ಮುಂದಿನ ಮೂರೂವರೆ ವರ್ಷ ದೇವರ ಆಶೀರ್ವಾದದಿಂದ ನಾನೇ ಮುಖ್ಯಮಂತ್ರಿ : ಬಿ.ಎಸ್. ಯಡಿಯೂರಪ್ಪ

4:10 PM, Tuesday, November 19th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

BSY

ಬೆಂಗಳೂರು : ಮುಂದಿನ ಮೂರೂವರೆ ವರ್ಷಗಳ ಕಾಲ ದೇವರ ಆಶೀರ್ವಾದದಿಂದ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಉಪ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ವೈ, ಅವರು ಹಾಗೆ ಹೇಳಿದ್ದು ಸಂತೋಷ. ದೇವರ ಹಾಗೂ ಜನರ ಆಶೀರ್ವಾದದಿಂದ ಮುಂದಿನ ಅವಧಿಯನ್ನು ಪೂರೈಸುತ್ತೇನೆ. ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ. ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ತೀರ್ಮಾನ ಮಾಡುವವರು ಮತದಾರರು. ಮುಂದಿನ ಮೂರೂವರೆ ವರ್ಷ ಬಿಜೆಪಿಯನ್ನೇ ಪೂರ್ಣ ಅಧಿಕಾರದಲ್ಲಿ ಮುಂದುವರಿಸಬೇಕೆಂದು ಜನ ತೀರ್ಮಾನಿಸಿದ್ದಾರೆ. ಹಾಗಾಗಿ ಯಡಿಯೂರಪ್ಪನವರ ಆಡಳಿತವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದರು.

ಚುನಾವಣೆ ಬಂದಾಗ ಹಗುರವಾಗಿ ಮಾತನಾಡುತ್ತಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಏನಾಯಿತು ಎನ್ನುವುದು ಗೊತ್ತಿದೆ. ಅಂದು ಸಿದ್ದರಾಮಯ್ಯ ಏನು ಹೇಳಿದ್ದರು? ಭಾರತೀಯ ಜನತಾ ಪಕ್ಷ 22 ಸ್ಥಾನ ಗೆಲ್ಲಲಿದೆ ಎಂದು ನಾನು ಹೇಳಿದ್ದೆ. ಆದ್ರೆ ಗೆದ್ದಿದ್ದು 25 ಸ್ಥಾನಗಳನ್ನು. ಎರಡು ಪಕ್ಷಗಳು ತಲಾ ಒಂದೊಂದು ಸ್ಥಾನವನ್ನು ಮಾತ್ರ ಗೆದ್ದಿವೆ. ಮಾಜಿ ಪ್ರಧಾನಿ ದೇವೇಗೌಡರು ಸಹ ಸೋಲನುಭವಿಸಿದರು. ಇಷ್ಟಾದರೂ ಹಗುರವಾಗಿ ಮಾತನಾಡುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಭೀಕರ ಪ್ರವಾಹ ಎದುರಾದ ಸಂದರ್ಭ ಮನೆ-ಮಠ ಬಿಟ್ಟು ಒಂದು ತಿಂಗಳು ನಾನು ಆ ಸ್ಥಳದಲ್ಲಿದ್ದೆ. ಅಭಿವೃದ್ಧಿ ಕಾರ್ಯದ ಬಗ್ಗೆ ನಾನು ಗಮನ ನೀಡಿಲ್ಲವಾ? ನಮ್ಮ ಸರ್ಕಾರದಿಂದ 100 ದಿನದಲ್ಲಿ ಏನೂ ಸಾಧನೆ ಆಗೇ ಇಲ್ಲವೆ ಎಂದು ಪ್ರಶ್ನಿಸಿದರು. 15 ಕ್ಷೇತ್ರಗಳಿಗೆ ಇನ್ನೆರಡು ದಿನಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇನೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೇನೆ. ಮುಂದಿನ 13 -14 ದಿನ ಪ್ರವಾಸದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ಸಿಎಂ ತಿಳಿಸಿದರು.

ಇನ್ನು, ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ ಕುರಿತು ಮಾತನಾಡಿದ ಬಿಎಸ್ವೈ, ಪಿಎಫ್ಐ ಸಂಘಟನೆಯನ್ನು ಬೆಳೆಸಿದ್ದು ಸಿದ್ದರಾಮಯ್ಯ. ಆ ಸಂಸ್ಥೆಯ ಮೇಲಿದ್ದ ಎಲ್ಲ ಪ್ರಕರಣ ತೆಗೆದು ಹಾಕಿದ್ದರು. ಇವರು ಅಷ್ಟೊಂದು ಉತ್ತೇಜನ ನೀಡದಿದ್ದರೆ ಸಂಸ್ಥೆ ಬೆಳೆಯುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸ್ವಾರ್ಥಕ್ಕಾಗಿ ಆ ಸಂಸ್ಥೆಯನ್ನು ಬೆಳೆಸಿದರು. ಅವರ ಮೇಲಿನ ಎಲ್ಲಾ ಕೇಸುಗಳನ್ನು ವಾಪಸ್ ಪಡೆದರು. ಈಗಲಾದರೂ ಇದಕ್ಕೆ ಸ್ಪಷ್ಟ ಉತ್ತರವನ್ನು ಸಿದ್ದರಾಮಯ್ಯ ಕೊಡಬೇಕು. ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯಲು ಯಾರು ಕಾರಣ? ಅವರ ಎಲ್ಲಾ ಹಗರಣಗಳನ್ನು ಹಾಗೂ ಶಿವಮೊಗ್ಗದಲ್ಲಿ ನಡೆದ ಒಂದು ಕೊಲೆಯನ್ನು ಕೂಡ ಮುಚ್ಚಿ ಹಾಕಲಾಯಿತು. ಮೈಸೂರಿನಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಸಂಪೂರ್ಣ ರಕ್ಷಣೆ ನೀಡಿದವರು ಇದೇ ಸಿದ್ದರಾಮಯ್ಯ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English