ಉಡುಪಿ : ಕೇಂದ್ರ ಸರಕಾರದ ಬ್ಯಾಂಕ್ ವಿಲೀನಿಕರಣ ಧೋರಣೆ ವಿರೋಧಿಸಿ ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳು ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕಾರ 10 ಸಾರ್ವಜನಿಕ ರಂಗದ ಬ್ಯಾಂಕ್ಗಳನ್ನು ವಿಲೀನಿಕರಿಸಿ 4 ಬ್ಯಾಂಕ್ಗಳಾಗಿ ಪರಿವರ್ತಿಸುತ್ತಿದೆ. ಆ ಮೂಲಕ 6 ಬ್ಯಾಂಕ್ಗಳು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳಲಿದೆ. ಬ್ಯಾಂಕ್ ವಿಲೀನದಿಂದ ಬ್ಯಾಂಕ್ಗಳ ಶಕ್ತಿ ಹೆಚ್ಚುವುದಿಲ್ಲ. ಅನುತ್ಪಾದಕ ಆಸ್ತಿ ಪ್ರಮಾಣ ತಗ್ಗುವುದಿಲ್ಲ, ಸಾಲ ನೀಡುವ ಶಕ್ತಿಯೂ ಹೆಚ್ಚುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ವಿರುದ್ಧ ಘೋಷಣೆ ಕೂಗಿದರು.
ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಅಶೋಕ್ ಕೋಟ್ಯಾನ್ ಮಾತನಾಡಿ, ಕೇಂದ್ರ ಸರಕಾರ ನೋಟು ರದ್ದುಗೊಳಿಸಿದಾಗ ಸಾರ್ವಜನಿಕರಿಗೆ ಸಮಸ್ಯೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್ ಸಿಬಂದಿಗಳು ಹಗಲಿರಳು ಕೆಲಸ ಮಾಡಿದ್ದಾರೆ. ಆದರೂ ಕೇಂದ್ರ ಸರಕಾರ ಕಳೆದ 2 ವರ್ಷದಿಂದ ಸಿಬಂದಿಗಳ ವೇತನ ಪರಿಷ್ಕರಣೆ ಮುಂದಾಗಿಲ್ಲ. ಬ್ಯಾಂಕ್ ವಿಲೀನಿಕರಣ ಕೈಬಿಟ್ಟು ನೌಕರರಿಗೆ ಪೂರಕವಾಗುವಂತ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಹೇಮಂತ್ ಯು, ಸದಸ್ಯರಾದ ಮನೋಜ್ ಕುಮಾರ್, ರಮೇಶ್, ವಂಶಿಕೃಷ್ಣ, ಜಯನ್ ಮಲ್ಪೆ, ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಸಂಚಾಲಕ ಹೆರಾಲ್ಡ್ ಡಿ’ಸೋಜ, ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯದ ಕಾರ್ಯದರ್ಶಿ ನಾಗೇಶ್ ನಾಯಕ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English