ಚಾರ್ಮಾಡಿ ಮತ್ತು ದಿಡುಪೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್

11:49 AM, Saturday, October 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

sindhuಬೆಳ್ತಂಗಡಿ : ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ವರದಿ ಸಲ್ಲಿಸಿ, ಮೊದಲ ಹಂತದ ಪರಿಹಾರ ಬಿಡುಗಡೆಯಾಗಿದೆ. ಬರುವ ಅನುದಾನಗಳಿಗೆ ಅನುಸಾರವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದಿಂದಾಗಿ ಹಾನಿಗೀಡಾದ ಚಾರ್ಮಾಡಿ ಹಾಗೂ ದಿಡುಪೆ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಧ್ಯಮದವರೊಂದಿಗೆ ಮಾತನಾಡಿದರು.

ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ. ಕೃಷಿ ನಾಶದ ಬಗೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೃಷಿಭೂಮಿಗೆ ಮರಳು ತುಂಬಿಕೊಂಡವರಿಗೆ, ಕೃಷಿ ನಾಶವಾಗಿರುವುದು ಹಾಗೂ ನದಿಗಳು ಪಾತ್ರ ಬದಲಿಸಿರುವುದರಿಂದ ಆಗಿರುವ ನಾಶಗಳನ್ನು ಅಂದಾಜಿಸಲಾಗಿದೆ. ಕೃಷಿ ನಾಶಕ್ಕೆ ಎನ್‌ಡಿಆರ್‌ಎಫ್ ಮಾದರಿಯಂತೆ ಪರಿಹಾರ ವಿತರಿಸಲಾಗುವುದು. ಬೆಳ್ತಂಗಡಿ ತಾಲೂಕಿನಿಂದ 1,200 ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ದಿಡುಪೆಯ ಕುಕ್ಕಾವು ಸೇತುವೆ ಹಾಗೂ ಗಣೇಶ ನಗರಕ್ಕೆ ಭೇಟಿ ನೀಡಿದ ಡಿಸಿ, ಜನರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚಾರ್ಮಾಡಿಯ ಹೊಸಮಠ ಹಾಗೂ ಅನಾರು ಪರಿಸರದಲ್ಲಿ ಸಂಭವಿಸಿದ ಅನಾಹುತಗಳನ್ನು ವೀಕ್ಷಿಸಿದರು.

ಜಿ.ಪಂ.ಕಾರ‌್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಕಂದಾಯ ನಿರೀಕ್ಷಕ ರವಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು. ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

ನದಿಗಳು ಮರಳಿನಿಂದ ತುಂಬಿದ್ದರೂ, ಕಾನೂನು ಅನುಸರಿಸಿಕೊಂಡೇ ಮುಂದುವರಿಯಬೇಕಾಗಿದೆ. ಜಿಲ್ಲೆಯಲ್ಲಿ ಮರಳು ಶೇಖರಣೆಗಳನ್ನು 22 ಕಡೆಗಳಲ್ಲಿ ಗುರುತಿಸಲಾಗಿದ್ದು, 12ರಲ್ಲಿ ಟೆಂಡರ್ ಕರೆಯುವ ಕಾರ್ಯ ನಡೆಯುತ್ತಿದೆ. ಇದೀಗ ಪ್ರವಾಹದಿಂದಾಗಿ ಮರಳು ದಿಣ್ಣೆಗಳು ಸೃಷ್ಟಿಯಾಗಿದ್ದರೆ ಅದನ್ನು ಪರಿಶೀಲಿಸಿ, ನಿಯಮದಂತೆ ತೆರವುಗೊಳಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕೃಷಿಭೂಮಿಗಳಲ್ಲಿ ತುಂಬಿರುವ ಮರಳನ್ನು ನೇರವಾಗಿ ತೆಗೆದು ಸಾಗಿಸುವಂತಿಲ್ಲ. ಅದನ್ನು ಸ್ಥಳೀಯವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾ.ಪಂ.ಮಟ್ಟದಲ್ಲಿ ಈ ಮರಳನ್ನು ತೆಗೆಯಲು ಮಾರ್ಗಸೂಚಿಗಳನ್ನು ತಯಾರಿಸಲಾಗುವುದು ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English