ಉಜಿರೆ: ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ರಾತ್ರಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.
ಬೀಡಿನಿಂದ (ಹೆಗ್ಗಡೆಯವರ ನಿವಾಸ) ಮಹೋತ್ಸವ ಸಭಾ ಭವನಕ್ಕೆ ಭವ್ಯ ಮೆರವಣಿಗೆ ಬಳಿಕ ಅಷ್ಟವಿಧಾರ್ಚನೆ ಪೂಜೆ ನಡೆಯಿತು.ಸರಳಾ, ಸೌಮ್ಯ, ಸಾವಿತ್ರಿ, ಮಂಜುಳಾ ಹಾಗೂ ಅಭಿಜ್ಞಾ ಪೂಜಾ ಮಂತ್ರ ಪಠಣ ಮಾಡಿದರು. ಸ್ಥಳೀಯ ಶ್ರಾವಕರು ಹಾಗೂ ಶ್ರಾವಿಕೆಯರ ಅಷ್ಟ ವಿಧಾರ್ಚನೆ ಪೂಜೆಯಲ್ಲಿ ಭಾಗವಹಿಸಿದರು.
ಸನ್ಮಾನ: ಬಹುಮುಖಿ ಸಮಾಜ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ. ಸುರೇಂದ್ರ ಕುಮಾರ್ ಅವರನ್ನು ಜೈನ ಸಮಾಜದ ಪರವಾಗಿ ಕಡಬ ರಾಜರತ್ನ ಆರಿಗಾ ಮತ್ತು ಪಚ್ಚಾಜೆ ಜಿನರಾಜ ಆರಿಗಾ ಸನ್ಮಾನಿಸಿ ಅಭಿನಂದಿಸಿದರು. ಧರ್ಮಸ್ಥಳದ ಸುಮತಿ ಜೈನ್ ರಚಿಸಿದ ವರ್ಣಚಿತ್ರವನ್ನು ಅವರಿಗೆ ನೀಡಲಾಯಿತು.
ಧರ್ಮಸ್ಥಳ ಬೀಡಿನಲ್ಲಿ ಪಾಕ ಪರಿಣತರಾಗಿ ೩೮ ವರ್ಷ ಸೇವೆ ಸಲ್ಲಿಸಿದ ಬಾಬು ಬಂಗ, ೩೨ ವರ್ಷ ಸೇವೆ ಸಲ್ಲಿಸಿದ ಬೈಲಂಗಡಿ ಅಶೋಕ್ ಜೈನ್ ಹಾಗೂ ೩೪ ವರ್ಷ ಸೇವೆ ಮಾಡಿದ ಮಾರ್ನಾಡು ಜನಪ್ರಿಯ ಜೈನ್ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.
ಯಕ್ಷ -ಜಿನಗಾನ ವೈಭವ: ಕಾರ್ಕಳದ ಕಲಾವಿದರು ಜನ ಭಕ್ತಿ ಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದರು.ಹಾಡುಗಾರಿಕೆಯಲ್ಲಿ ಕಾರ್ಕಳದ ವೇಣೀ ಸುಬ್ರಹ್ಮಣ್ಯ ಭಟ್, ಚೆಂಡೆಯಲ್ಲಿ ರವಿರಾಜ ಜೈನ್ ಮತ್ತು ಮದ್ದಳೆ ವಾದಕರಾಗಿ ಮುರಳೀಧರ ಭಟ್, ಕಟೀಲು ಸಹಕರಿಸಿದರು.
ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್ ಮತ್ತು ನಿಶ್ಚಲ್ ಕುಮಾರ್ ಹಾಗೂ ಮಂಗಳೂರಿನ ಡಾ. ಸಿ.ಕೆ. ಬಳ್ಳಾಲ್ ಉಪಸ್ಥಿತರಿದ್ದರು.ಪ್ರೊ. ಸುವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English