ಉಡುಪಿ: ಜಿಲ್ಲೆಯಲ್ಲಿ ನಡೆದ ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಉಡುಪಿ ನಗರಸಭೆ, ಕಾರ್ಕಳ ಮತ್ತು ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಮುಖ್ಯವಾಗಿ ಉಡುಪಿ ನಗರಸಭೆಯ 35 ವಾರ್ಡ್ಗಳ ಪೈಕಿ 31 ವಾರ್ಡ್ಗಳನ್ನು ಬಿಜೆಪಿ ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಕೈಯಿಂದ ನಗರಸಭೆಯನ್ನು ವಶಕ್ಕೆ ಪಡೆದಿದೆ. ಈ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಇದು ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅದೇ ಫಲಿತಾಂಶವನ್ನು ಪುನರಾವರ್ತನೆ ಆಗಿದೆ.
ಇನ್ನು ಜಿಲ್ಲೆಯ ಅಂತಿಮ ಫಲಿತಾಂಶದಲ್ಲಿಉಡುಪಿ ನಗರಸಭೆಯ 35 ವಾರ್ಡ್ಗಳಲ್ಲಿ ಬಿಜೆಪಿ 31 ಸ್ಥಾನಗಳನ್ನು ಪಡೆದು ಭಾರಿ ಅಂತರದ ಗೆಲುವು ಸಾಧಿಸಿದೆ. ಕಾಂಗ್ರೆಸ್ 4 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಇನ್ನು ಕಾರ್ಕಳ ಪುರಸಭೆ ಅತಂತ್ರವಾಗಿದ್ದು, ಎಂಪಿ, ಎಂಎಲ್ಎ ಮತ ಬಳಸಿ ಬಿಜೆಪಿಯ ಅಧಿಕಾರಕ್ಕೆ ಅವಕಾಶ ನೀಡಿದೆ. ಇಲ್ಲಿನ 23 ವಾರ್ಡ್ಗಳಲ್ಲಿ ಬಿಜೆಪಿ-11, ಕಾಂಗ್ರೆಸ್-11, ಪಕ್ಷೇತರ-1 ಸ್ಥಾನಗಳನ್ನು ಪಡೆದುಕೊಂಡಿವೆ.
ಕುಂದಾಪುರ ಪುರಸಭೆಯ 23 ವಾರ್ಡ್ಗಳಲ್ಲಿ ಬಿಜೆಪಿ ತೆಕ್ಕೆಗೆ 14, ಕಾಂಗ್ರೆಸ್-8, ಪಕ್ಷೇತರ-1. ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡ್ಗಳಲ್ಲಿ ಬಿಜೆಪಿಗೆ 10, ಕಾಂಗ್ರೆಸ್-5, ಪಕ್ಷೇತರ1 ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ.
ಉಡುಪಿ ನಗರಸಭೆಗೆ ಆಯ್ಕೆಯಾದ ಸೆಲಿನಾ ಕರ್ಕಡ ಮೂಡುಪೆರಂಪಳ್ಳಿ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಬಿಜೆಪಿ ಕಾರ್ಯಕರ್ತರ ಮೋದಿ ಮೋದಿ ಕೂಗಿಗೆ ಕಿವಿ ಮುಚ್ಚಿಕೊಂಡು ಹೋದ ಘಟನೆ ನಡೆಯಿತು. ಸದಸ್ಯೆ ಬಿಜೆಪಿ ಕಾರ್ಯಕರ್ತರ ನಡುವೆ ಸಾಗುತ್ತಿದ್ದಂತೆ ಇರಿಸು ಮುರಿಸುಗೊಂಡ ಸೆಲಿನಾ ಕರ್ಕಡರನ್ನು ಅಭಿನಂದಿಸಲು ಸಹ ಕಾರ್ಯಕರ್ತರ ಕೊರತೆ ಉಂಟಾಗಿತ್ತು. ಬಳಿಕ ಅವರು ಏಕಾಂಗಿಯಾಗಿ ತೆರಳುವಂತಾಯಿತು.
ಇನ್ನು ಬಿಜೆಪಿ ಗೆಲುವಿನ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್, ಈ ಹಿಂದೆಲ್ಲ ಕಾಂಗ್ರೆಸ್ನವರು ಗಾಳಿಯಿಂದಾಗಿ ಬಿಜೆಪಿ ಗೆದ್ದಿದೆ ಅನ್ನುತ್ತಿದ್ದರು. ಆದರೆ ಯಾವ ಗಾಳಿಯೂ ಇಲ್ಲ ಎಂಬುದು ಸ್ಥಳೀಯ ಸಂಸ್ಥೆ ಫಲಿತಾಂಶದಿಂದ ಸಾಬೀತಾಗಿದೆ.
ಉಡುಪಿ ನಗರಸಭೆ ಗೆಲುವು ಐತಿಹಾಸಿಕ ಕಾರಣಕ್ಕೂ ಸ್ಮರಿಸುವಂತಹ ಗೆಲುವು .ಐವತ್ತು ವರ್ಷ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಘ ಉಡುಪಿ ನಗರಸಭೆಯನ್ನು ಗೆದ್ದುಕೊಂಡಿತ್ತು. ಈಗ ಬಿಜೆಪಿಗೆ ಭಾರಿ ಬಹುಮತ ಬಂದಿದೆ. ಇದು ಎಲ್ಲ ಬಿಜೆಪಿ ಕಾರ್ಯಕರ್ತರ ಗೆಲುವು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳುವಂತೆ ಯಾವ ಗಾಳಿಯೂ ಇಲ್ಲ, ಬಿಜೆಪಿಯನ್ನು ಮೆಚ್ಚಿ ಜನ ಮತ ಹಾಕಿದ್ದಾರೆ. ಇದು ಅಭಿವೃದ್ಧಿಗಾಗಿ ಸಿಕ್ಕಿರುವ ಗೆಲುವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Click this button or press Ctrl+G to toggle between Kannada and English