ನೆಹರೂ ಮೈದಾನದಲ್ಲಿ 72ನೇ ಸ್ವಾತಂತ್ರೋತ್ಸವ ಆಚರಣೆ..!

10:37 AM, Thursday, August 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

Independence (2)ಮಂಗಳೂರು: ದ.ಕ. ಜಿಲ್ಲೆಯು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ನಿನ್ನೆ ಸರಳ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಷ್ಟ್ರ ಧ್ವಜ ಅರಳಿಸಿ ಪೆರೇಡ್ ವೀಕ್ಷಣೆಯ ಮೂಲಕ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂದೇಶ ನೀಡಿದ ಅವರು, ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರ ಜತೆಗೆ ಜಿಲ್ಲೆಯ ನಾಯಕರಾದ ಕುದ್ಮುಲ್ ರಂಗರಾಯ, ಕೆ.ಆರ್. ಕಾರಂತ, ಡಾ. ಅನಿ ಬೆಸೆಂಟ್, ಉಳ್ಳಾಲದ ಶ್ರೀನಿವಾಸ ಮಲ್ಯ, ಅತ್ತಾವರ ಯಲ್ಲಪ್ಪ, ಕೆ.ಕೆ.ಶೆಟ್ಟಿ, ಮುಹಮ್ಮದ್ ಕಮಲ್, ಲೋಕಯ್ಯ ಶೆಟ್ಟಿ, ಅಲ್ಬುಕರ್ಕ್ ಮೊದಲಾದ ಮಹನೀಯರನ್ನು ನೆನಪಿಸಿಕೊಂಡರು.

ಸ್ವಾತಂತ್ರ ಹೋರಾಟಗಾರರು ಹಾಕಿಕೊಟ್ಟ ಜಾತ್ಯತೀತ ನೆಲೆಯಲ್ಲಿ ನಾವು ಸಾಗಬೇಕಾಗಿದೆ. ಜಿಲ್ಲೆಯ ಜನರು ಪ್ರೀತಿ, ವಿಶ್ವಾಸ, ಸೌಹಾರ್ದದ ಸುಂದರ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು. ಆಗ ಮಾತ್ರ ಸ್ವಾತಂತ್ರೋತ್ಸವ ಆಚರಣೆಗೆ ಅರ್ಥ ಬರಲಿದೆ ಎಂದು ಸಚಿವರು ಹೇಳಿದರು.

ಕಾರ್ನಾಡ್ ಸದಾಶಿವ ರಾಯರ ಜೀವನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ಹೇಳುತ್ತಾ, ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರವನ್ನು ವಿವರಿಸಿದರು. ಇಂತಹ ಮಹಾನ್ ದೇಶ ಭಕ್ತರನ್ನು ನಾವಿಂದು ಮರೆತಿದ್ದು, ಅವರ ಬದುಕನ್ನು ಇಂದಿನ ಮಕ್ಕಳಿಗೆ ನಾವು ಪರಿಚಯಿಸಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ರಾಜ್ಯ ಸರಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಚಿವ ಯು.ಟಿ.ಖಾದರ್, ಸಣ್ಣ ನೀರಾವರಿ ಇಲಾಖೆಯ ಪಶ್ಚಿಮ ವಾಹಿನಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 265.25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಮೋದನೆಯಾಗಿರುವ 11 ಕಿಂಡಿಅಣೆಕಟ್ಟು ಕಾಮಗಾರಿಗಳು ಮಳೆಗಾಲದ ನಂತರ ಆರಂಭಗೊಳ್ಳಲಿದೆ ಎಂದರು. ದ.ಕ. ಜಿಲ್ಲೆಯಲ್ಲಿ ಇಂಡಿಯನ್ ಕೋಸ್ಟಲ್ ಗಾರ್ಡ್‌ನ ರಾಷ್ಟ್ರೀಯ ಅಕಾಡಮಿಯನ್ನು ಸ್ಥಾಪಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಈ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಗೆಳತಿ- ವಿಶೇಷ ಚಿಕಿತ್ಸಾ ಘಟಕವನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಿ ಆರಂಭಿಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ ದಿನದ ಸಂದೇಶದ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಪ್ರಾಥಮಿಕ ಶಾಲೆಯಲ್ಲಿ ಓದಿದ ಬಾಯಿ ಪಾಠ ಮಾಡಿದ್ದ ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ’ ಪದ್ಯವನ್ನು ಹಾಡಿದರು. ಇದೇ ವೇಳೆ ಹಿರಿಯ ಸಾಹಿತಿ, ಸ್ವಾತಂತ್ರ ಹೋರಾಟಗಾರ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರ ಐಕ್ಯಗಾನವನ್ನು ನೆನಪಿಸಿಕೊಂಡರು.

ಮಹಾನ್ ನಾಯಕರಿಂದ ದೇಶಕ್ಕೆ ಲಭಿಸಿದ ಸ್ವಾತಂತ್ರ ನಿಜಾರ್ಥದ ಸ್ವಾತಂತ್ರ ಆಗಬೇಕಾದರೆ ನಾವು ಕೈಯ್ಯಾರರ ಐಕ್ಯಗಾನವನ್ನು ಹಾಡಬೇಕು. ಜಿಲ್ಲೆಯ ಪರಂಪರಾಗತ ಸೌಹಾರ್ದದ ಸಮಾಜ ಸೃಷ್ಟಿಯಾದಾಗ ಮಾತ್ರ ನಾವು ಪ್ರಗತಿ ಕಾಣಲು ಸಾಧ್ಯ ಎಂದವರು ಹೇಳಿದರು.

ರಾಷ್ಟ್ರ ಧ್ವಜಾರೋಹಣದ ಬಳಿಕ ಪೆರೇಡ್ ಕಮಾಂಡರ್ ವಿಠಲ್ ಶಿಂಧೆ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು ಪಥ ಸಂಚಲದಲ್ಲಿ 19 ವಿವಿಧ ತುಕಡಿಗಳು ಭಾಗವಹಿಸಿದ್ದವು. ಅತ್ಯುತ್ತಮವಾಗಿ ಪಥ ಸಂಚಲನ ನಿರ್ವಹಿಸಿದ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್‌ಸಿಸಿ ನೇವಲ್ ಸೀನಿಯರ್ ತಂಡವು ದ್ವಿತೀಯ ಸ್ಥಾನದೊಂದಿಗೆ ರೋಲಿಂಗ್ ಸೀಲ್ಡ್ ಪಡೆದುಕೊಂಡವು.

ಸಮಾರಂಭದಲ್ಲಿ ಮಂಗಳೂರು ಬಿಷಪ್ ಡಾ. ರೆ.ಅಲೋಶಿಯಸ್ ಪಾವ್ಲ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಭಾಸ್ಕರ ಕೆ., ಉಪ ಮೇಯರ್ ಮುಹಮ್ಮದ್, ಮಾಜಿ ಶಾಸಕ ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಬಿ.ಎಂ.ಫಾರೂಕ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಮಳೆಯ ಹಿನ್ನೆಲೆಯಲ್ಲಿ ನೆಹರೂ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ರಾಜ್ಯಾದ್ಯಂತ ಇಂದು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಂದ ಚಾಲನೆ ನೀಡಲಾದ ‘ಹಸಿರು- ಕರ್ನಾಟಕ’ ಯೋಜನೆಯಡಿ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ನೆಹರೂ ಮೈದಾನದಲ್ಲಿ ಸಚಿವ ಖಾದರ್ ಚಾಲನೆ ನೀಡಿ, ನೆರೆದಿದ್ದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ತಮ್ಮ ಸಂದೇಶದಲ್ಲಿ, ಯೋಜನೆಯಡಿ ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಅರಣ್ಯ ಜಿಲ್ಲೆಗೊಂದು ಕಾಡು ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸುವುದು ಮುಖ್ಯ ಧ್ಯೇಯವಾಗಿರುತ್ತದೆ ಎಂದರು.

ಹಸಿರು ಕರ್ನಾಟಕ ಯೋಜನೆಯಡಿ ಆಗಸ್ಟ್ 18ರವರೆಗೆ ಜಿಲ್ಲಾದ್ಯಂತ ವ್ಯಾಪಕವಾಗಿ ಹಮ್ಮಿಕೊಳ್ಳಲು ಎಲ್ಲಾ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಹಕಾರ ಪಡೆದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆಗಳು, ಸ್ಥಳೀಯ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಸಾರ್ವಜನಿಕರು ಹಾಗೂ ಇತರರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸರಕಾರಿ ಹಾಗೂ ಖಾಸಗಿ ಖಾಲಿ ಜಾಗದಲ್ಲಿ, ಇಲಾಖಾ ಕಚೇರಿಗಳಲ್ಲಿ, ಶಾಲಾ ಕಾಲೇಜು ಆವರಣಗಳಲ್ಲಿ ಸಸಿ ನೆಡುವ ಮೂಲಕ ಯೋಜನೆ ಯಶಸ್ವಿಗೆ ಸಹಕರಿಸಬೇಕೆಂದು ಸಚಿವ ಯು.ಟಿ.ಖಾದರ್ ಕರೆ ನೀಡಿದರು. Independence (4)

Independence (6)

Independence (5)

Independence (7)

Independence (8)

Independence (9)

Independence (10)

Independence (11)

Independence (12)

Independence (13)

Independence (14)

Independence (15)

Independence (16)

Independence (17)

Independence (18)

Independence (19)

Independence (20)

Independence (21)

Independence (22)

Independence (24)

Independence (23)

Independence (24)

Independence (26)

Independence (27)

Independence (28)

Independence (29)

Independence (30)

Independence (31)

Independence (32)

Independence (25)

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English