ಕೋವಿಡ್-‌19: ಧಾರವಾಡ ಜಿಲ್ಲೆಯಲ್ಲಿ 629 ಶಂಕಿತರು

12:06 PM, Monday, May 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

darwadಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ರವಿವಾರ ಒಂದು ಕೋವಿಡ್-‌19ರ ಪಾಸಿಟಿವ ಪ್ರಕ್ರಣ ಪತ್ತೆಯಾದರೆ, ರವಿವಾರ ಒಂದೇ ದಿನ 629 ಜನ ಕೊರೋನಾ ಶಂಕಿತರ ಗಂಟಲ ದ್ರವ ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿಯ ಬಗ್ಗೆ ಜನತೆ ಆತಂಕ ಪಡುತ್ತಿದ್ದಾರೆ.

ಜತೆಗೆ ಕೋರೋನಾ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಜನರ ಸಂಖ್ಯೆ ಇಮ್ಮಡಿಗೊಂಡಿದೆ. ಈವರೆಗೂ 12,500 ಜನ ನಿಗಾದಲ್ಲಿದ್ದರು. ಈಗ ಈ ಸಂಖ್ಯೆ 13,154 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ 12,442 ಕೊರೋನಾ ಶಂಕಿತರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 11,315 ಜನರ ವರದಿ ನೆಗೆಟಿವ್‌ ಆಗಿದ್ದರೆ, 39 ಜನರ ವರದಿ ಪಾಸಿಟಿವ್‌ ಬಂದಿದೆ. ಇವರಲ್ಲಿ 29 ಜನ ಇನ್ನೂ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಜನ ಗುಣಮುಖರಾಗಿದ್ದಾರೆ. 1098 ಜನರ ವರದಿ ಬರಬೇಕಿದೆ.

ಜಿಲ್ಲಾ ಆರೋಗ್ಯ ಇಲಾಖೆಯು ವಿದೇಶದಿಂದ ಬಂದವರ ಹಾಗೂ ಅವರ ಸಂಪರ್ಕಕ್ಕೆ ಒಳಗಾದವರ ಮೇಲೆ ನಿಗಾ ಇಟ್ಟಿದೆ. ಇವರಲ್ಲಿ 6376 ಜನ ಮನೆಯಲ್ಲಿಯೇ 14 ದಿನಗಳ ಕ್ವಾರಂಟೈನ್‌ ನಲ್ಲಿದ್ದರೆ, 29 ಜನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೂ 2895 ಜನ 28 ದಿನದ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ.
ಹೊರ ರಾಜ್ಯಗಳಿಂದ ಬಂದ 90 ಜನರು ಕೊರೋನಾ ತಪಾಸಣೆಗೆ ಒಳಗಾಗದೆ ಜನರಲ್ಲಿ ಆತಂಕ ಮೂಡಿಸಿದ್ದರು. ಆದರೆ ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಬಂದು ತಪಾಸಣೆಗೊಳಗಾಗದೆ ತಪ್ಪಿಸಿಕೊಂಡಿದ್ದ 90 ಜನರನ್ನು ಪತ್ತೆ ಹಚ್ಚಿದ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನು ತಪಾಸಣೆಗೊಳಿಸಿದ್ದಾರೆ. ಇವರಲ್ಲಿ ಕೆಲವರು ಕಾನೂನಿನ ಭಯದಿಂದ ಮನೆಯಲ್ಲಿಯೇ ಕ್ವಾರಂಟೈನ್‌ ಗೊಳಗಾಗಿದ್ದರೆ, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಆಗಮನ ಕೇಂದ್ರದ ನೋಡಲ್‌ ಅಧಿಕಾರಿ, ಡಿಡಿಪಿಐ ಎಂ.ಎಲ್.‌ ಹಂಚಾಟೆ ಮೆಗಾಮೇಡಿಯಾ ನ್ಯೂಸ್‌ಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನತೆಗೆ ಇನ್ನೂ ಕೊರೋನಾ ಭಯದಿಂದ ಹೊರ ಬರಲು ಆಗುತ್ತಿಲ್ಲ.

ವೈದ್ಯರಿಗೆ ಕೇಂದ್ರ ಸಚಿವ ಜೋಶಿ ಶ್ಲಾಘನೆ
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಹುಬ್ಬಳ್ಳಿಯ ಕಿಮ್ಸ್‌ ವೈದ್ಯರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರವಿವಾರ ದೂರವಾಣಿ ಮೂಲಕ ಮಾತನಾಡಿ, ಪ್ರಧಾನಿ ಪರವಾಗಿ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವರದಿ: ಶಂಭು
ಮೆಗಾಮೇಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English