ಕೋಲ್ಕತಾ : ಮಾಜಿ ತೃಣಮೂಲ ಕಾಂಗ್ರೆಸ್ ಸಂಸದ ತಪಸ್ ಪಾಲ್ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ, ಕೇಂದ್ರ ಸರ್ಕಾರ ಪ್ರತೀಕಾರದ ರಾಜಕಾರಣ ನಡೆಸುತ್ತಿದ್ದು ಇವರ ಒತ್ತಡದಿಂದಾಗಿ ತಪಸ್ ಸೇರಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಮೂರು ಜನ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮಾಜಿ ಸಂಸದ ತಪಸ್ ಪಾಲ್ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿರುವ ತಪಸ್ ಪಾಲ್, “ಬಿಜೆಪಿ ಮತ್ತು ಸಿಬಿಐ ಪಶ್ಚಿಮ ಬಂಗಾಳದ ವಿರುದ್ಧ ಪ್ರತೀಕಾರವೆಂಬ ಕೊಳಕು ಆಟವಾಡುತ್ತಿದೆ. ಸಿಬಿಐ ಒತ್ತಡದಿಂದಾಗಿ ನಾವು ಮೂರು ಜನರನ್ನು ಕಳೆದುಕೊಂಡಿದ್ದೇವೆ. ಈ ಹಿಂದೆ ತೃಣಮೂಲ ಕಾಂಗ್ರೆಸ್ ಸಂಸದ ಪ್ರಸೂನ್ ಬ್ಯಾನರ್ಜಿಯವರ ಪತ್ನಿ ಮತ್ತು ನಮ್ಮ ನಾಯಕ ಸುಲ್ತಾನ್ ಅಹಮದ್ (ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವ) ಅವರನ್ನು ಕಳೆದುಕೊಂಡಿದ್ದ ನಾವು, ಈಗ ತಪಸ್ ಅವರನ್ನು ಕಳೆದುಕೊಂಡಿದ್ದೇವೆ. ಸಿಬಿಐ ಒತ್ತಡದಿಂದಲೇ ಈ ಮೂವರೂ ಮೃತಪಟ್ಟಿದ್ದಾರೆ.
ಈ ಸಾವಿನಿಂದಾಗಿ ಇಡೀ ತೃಣಮೂಲ ಕಾಂಗ್ರೆಸ್ ಕುಟುಂಬ ದುಖಃದಲ್ಲಿದೆ. ಸಿಬಿಐ ನಂತಹ ಏಜೆನ್ಸಿಗಳ ಒತ್ತಡದಿಂದ ನಡೆಯುತ್ತಿರುವ ಇಂತಹ ಸಾವುಗಳನ್ನು ನಾವು ಪ್ರತಿಭಟಿಸುತ್ತೇವೆ. ಕೇಂದ್ರ ಸರ್ಕಾರ ಪ್ರತೀಕಾರದ ಆಟ ಆಡುತ್ತಿದ್ದು, ತಪಸ್ ಪಾಲ್ ವಿರುದ್ಧ ಯಾವುದೇ ಚಾರ್ಚ್ಶೀಟ್ ಸಲ್ಲಿಸದೆ ಒಂದು ವರ್ಷಗಳ ಕಾಲ ಜೈಲಿನಲ್ಲಿಡಲಾಗಿತ್ತು. ಇವರ ಹಠಾತ್ ಸಾವು ನನಗೆ ಆಘಾತ ನೀಡಿದ್ದು, ಇವರ ಸಾವಿಗೆ ಸಿಬಿಐ ನೀಡಿದ ನಿರಂತರ ಕಿರುಕುಳವೇ ಕಾರಣ” ಎಂದು ಅವರು ಕಿಡಿಕಾರಿದ್ದಾರೆ.
“ರೋಸ್ ವ್ಯಾಲಿ ಹಗರಣದಲ್ಲಿ ವೆಂಕಟೇಶ್ ಫಿಲ್ಮ್ಸ್ ಸಹ ಸಂಸ್ಥಾಪಕ ಶ್ರೀಕಾಂತ್ ಮೊಹ್ತಾ ಅವರನ್ನೂ ಸಹ ಬಂಧಿಸಲಾಗಿದೆ. ಆತನನ್ನೂ ಸಹ ಈ ಹಿಂದೆ ಒಂದು ವರ್ಷಗಳ ಕಾಲ ಜೈಲಿನಲ್ಲಿಡಲಾಗಿತ್ತು. ಇದೀಗ ಮತ್ತೆ ಬಂಧಿಸಲಾಗಿದೆ. ಹಗರಣದಲ್ಲಿ ಇವರು ನಿಜಕ್ಕೂ ತಪ್ಪಿತಸ್ಥರಾದರೆ ಕೇಂದ್ರ ಸರ್ಕಾರ ಕಾನೂನು ಬದ್ಧವಾಗಿ ಕ್ರಮ ಜರುಗಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಇವರು ಕಾನೂನನ್ನು ಪಾಲಿಸುತ್ತಾರೆಯೇ? ಎಂಬುದು ಪ್ರಮುಖ ಪ್ರಶ್ನೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ರೋಸ್ ವ್ಯಾಲಿ ಸಮೂಹವನ್ನು ನಡೆಸಲು ಪೋಂಜಿ ಯೋಜನೆಯ ಅಡಿಯಲ್ಲಿ ಸಹಾಯ ಮಾಡಿದ ಆರೋಪದ ಮೇಲೆ ತಪಸ್ ಪಾಲ್ ಅವರನ್ನು ಡಿಸೆಂಬರ್ 2016 ರ ಕೊನೆಯಲ್ಲಿ ಸಿಬಿಐ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಅಲ್ಲದೆ, ನಿರಂತರ ವಿಚಾರಣೆ ನಡೆಸಿತ್ತು ಇದೀಗ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
Click this button or press Ctrl+G to toggle between Kannada and English