ಸೋತ ಮಾತ್ರಕ್ಕೆ ಕೈ ಕಟ್ಟಿ ಕೂರಲ್ಲ, ನಾವೇನು ಎಂದು ತೋರಿಸಲಿದ್ದೇವೆ: ಬಿ.ಎಸ್.ಯಡಿಯೂರಪ್ಪ

2:48 PM, Tuesday, November 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

yedyurappaಬೆಂಗಳೂರು: ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿದೆ ಎಂದು ಕೈಕಟ್ಟಿ ಕೂರುವುದಿಲ್ಲ. ನಾವು ಸೋತದ್ದು ಬಳ್ಳಾರಿ ಮಾತ್ರ. ನಮ್ಮ ಸೋಲನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ 2019ರ ಚುನಾವಣೆಯನ್ನು ಗೆಲ್ಲುವತ್ತ ನಮ್ಮ ದೃಷ್ಟಿಯನ್ನು ಹರಿಸುತ್ತೇವೆ. ನಾವೇನು ಎಂದು ಮುಂದೆ ತೋರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ನನ್ನ ಅಭಿನಂದನೆ ಮತ್ತು ವಂದನೆಗಳು. 5 ಕ್ಷೇತ್ರಗಳ ಮತದಾರರ ತೀರ್ಪನ್ನು ನಾನು ಮತ್ತು ನಮ್ಮ ಪಕ್ಷ ಸ್ವೀಕರಿಸುತ್ತದೆ. ಸತ್ಯಸಂಗತಿ ಎಂದರೆ ಈ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಬಹಳಷ್ಟಿದೆ ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆಯನ್ನು ಗೆದ್ದಿವೆ ಎಂದು ಆರೋಪಿಸಿದ್ದಾರೆ.

ಬಳ್ಳಾರಿ ಮತ್ತು ಜಮಖಂಡಿಯಲ್ಲಿ‌ ನಾವು ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಶಿವಮೊಗ್ಗದಲ್ಲಿ ಕೂಡ ನಾವು ಬಹಳಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ಜೆಡಿಎಸ್ ಹಣದ ಹೊಳೆ ಹರಿಸಿದೆ, ನಾವು ಅದರಲ್ಲಿ ಈಜಿಕೊಂಡು ದಡ ಸೇರಿದ್ದೇವೆ. 52,500 ಅಂತರದಿಂದ ಗೆದ್ದಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಕೂಡ ಇಷ್ಟು ಅಂತರ ಸಾಧಿಸಿದ್ದು ಒಂದು ಸಾಹಸವೇ. ಇದರ ಜೊತೆಗೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ 2 ಲಕ್ಷದ 44 ಸಾವಿರದಷ್ಟು ಮತಗಳನ್ನು ಪಡೆದದ್ದು ನಮಗೆ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಇದು ಸಹಕಾರಿಯಾಗುತ್ತದೆ.

ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ರಾಜಕೀಯ ಕುತಂತ್ರ ಮಾಡುವಲ್ಲಿ ನಿಸ್ಸೀಮರು. ಇದನ್ನು ಈ ಉಪಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಜೆಡಿಎಸ್‍ನ ಪ್ರಜಾಪ್ರಭುತ್ವ ವಿರೋಧಿ ನಡೆ ರಾಮನಗರದಲ್ಲಿ ಬಯಲಿಗೆ ಬಂತು. ಜೆಡಿಎಸ್ ಮತ್ತು ಕಾಂಗ್ರೆಸ್‍ನ ರಾಜಕೀಯ ಕುತಂತ್ರಗಳ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ ಎಂದಿದ್ದಾರೆ.

2019ರ ಚುನಾವಣೆಯಲ್ಲಿ ಮೋದಿಯವರ ಸಾಧನೆ ಮತ್ತು ಜನಪ್ರಿಯತೆ ಹಾಗೂ ನಮ್ಮ ಪಕ್ಷದ ಸಂಘಟನೆಯನ್ನು ಒಟ್ಟುಗೂಡಿಸಿ ನಾವು ಚುನಾವಣೆಯನ್ನು ಎದುರಿಸುತ್ತೇವೆ. ಯಾವುದೇ ಸಂದೇಹವಿಲ್ಲದೆ 22-23 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಆದಷ್ಟು ಬೇಗ ನಾನು ಪಕ್ಷ ಸಂಘಟನೆಯ ಜೊತೆಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಇದೇ ಸಮಯದಲ್ಲಿ ಈ ದೋಸ್ತಿ ಸರ್ಕಾರದ ಅಧಿಕಾರ ದಾಹವನ್ನು ಜನರ ಮುಂದಿಡುತ್ತೇವೆ.

ಒಂದು ಬಲಿಷ್ಠ ವಿರೋಧ ಪಕ್ಷವಾಗಿ ನಮಗೆ ಜೆಡಿಎಸ್ ಮತ್ತು ಕಾಂಗ್ರೆಸ್‍ನ್ನು ಎದುರಿಸುವ ಶಕ್ತಿ ಇದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇವೆ. ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಗೆ ತಾಜಾ ಉದಾಹರಣೆ ಎಂದರೆ ನಿನ್ನೆ ಹೈಕೋರ್ಟ್ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಗ್ಗೆ ಛೀಮಾರಿ ಹಾಕಿರುವುದೇ ಸಾಕು ಎಂದು ಟೀಕಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English