ಕೊಲ್ಲೂರು ಕ್ಷೇತ್ರದಲ್ಲಿ ವಿಜಯದಶಮಿ : ಸಾವಿರಾರು ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭ

1:33 PM, Tuesday, October 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kolluru kolluruಕೊಲ್ಲೂರು : ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಇಂದು ಭಕ್ತಿ ಶ್ರದ್ಧೆಯ ವಿಜಯದಶಮಿ ನಡೆಯಿತು. ನವರಾತ್ರಿಯ ಕೊನೆಯ ದಿನವಾದ ಇಂದು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ನಡೆಯಿತು. ಮುಖ್ಯವಾಗಿ ವಿದ್ಯಾದಶಮಿಯ ದಿನವಾದ ಇಂದು ಸಾವಿರಾರು ಮಕ್ಕಳು ಅಕ್ಷರಾಭ್ಯಾಸ ಮಾಡುವ ಮೂಲಕ ಸರಸ್ವತೀ ಸ್ವರೂಪಿಯಾದ ಮೂಕಾಂಬಿಕೆಯ ಕೃಪೆಗೆ ಪಾತ್ರರಾದರು.

ವಿಜಯ ದಶಮಿಯ ದಿನ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡುವುದು ಕೊಲ್ಲೂರು ಕ್ಷೇತ್ರದ ವಿಶೇಷ. ವಿದ್ಯಾದಶಮಿಯ ದಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮೊದಲ ಅಕ್ಷರಾಭ್ಯಾಸ ಮಾಡಿದರೆ ಮಕ್ಕಳು ಬುದ್ಧಿವಂತರಾಗುತ್ತಾರೆ ಮಾತ್ರವಲ್ಲ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆಂಬ ನಂಬಿಕೆ ಹಲವು ವರ್ಷಗಳಿಂದ ಇಲ್ಲಿ ಚಾಲ್ತಿಯಲ್ಲಿದೆ. ಹೀಗಾಗಿ ಇಂದು ಸಾವಿರಾರು ಮಕ್ಕಳು ವಿದ್ಯಾರಂಭ ಮಾಡಿದರು.

ಸಾಮಾನ್ಯವಾಗಿ ಇತರೆ ರಾಜ್ಯದ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಬರುವ ದೇವಸ್ಥಾನವಿದ್ದರೆ ಅದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. ಅದರಲ್ಲೂ ಕೇರಳ ರಾಜ್ಯದವರಿಗೆ ಇದು ಮೂಲದೇವಸ್ಥಾನವೂ ಹೌದು; ಹೀಗಾಗಿ ಕೇರಳದ ಸಾವಿರಾರು ಮಕ್ಕಳು ವಿದ್ಯಾದಶಮಿಯ ದಿನವಾದ ಇಂದು ವಿದ್ಯಾರಂಭ ಮಾಡಿದರು. ಪುಟ್ಟ ಮಕ್ಕಳಿಗೆ ಅರ್ಚಕರು ಅಕ್ಕಿಕಾಳಿನಲ್ಲಿ ಮೊದಲ ವಿದ್ಯಾದೀಕ್ಷೆ ನೀಡಿದರು. ಮುಂಜಾನೆ ಪ್ರಾರಂಭಗೊಂಡ ಅಕ್ಷರಾಭ್ಯಾಸ ಮಧ್ಯಾಹ್ನದ ತನಕವೂ ನಡೆಯುತ್ತದೆ. ಅಕ್ಕಿಕಾಳಿನಲ್ಲಿ ಅಕ್ಷರ ಬರೆಯುವ ಮೂಲಕ ಮತ್ತು ನಾಲಗೆಯಲ್ಲಿ ಅಕ್ಷರ ಮೂಡಿಸುವ ಮೂಲಕ ಅಕ್ಷರ ದೀಕ್ಷೆ ನೀಡಲಾಗುತ್ತದೆ. ನಂತರ ದೇವಿಯ ಸನ್ನಿಧಿಯಲ್ಲಿ ಮಕ್ಕಳ ಭವಿಷ್ಯಕ್ಕೆ ಪ್ರಾರ್ಥಿಸುವುದು ರೂಢಿ.

ಕರ್ನಾಟಕ, ಕೇರಳ, ತಮಿಳುನಾಡಿನ ಭಕ್ತಸಾಗರವೇ ಇಂದು ಮೂಕಾಂಬಿಕೆಯ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English