ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರಧಾನ ಸಮಾರಂಭ

4:46 PM, Friday, March 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

alvas

ವಿದ್ಯಾಗಿರಿ : ಉತ್ತಮ ಬರಹಗಾರನಾಗಲು ತಾಳ್ಮೆ ಅತೀ ಅಗತ್ಯ. ಪ್ರತಿಯೊಂದು ವಿಷಯದ ಕುರಿತು ಕೂಲಂಕುಷವಾಗಿ ಚಿಂತನೆ ನಡೆಸಿ, ತದನಂತರದಲ್ಲಿ ಆ ವಿಚಾರವನ್ನು ಬರಹದ ರೂಪದಲ್ಲಿ ಮಂಡಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎ.ಎಂ. ಖಾನ್ ಹೇಳಿದರು.

ಇವರು ಆಳ್ವಾಸ್ ಕಾಲೇಜಿನಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ( ಮಾಮ್) ವತಿಯಿಂದ ನಡೆದ 2018-19ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ರಚನಾತ್ಮಕ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಕೊಡುಗೆ ಅತ್ಯಗತ್ಯ. ಆದರೆ ಆಧುನಿಕತೆಯ ಭರದಲ್ಲಿ ಸಾಗುತ್ತಿರುವ ಇಂದಿನ ಜಗತ್ತಿನಲ್ಲಿ ಯುವ ಜನಾಂಗ ಎಲ್ಲೋ ಹಳಿ ತಪ್ಪಿ ನಡೆಯುತ್ತಿದೆ. ಇಂತಹವರನ್ನು ಸರಿಯಾದ ದಾರಿಯಲ್ಲಿ ನಡೆಸಿ ಉತ್ತಮ ಸಮಾಜ ನಿರ್ಮಾಣ ಮಾಡುವುದು ಮಾಧ್ಯಮದ ಜವಬ್ದಾರಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆಯಿಂದ ದೂರವಿರಬೇಕು. ಆಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಯಶಸ್ಸು ಸಾಧಿಸಲು ಸಾಧ್ಯ. ಸಂಕುಚಿತ ಮನೋಭಾವನೆ ನಮ್ಮಲ್ಲಿ ವಿಚಾರಗಳ ಗ್ರಹಿಕೆಗೆ ಅಡ್ಡಿಯಾಗುತ್ತವೆ ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಮ್‌ನ ಅಧ್ಯಕ್ಷ ಸುರೇಶ್ ಪುದುವೆಟ್ಟು ಮಾತನಾಡಿ, ಯಾವುದೇ ಕ್ಷೇತ್ರವಾದರೂ ಸರಿ, ಅಲ್ಲಿ ಧನಾತ್ಮಕ ಚಿಂತನೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ, ಆಗ ಮಾತ್ರ ನಾವು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ ಎಂದರು.

2018-19ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿಯು ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಭಾ ಡೊಂಗ್ರೆ ಪ್ರಥಮ ಸ್ಥಾನ, ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ಚೇತನಾ ನಾಯಕ್ ದ್ವಿತೀಯ ಸ್ಥಾನ, ಪದವಿ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಶ್ರೀಕಾಂತ್ ಪಿ ಪ್ರಥಮ ಹಾಗೂ ಆಳ್ವಾಸ್ ಕಾಲೇಜಿನ ಸೋನಿಯಾ ಎಸ್ ದ್ವಿತೀಯ ಸ್ಥಾನ ಲಭಿಸಿದ್ದು ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮಂಗಳೂರು ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರು ಹಾಗೂ ಮಾಮ್ ಪ್ರಶಸ್ತಿ ತೀರ್ಪುಗಾರರು ಡಾ. ಧನಂಜಯ ಕುಂಬ್ಳೆ ತೀರ್ಪುಗಾರರ ಹಿನ್ನಲೆಯಲ್ಲಿ ಮಾತನಾಡಿದರು. ಮಾಮ್ ಇನ್‌ಸ್ಪೈರ್ ಪ್ರಶಸ್ತಿಯ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಮಾಮ್ ಸಂಚಾಲಕ ಕೃಷ್ಣ ಮೋಹನ್ ನಿರೂಪಿಸಿ, ಮಾಮ್ ಇನ್‌ಸ್ಪೈರ್ ಪ್ರಶಸ್ತಿಯ ಕೋಶಾಧಿಕಾರಿ ಕೃಷ್ಣ ಕಿಶೋರ್ ವಂದಿಸಿದರು.

‘ಪತ್ರಿಕೋದ್ಯಮ ಉಳಿಯಬೇಕಾದರೆ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ, ಬದಲಾಗಿ ಓದುಗರನ್ನು ಸೃಷ್ಠಿ ಮಾಡುವ ಅವಶ್ಯಕತೆಯಿದೆ. ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದಾಗ ಮಾತ್ರ ಇದು ಸಾಧ್ಯ’- ವೇಣು ಶರ್ಮ ಗೌರವಾಧ್ಯಕ್ಷರು, ಮಾಮ್ ಮಂಗಳೂರು

1.ಮಾಮ್ ಇನ್‌ಸ್ಪೈರ್ ಪ್ರಶಸ್ತಿಯು ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
2. ವಿದ್ಯಾರ್ಥಿಯ ಶೈಕ್ಷಣಿಕ, ಸಾಂಸ್ಕೃತಿಕ, ಬರವಣಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ವತೋಮುಖ ಪ್ರತಿಭೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ವಿಭಾ ಡೊಂಗ್ರೆ (ಪ್ರಶಸ್ತಿ ಪುರಸ್ಕೃತೆ)
ಮ್ಯಾಮ್ ಪ್ರಶಸ್ತಿಯೇ ಪ್ರತಿಯೊಬ್ಬರಿಗೂ ಸ್ಪೂರ್ತಿಯಂತೆ. ಪತ್ರಿಕೋದ್ಯಮ ವಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಭವಿಷ್ಯದ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತದೆ. ಆಳ್ವಾಸ್ ಸಂಸ್ಥೆ ದತ್ತು ಸ್ವೀಕಾರ ನೀಡಿ ಸ್ನಾತಕೋತ್ತರ ಪದವಿ ಪಡೆಯಲು ಸಹಕಾರ ನೀಡಿತು. ನನ್ನ ಶಿಕ್ಷಕವರ್ಗ ರೆಕಗ್ನಿಷನಗಾಗಿ ಬರೆಯುತ್ತಿದ್ದ ನನ್ನನ್ನು ರೆಮ್ಯೂನರೇಷನ್ ಪಡೆಯುವ ಹಾಗೆ ಮಾಡಿದ್ದಲ್ಲದೆ, ಬೈಲೈನ್‌ನಲ್ಲಿದ್ದ ನನ್ನ ಹೆಸರನ್ನು ಹೆಡ್‌ಲೈನ್‌ನಲ್ಲಿ ಬರುವ ಹಾಗೆ ಮಾಡಿತು ಎಂದರು.

ಶ್ರೀಕಾಂತ್ ಪಿ. (ಪ್ರಶಸ್ತಿ ಪುರಸ್ಕೃತ)
ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಆದರೆ ಪ್ರಶಸ್ತಿ ಪಡೆದಾಕ್ಷಣ ಪರಿಶ್ರಮ ನಿಲ್ಲಬಾರದು. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನಾನು ಐ.ಎ.ಎಸ್ ಅಧಿಕಾರಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಗುರಿ ಮತ್ತಷ್ಟು ಸ್ಪಷ್ಟವಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English