ಮೈಸೂರು : ಬ್ಯಾಂಕ್ ವಿಲೀನಿಕರಣ ನಿಲ್ಲಿಸಿ, ಅನುತ್ಪಾದಕ ಸಾಲಗಳ ವಸೂಲಾತಿಯನ್ನು ಇನ್ನಷ್ಟು ತೀವ್ರಗೊಳಿಸಿ ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರ ಕೇಂದ್ರಭಾಗದಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬ್ಯಾಂಕಿಂಗ್ ಸೇವೆ ಇಂದಿಗೂ ಕೂಡ ಸಾವಿರಾರು ಹಳ್ಳಿಗಳನ್ನು ತಲುಪಿಲ್ಲ. ಸಾವಿರಾರು ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳ ವಿಸ್ತರಣೆ ಮುಖ್ಯವೇ ಹೊರತು ವಿಲೀಕರಣವಲ್ಲ. ಬ್ಯಾಂಕ್ ಗಳ ವಿಲೀನಕ್ಕೆ ನಮ್ಮ ವಿರೋಧವಿದೆ. ವಿಲೀನಿಕರಣದಿಂದ ಬ್ಯಾಂಕಿಂಗ್ ಸೇವೆಯು ಕುಂಠಿತಗೊಳ್ಳಲಿದೆ. ದೊಡ್ಡ ಸಾಲದಿಂದ ಸಾಲ ಮರುಪಾವತಿಯಾಗದೇ ಬ್ಯಾಂಕಿಂಗ್ ಕ್ಷೇತ್ರ ಸಂಕಷ್ಟದಲ್ಲಿದೆ.
ಹಾಗಾಗಿ ದೊಡ್ಡ ಬ್ಯಾಂಕ್ ಗಳನ್ನಾಗಿಸುವ ವಿಲೀನಿಕರಣ ಪ್ರಕ್ರಿಯೆ ಬೇಡ ಎಂದು ಒತ್ತಾಯಿಸಿದರು.
ಬ್ಯಾಂಕ್ ಗಳು ಎದುರಿಸುತ್ತಿರುವ ಅನುತ್ಪಾದಕ ಸಾಲಗಳ ಸಮಸ್ಯೆಯನ್ನು ಬಗೆಹರಿಸಲು ಅಂತಹ ಸಾಲಗಳ ವಸೂಲಾತಿಗೆ ಸರಕಾರವು ಬಿಗಿಯಾದ ಕ್ರಮವನ್ನು ಕೈಗೊಳ್ಳಬೇಕೇ ವಿನಃ ವಿಲೀನಿಕರಣ ಇದಕ್ಕೆ ಪರಿಹಾರವಲ್ಲ. ಬ್ಯಾಂಕ್ ಗಳ ವಿಲೀನಿಕರಣ ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಇನ್ನಷ್ಟು ತನ್ನ ಕೊಡುಗೆಯನ್ನು ಸೇರಿಸುತ್ತದೆ.
ಬ್ಯಾಂಕಿನ ವಿಸ್ತರಣೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾದರೆ ವಿಲೀನಿಕರಣವು ಉದ್ಯೋಗಗಳ ಕಡಿತವನ್ನು ಮಾಡುವುದು ಖಚಿತ. ವಿಲೀನಕರಣ ಅಸ್ತ್ರ ಉದ್ಯೋಗಕ್ಕೆ ಮಾರಕ ಎಂದರು. ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಹೆಚ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English