ಉಪ್ಪಿನಂಗಡಿ : ನಾಡಕಚೇರಿಯಲ್ಲಿ ನೆಪವೊಡ್ಡಿ ಅರ್ಜಿ ವಿಲೇವಾರಿ ವಿಳಂಬ; ಗ್ರಾಮಸ್ಥರ ಆಕ್ರೋಶ

10:54 AM, Friday, September 20th, 2019
Share
1 Star2 Stars3 Stars4 Stars5 Stars
(No Ratings Yet)
Loading...

uppinangadyಉಪ್ಪಿನಂಗಡಿ : ನಾಡಕಚೇರಿಯಲ್ಲಿ ಯಾವುದೇ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ನೆಟ್‌ವರ್ಕ್‌ ಸಮಸ್ಯೆ ಇದೆ ಎಂದು ವಿಳಂಬ ಮಾಡುತ್ತಾರೆ ಎಂದು ಗ್ರಾಮಸ್ಥರು ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಹಮ್ಮಬ್ಬ ಶೌಕತ್‌ ಆಲಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಮುದಾಯ ಭವನದಲ್ಲಿ ಸಭೆ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ನೋಡಲ್‌ ಅಧಿಕಾರಿಯಾಗಿದ್ದರು.

ಗ್ರಾಮಕರಣಿಕ ರಮಾನಂದ ಚಕ್ಕಡಿ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾವಿಸಿದ ಗ್ರಾಮಸ್ಥರಾದ ಕಿಶೋರ್‌, ರವಿ ಪಟಾರ್ತಿ, ಶೇಷಪ್ಪ ನೆಕ್ಕಿಲು ಮತ್ತು ಚೆನ್ನಕೇಶವ, ನಾಡಕಚೇರಿಯಲ್ಲಿ ಯಾವುದೇ ಕೆಲಸಗಳು ಸಕಾಲದಲ್ಲಿ ನಡೆಯುತ್ತಿಲ್ಲ. ನೆಟ್‌ವರ್ಕ್‌ ಇಲ್ಲ, ಸರ್ವರ್‌ ಬ್ಯುಸಿ, ತಂಬ್‌ ಆಗುತ್ತಿಲ್ಲ ಎಂಬ ನೆಪವೊಡ್ಡಿ ಅರ್ಜಿ ವಿಲೇವಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಕ್ರಿಯಿಸಿದ ಗ್ರಾಮಕರಣಿಕ ರಮಾನಂದ, ಇಂತಹ ಸಮಸ್ಯೆಗಳಾಗುತ್ತಿದ್ದಲ್ಲಿ ಉಪತಹಶೀಲ್ದಾರ್‌ ಗಮನಕ್ಕೆ ತರಬೇಕೆಂದರು.

ನಾಡಕಚೇರಿಯ ಸಿಬಂದಿ ರವಿ ಎಂಬವರ ವಿರುದ್ಧ ದೂರುಗಳಿದ್ದರೂ ಇಲ್ಲಿ ತನಕ ಬದಲಾವಣೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ನಾಡಕಚೇರಿಯ ಸಮಸ್ಯೆ ತಹಶೀಲ್ದಾರ್‌ ಗಮನಕ್ಕೆ ತರಲು ನಿರ್ಣಯಿ ಸಲಾಯಿತು.

ಪೆರಿಯಡ್ಕದಿಂದ ಕೊಯಿಲ ಗ್ರಾಮದ ಗಂಡಿಬಾಗಿಲು ಸಂಪರ್ಕಿಸುವ ರಸ್ತೆಯ ಕಲ್ಲಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 45 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಇಲ್ಲಿಯ ತನಕ ನಾಲ್ಕು ಶಾಸಕರಿಗೂ ಮನವಿ ಮಾಡಲಾಗಿದೆ. ಆದರೆ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಗ್ರಾಮಸ್ಥ ಜಯರಾಮ ಹಾಗೂ ಇತರರು ಜಿ.ಪಂ. ಸದಸ್ಯೆ ಶಯನಾ ಜಯಾನಂದ ಅವರಲ್ಲಿ ಆಕ್ರೋಶದಿಂದಲೇ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾ.ಪಂ. ಅಧ್ಯಕ್ಷರು, ಅಗರಿ ಎಂಬಲ್ಲಿ ರಸ್ತೆ ಇಕ್ಕಟ್ಟಾಗಿತ್ತು. ಅದನ್ನು ವಿಸ್ತರಿಸಲಾಗಿದೆ. ಸಡಕ್‌ ಯೋಜನೆಯಡಿ ಅನುದಾನ ಮಂಜೂರಾದಲ್ಲಿ ಸೇತುವೆ ನಿರ್ಮಾಣವೂ ಆಗಲಿದೆ ಎಂದರು.

ಗ್ರಾಮಸ್ಥ ಚೆನ್ನಕೇಶವ ಮಾತನಾಡಿ, ಇಲ್ಲಿ ಸೇತುವೆ ನಿರ್ಮಾಣಕ್ಕೆ 1984ರಲ್ಲೇ ಅನುದಾನ ಮಂಜೂರಾಗಿತ್ತು. ಆದರೆ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ. ಈ ಹಿಂದಿನ ಶಾಸಕರು 50 ಲಕ್ಷ ರೂ.ಅನುದಾನ ಕಾಯ್ದಿರಿಸಿದ್ದರೂ ಅದನ್ನು ರಸ್ತೆ ಕಾಂಕ್ರಿಟ್‌ ಕಾಮಗಾರಿಗೆ ಬಳಸಲಾಗಿದೆ ಎಂದರು. ಅಧ್ಯಕ್ಷರು ಮಾತನಾಡಿ, ಪ್ರಾಶಸ್ತ್ಯದಲ್ಲಿ ಅನುದಾನ ಮಂಜೂರು ಮಾಡಿ, ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡೋಣ ಎಂದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ರಸ್ತೆ ನಿಯಮ ಉಲ್ಲಂಘನೆ ಮಾಡುವವರಿಗೆ ವಿಪರೀತ ದಂಡ ವಿಧಿಸುತ್ತಿರುವುದಕ್ಕೆ ಗ್ರಾಮಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಗ್ರಾಮಸ್ಥ ಯಶವಂತ ಸರೋಳಿ ಮಾತನಾಡಿ, ಕಳ್ಳತನ ಮಾಡಿದವನಿಗೆ ಜಾಮೀನು ಸಿಗುತ್ತದೆ. ಆದರೆ ರಸ್ತೆ ನಿಯಮ ಉಲ್ಲಂ ಸಿದವರಿಗೆ ವಿಪರೀತ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು, ರಸ್ತೆ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡದ ಮೊತ್ತ ಕಡಿಮೆ ಮಾಡಬೇಕು ಹಾಗೂ ರಸ್ತೆಗಳ ದುರಸ್ತಿಗೆ ಆದ್ಯತೆ ಕೊಡಬೇಕೆಂದು ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೂ ಅಂಗನವಾಡಿಯಂತೆ ಪೌಷ್ಟಿಕಾಂಶದ ಆಹಾರ ನೀಡಬೇಕೆಂದು ಯಶವಂತ ಸರೋಳಿ ಹಾಗೂ ಇತರರು ಆಗ್ರಹಿಸಿದರು.ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪುರುಷರ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ಕೂಲಂಕಷ ತನಿಖೆ ನಡೆಸಿ ನಿರಪರಾಧಿಗಳಿಗೆ ಅನ್ಯಾಯವಾಗದಂತೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ನಿತ್ಯಾನಂದ ಶೆಟ್ಟಿ ಆಗ್ರಹಿಸಿದರು. ರಾಮಕೃಷ್ಣ ಧ್ವನಿಗೂಡಿಸಿದರು.

ಹಿರೇಬಂಡಾಡಿ ಗ್ರಾಮವು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದೆ. ಆದರೆ ಇಲ್ಲಿಯವರಿಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಹೋಗುವುದು ಸುಲಭ. ಈಗ ಹಿರೇಬಂಡಾಡಿಯಲ್ಲಿ ಸಾಕಷ್ಟು ಜನಸಂಖ್ಯೆ ಇರುವುದರಿಂದ ಇಲ್ಲೇ ಆರೋಗ್ಯ ಕೇಂದ್ರ ಆರಂಭಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದ್ದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಶೌಕತ್‌ ಆಲಿ ಹೇಳಿದರು. ಹಿರೇಬಂಡಾಡಿಗೆ 108 ಆ್ಯಂಬುಲೆನ್ಸ್‌ ಸೇವೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕೃಷಿ ಇಲಾಖೆಯ ಸಹಯೋಗದಲ್ಲಿ ಬ್ರಹ್ಮಾವರದ ಸಂಸ್ಥೆಯೊಂದು ಸಾವಯವ ಕೃಷಿಕರಿಗೆ ಡ್ರಮ್‌ ವಿತರಿಸಿದೆ. ಆದರೆ ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂದು ನಿತ್ಯಾನಂದ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಭರಮಣ್ಣನವರ, ಶೂನ್ಯ ಬಂಡವಾಳ ಯೋಜನೆಯಡಿ ಹಿರೇಬಂಡಾಡಿ ಹಾಗೂ ಬಜತ್ತೂರು ಗ್ರಾಮದ 44 ರೈತರಿಗೆ ಸಂಸ್ಥೆಯೇ ಡ್ರಮ್‌ ವಿತರಣೆ ಮಾಡಲಾಗಿದೆ. ಈ ಬಗ್ಗೆ ಗ್ರಾಮದಲ್ಲಿ 2 ಸಲ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಿರೇಬಂಡಾಡಿ ಗ್ರಾಮಕ್ಕೆ ಸಂಬಂಧಿಸಿದಂತೆ ಕೃಷಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು 10ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡುತ್ತಿದ್ದಾರೆ. ಅವರ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಕಿಶೋರ್‌ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಹಿರೇಬಂಡಾಡಿ ಸ.ಹಿ.ಪ್ರಾ. ಶಾಲೆಯಲ್ಲಿನ ಬೂತ್‌ ನಂ. 48ರಲ್ಲಿ ಮತದಾರರ ಸಂಖ್ಯೆ ಅಧಿಕವಾಗಿದ್ದು, ಪ್ರತಿ ಸಲವೂ ರಾತ್ರಿ 8 ಗಂಟೆ ತನಕ ಮತದಾನ ನಡೆಯುತ್ತಿದೆ. ಇಲ್ಲಿ ಎರಡು ಮತದಾನದ ಬೂತ್‌ ತೆರೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ತಹಶೀಲ್ದಾರ್‌ಗೆ ಮನವಿ ಮಾಡಲು ನಿರ್ಣಯಿಸಲಾಯಿತು.

ಹಿರೇಬಂಡಾಡಿಲ್ಲಿ ಸರಕಾರಿ ಪ್ರೌಢಶಾಲೆ ಆರಂಭಿಸುವ ನಿಟ್ಟಿನಲ್ಲಿ ತಾ.ಪಂ. ಸದಸ್ಯರೂ ಆಗಿದ್ದ ಶಾಂತಿತಡ್ಡ ದಿ| ಮಾಧವ ಗೌಡರು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಅಲ್ಲಿನ ಆಟದ ಮೈದಾನಕ್ಕೆ ಅವರ ಹೆಸರು ಇಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತಾ, ಕೃಷಿ ಅಧಿಕಾರಿ ಭರಮಣ್ಣನವರ, ಗ್ರಾಮಕರಣಿಕ ರಮಾನಂದ ಚಕ್ಕಡಿ, ಜಿ.ಪಂ. ಎಂಜಿನಿಯರ್‌ ಸಂದೀಪ್‌, ಮೆಸ್ಕಾಂ ಸಹಾಯಕ ಎಂಜಿನಿಯರ್‌ ರಾಜೇಶ್‌ ಮಾಹಿತಿ ನೀಡಿದರು. ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯ ಮುಕುಂದ ಬಜತ್ತೂರು ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮೀಶ, ಸದಸ್ಯರಾದ ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ವಿಶ್ವನಾಥ ಕೆಮ್ಮಾಟೆ, ಮುದ್ದ ತಾಳಿಪಡು, ಸದಾನಂದ ಗೌಡ ಅಡೆಕ್ಕಲ್‌, ಸೋಮೇಶ ಕೇಪುಳು, ಮಂಜುಳಾ ಸರೋಳಿ, ವೆಂಕಮ್ಮ ಮುರ, ಮಾಲತಿ ಕೆಮ್ಮಾರ, ಚಂದ್ರಾವತಿ ನೆಹರುತೋಟ, ನಿತಿನ್‌ ತಾರಿತ್ತಡಿ, ನಳಿನಾಕ್ಷಿ ನಾಗನಕೋಡಿ, ಪುಷ್ಪಾವತಿ ಶಾಂತಿತಡ್ಡ ಉಪಸ್ಥಿತರಿದ್ದರು. ಗ್ರಾಮಸ್ಥರಾದ ದಯಾನಂದ ಸರೋಳಿ, ನೀಲಯ್ಯ, ಪೊಡಿಯಾ ಪೂಜಾರಿ ಚರ್ಚೆಯಲ್ಲಿ ಪಾಲ್ಗೊಂಡರು. ಪಿಡಿಒ ದಿನೇಶ್‌ ಸ್ವಾಗತಿಸಿದರು. ಸಿಬಂದಿ ಸಹಕರಿಸಿದರು.

ಜಿ.ಪಂ. ಮತ್ತು ತಾ.ಪಂ. ಸದಸ್ಯರು ತಿಂಗಳಲ್ಲಿ 1 ದಿನ ಗ್ರಾ.ಪಂ. ಕಚೇರಿಯಲ್ಲಿದ್ದು ಗ್ರಾಮಸ್ಥರ ಅಹವಾಲು ಸ್ವೀಕರಿಸಬೇಕು ಎಂದು ಗ್ರಾಮಸ್ಥ ಕಿಶೋರ್‌ ಆಗ್ರಹಿಸಿದರು.

ಜಿ.ಪಂ. ಸದಸ್ಯೆ ಶಯನಾ ಜಯಾನಂದ ಪ್ರತಿಕ್ರಿಯಿಸಿ, ದಿನ ನಿಗದಿಗೊಳಿಸಿ ಭೇಟಿ ಕೊಡುವುದು ಕಷ್ಟ ಸಾಧ್ಯ. ಜಿ.ಪಂ.ನಿಂದ ಗ್ರಾಮಸ್ಥರಿಗೆ ಸವಲತ್ತುಗಳನ್ನು ತೆಗೆಸಿಕೊಡುತ್ತೇವೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು. ಹಿರೇಬಂಡಾಡಿ ಪ್ರೌಢಶಾಲೆ ಹಾಗೂ ಹಿ.ಪ್ರಾ. ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೂ ಜಿ.ಪಂ. ಸದಸ್ಯೆ ಗೈರು ಹಾಜರಾಗಿದ್ದಾರೆ ಎಂದು ಗ್ರಾಮಸ್ಥ ಚೆನ್ನಕೇಶವ ಹೇಳಿದರು. ನಿಯಮಾನುಸಾರ ಆಮಂತ್ರಣ ಪತ್ರದಲ್ಲಿ ಜಿ.ಪಂ. ಸದಸ್ಯರ ಹೆಸರು ಹಾಕಿದ್ದಾರೆ. ಅದೇ ದಿನ ಬೇರೆ ಕಡೆಯೂ ಕಾರ್ಯಕ್ರಮವಿದ್ದ ಕಾರಣ ಭಾಗವಹಿಸಲಿಲ್ಲ ಎಂದು ಶಯನಾ ಸ್ಪಷ್ಟ ಪಡಿಸಿದರು. ತಾ.ಪಂ. ಸದಸ್ಯ ಮುಕುಂದ ಬಜತ್ತೂರು ಮಾತನಾಡಿ, ಊರಿನ ಅಭಿವೃದ್ಧಿಗೆ ಬದ್ಧ. ಗ್ರಾಮಕ್ಕೆ ಸಾಕಷ್ಟು ಸಲ ಭೇಟಿ ಕೊಟ್ಟಿದ್ದೇನೆ. ಗ್ರಾಮದ ಸಮಸ್ಯೆ ಬಗ್ಗೆ ಯಾವುದೇ ಸಮಯದಲ್ಲಿ ತಿಳಿಸಿದರೂ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ಚನ್ನಕೇಶವ ಪ್ರತಿಕ್ರಿಯಿಸಿ, ತಾ.ಪಂ. ಸದಸ್ಯ ಮುಕುಂದ ಹಾಗೂ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್‌ ಆಲಿ ಎಲ್ಲರ ನೋವಿಗೂ ತತ್‌ಕ್ಷಣ ಸ್ಪಂದಿಸುತ್ತಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English