ಉಡುಪಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಗುರುಪೂರ್ಣಿಮೆಯ ಶುಭ ದಿನ ಮಂಗಳವಾರ ಸುಮಾರು 20 ನಿಮಿಷಗಳನ್ನು ಅವರೊಂದಿಗೆ ಕಳೆದರು.
ಕಳೆದ ಮೂರು ದಿನಗಳಿಂದ ಹೊಸದಿಲ್ಲಿಯಲ್ಲಿರುವ ಪೇಜಾವರಶ್ರೀ, ಮಂಗಳವಾರ ಗುರುಪೂರ್ಣಿಮೆಯ ಶುಭ ಅವಸರದಲ್ಲಿ ತಮ್ಮ ಶಿಷ್ಯೆ ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ನಾಲ್ಕು ಗಂಟೆ ಸುಮಾರಿಗೆ ಪ್ರಧಾನಿ ಕಾರ್ಯಾಲಯವೇ ವ್ಯವಸ್ಥೆಗೊಳಿಸಿದಂತೆ ಪ್ರಧಾನಿ ಅವರನ್ನು ಭೇಟಿಯಾದರು ಎಂದು ಸ್ವಾಮೀಜಿಗಳ ನಿಕಟವರ್ತಿ ಮೂಲಗಳು ತಿಳಿಸಿವೆ.
ಪೇಜಾವರಶ್ರೀಗಳ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, ಪೇಜಾವರಶ್ರೀಗಳೊಂದಿಗೆ ಇರುವ ಎರಡು ಪೋಟೊಗಳೊಂದಿಗೆ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಕಳೆಯುವ ಗೌರವ ದೊರಕಿದೆ. ಅವರಿಂದ ಕಲಿಯುವ ಹಾಗೂ ಅವರ ಉನ್ನತ ವಿಚಾರಗಳನ್ನು ಆಲಿಸುವ ಸದಾವಕಾಶ ಒಂದು ವಿನಮ್ರ ಅನುಭವವಾಗಿದೆ.’ ಎಂದು ಪ್ರಧಾನಿ ಅವರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಕಟಗೊಂಡ ಕೇವಲ ಎರಡು ಗಂಟೆಯೊಳಗೆ ಈ ಟ್ವಿಟ್ನ್ನು 28 ಸಾವಿರ ಮಂದಿ ಮೆಚ್ಚಿಕೊಂಡಿದ್ದು, 4250 ಮಂದಿ ರಿಟ್ವಿಟ್ ಮಾಡಿದ್ದಾರೆ.
Click this button or press Ctrl+G to toggle between Kannada and English