್ದರೂ ಹೈ ಕಮಾಂಡ್‌ನಿಂದ ಸೂಚನೆ ಬಂದ ಕಾರಣ ಅಭ್ಯರ್ಥಿ ಹಾಕಿದ್ದಾರೆ. ಅದೇನಿದ್ದರೂ ಗೆಲುವು ಡಿವಿಗೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English