ಉಡುಪಿ: ಆಹಾರವರಸಿ ಜನವಸತಿಯತ್ತ ಬಂದು ಆತಂಕ ಮೂಡಿಸಿದ್ದ ಮತ್ತೊಂದು ಚಿರತೆ ಇಂದು ಮುಂಜಾನೆ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ.
ಕಳೆದ ಶುಕ್ರವಾರ ತಡರಾತ್ರಿ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿತ್ತು. ಕುಂದಾಪುರ ತಾಲೂಕು ಕಾಳಾವರ ಕಕ್ಕೇರಿ ಸಮೀಪದ ವರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ ಹಲವಾರು ಸಮಯಗಳಿಂದ ಚಿರತೆಗಳ ಓಡಾಟವನ್ನು ಜನರು ಪ್ರತ್ಯಕ್ಷವಾಗಿ ಕಂಡಿದ್ದರು. ಮನೆಯ ನಾಯಿಗಳನ್ನು ಹಿಡಿಯಲು ಚಿರತೆಗಳು ಜನನಿಬಿಡ ಪ್ರದೇಶದತ್ತವೂ ಸುಳಿದಾಡುತ್ತಿತ್ತು. ಜನರು ನೀಡಿದ ಮಾಹಿತಿಯಂತೆ ಸೂಕ್ತ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು.
ಕಳೆದ ಶುಕ್ರವಾರ ತಡರಾತ್ರಿ 4-5 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಸೆರೆ ಸಿಕ್ಕ ಹೆಣ್ಣು ಚಿರತೆಯನ್ನು ಅಭಯಾರಣ್ಯಕ್ಕೆ ಬಿಟ್ಟು ವಾರ ಕಳೆಯುವುದರೊಳಗೆ ಮತ್ತೆ ಇಂದು ಬೆಳಗ್ಗೆ ಬೋನಿನಲ್ಲಿ ಚಿರತೆ ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸೆರೆಯಾದ ಹತ್ತು ವರ್ಷ ಪ್ರಾಯದ ಗಂಡು ಚಿರತೆಯನ್ನು ವನ್ಯಜೀವಿ ವಲಯಕ್ಕೆ ರವಾನಿಸಿದ್ದಾರೆ.
ಡಿ.ಎಫ್.ಒ ಪ್ರಭಾಕರನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಲೋಹಿತ್, ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ಶಂಕರ್ ಖಾರ್ವಿ, ವಿ. ಮಂಜು, ಸೋಮಶೇಖರ್, ಬಸವರಾಜ್, ಇಲಾಖೆ ವಾಹನ ಚಾಲಕ ಅಶೋಕ್ ಈ ಕಾರ್ಯಾಚರಣೆಯಲ್ಲಿದ್ದರು.
Click this button or press Ctrl+G to toggle between Kannada and English