ಬೆಂಗಳೂರು : ರಾಜ್ಯಾದ್ಯಂತ ಅ.18ರವರೆಗೆ ಮಿಂಚು-ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ಒಂದು ವಾರದಿಂದ ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸುತ್ತಿರುವ ಮಳೆಯ ತೀವ್ರತೆ ಅ.16ರಿಂದ 18ರ ವರೆಗೆ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಶನಿವಾರ ರಾತ್ರಿ ಸುರಿದ ಮಳೆಗೆ ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಹಲವು ಮನೆಗಳ ಗೋಡೆ ಕುಸಿದಿವೆ. ಅಡಕೆ ಮರಗಳು ಮುರಿದು ಬಿದ್ದಿವೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಬೆಳಗೋಡು ಕಾಲನಿಯ ಮನೆಗೆ ಸಿಡಿಲು ಬಡಿದು ಸಾವಿತ್ರಮ್ಮ ಎಂಬುವವರು ಗಾಯಗೊಂಡಿದ್ದು, ಸಾಕು ನಾಯಿ ಸಾವನ್ನಪ್ಪಿದೆ. ಮನೆ ಗೋಡೆ ಬಿರುಕುಬಿಟ್ಟಿದ್ದು ಅನಾಹುತದಿಂದ ಕುಟುಂಬ ಪಾರಾಗಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಭಾನುವಾರ ಮಳೆ ಸುರಿದಿದ್ದು, ಹಳ್ಳ, ಕೊಳ್ಳ, ಕೆರೆ ಭರ್ತಿಯಾಗಿ ಹರಿಯುತ್ತಿವೆ. ಇನಾಮಹೊಂಗಲದ ಬಳಿ ಸವದತ್ತಿ-ಧಾರವಾಡ ಮಾರ್ಗದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಧಾರವಾಡ ದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬಂದ್ ಆಗಿದ್ದು, ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ನಡೆಯುತ್ತಿರುವ ಬೃಹತ್ ಜಾತ್ರೆಗೆ ಹೋಗಲು ರಾಜ್ಯದ ವಿವಿಧೆಡೆಯ ಲಕ್ಷಾಂತರ ಭಕ್ತರು ಪರದಾಡಿದರು. ವರುಣನ ಅಬ್ಬರದ ಮಧ್ಯೆಯೂ ಜನರು ಕೃಷಿಭೂಮಿಗೆ ತೆರಳಿ ಸಂಭ್ರಮದಿಂದ ಶೀಗಿ ಹುಣ್ಣಿಮೆ ಆಚರಿಸಿದರು.
ಧಾರವಾಡ, ಗದಗ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ಗದುಗಿನ ಲಕ್ಷೆ್ಮೕಶ್ವರ ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿ ಭಾನುವಾರ ಮನೆ ಛಾವಣಿ ಕುಸಿದು ಶೋಭಾ ರಾಮನಗೌಡ ರಾಯನಗೌಡ್ರ (45) ಮೃತಪಟ್ಟಿದ್ದು, ಪತಿ ರಾಮನಗೌಡ ಗಾಯಗೊಂಡಿದ್ದಾರೆ.
Click this button or press Ctrl+G to toggle between Kannada and English