ಮೂಡಬಿದಿರೆ: “ಒಬ್ಬ ವ್ಯಕ್ತಿಯ ಧನಾತ್ಮಕ ಪರಿವರ್ತನೆಯಿಂದ ದೇಶವೇ ಪರಿವರ್ತನೆಯಾಗುತ್ತದೆ. ಹಾಗಾಗಿ ಅಂಥಹ ಬದಲಾವಣೆ ಈ ಕಾರ್ಯಕ್ರಮ ನಾಂದಿಯಾಗಬೇಕು” ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ|ಯೋಗೀಶ್ ಕೈರೋಡಿ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಪದವಿ ಸಮಾಜಕಾರ್ಯ ವಿಭಾಗದ ‘ಸ್ಪಟಿಕ ಫೋರಂ’ನ ವತಿಯಿಂದ ಬುಧವಾರ ನಡೆದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನಮ್ಮೆಲ್ಲರಿಗೂ ಮಾದರಿ ಎಂಬ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅವರ ಸಾಧನೆ ನಮ್ಮನ್ನು ಪ್ರೇರಿತಗೊಳಿಸಿರುತ್ತದೆ. ಅವರೆಲ್ಲಾ ಇಂದು ಸಾಧಕ ಸ್ಥಾನದಲ್ಲಿ ಇರುತ್ತಾರಷ್ಟೇ. ಆದರೆ ಆ ಯಶಸ್ಸಿನ ಹಿಂದೆ ಅವಿರತ ಶ್ರಮ ಅಡಗಿರುತ್ತದೆ. ಆ ಪರಿಶ್ರಮವನ್ನು ಗೌರವಿಸುವ ಹಾಗೂ ಪಾಲಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
“ಕೇವಲ ಭಾಷಣಗಳಿಂದ ಬದಲಾವಣೆ ಅಸಾಧ್ಯ. ಯಾವುದೇ ಉತ್ತಮ ವಿಷಯವನ್ನು ಸ್ವೀಕರಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಹಾಗಾಗಿ ಅಂಥಹ ಮನಸ್ಥಿತಿಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು” ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೂಡಬಿದ್ರೆ ಜೆ.ಸಿ.ಐನ ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಧೀರೇಂದ್ರಜೈನ್ ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ್ಯಗಳ ಮಾಹಿತಿ ನೀಡಿದರು. ಮೂಡಬಿದ್ರೆಯ ಅನೇಕ ಕಾಲೇಜುಗಳ 40ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಪದವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಕೆ. ಮಧುಮಾಲ, ಸಂಯೋಜಕಿ ಸ್ವಪ್ನ ಆಳ್ವ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ‘ಜಲ ಸಂರಕ್ಷಣೆ’ ಹಾಗೂ ‘ನನ್ನ ನಗರ, ನನ್ನ ಜವಾಬ್ದಾರಿ’ ಎಂಬ ವಿಷಯದ ಕುರಿತು ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಂತರ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
Click this button or press Ctrl+G to toggle between Kannada and English