ಮಂಗಳೂರು :ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಚೆನೈ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಸೋಮವಾರ ಮಕ್ಕಳ ಚಲನಚಿತ್ರೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ಬಾಲಕಲಾವಿದೆ ಜ್ಞಾನಾ ಐತಾಳ್ ಸಮಾರಂಭಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಎನ್. ವಿಜಯಪ್ರಕಾಶ್ ಅಧ್ಯಕ್ಷತೆ ವಹಿಸಿ ಅಸಾಧಾರಣ ಪ್ರತಿಭೆ ಮೂಲಕ ಅರ್ಥಪೂರ್ಣ ಉದ್ಘಾಟನೆ ನಡೆದಿದೆ. ಚಲನಚಿತ್ರದ ಸಂದೇಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದು ಪ್ರದರ್ಶನದ ಉದ್ದೇಶ. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಸತ್ಯ, ನಿಷ್ಠೆ ಹಾಗೂ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಗರದ ಜ್ಯೋತಿ, ಶ್ರೀನಿವಾಸ ಚಿತ್ರ ಮಂದಿರದಲ್ಲಿ ‘ಪುಟಾಣಿ ಪಾರ್ಟಿ’, ಸೆಂಟ್ರಲ್ನಲ್ಲಿ ‘ಒಂದು ಅದ್ಬುತ’, ಪ್ಲಾಟಿನಂನಲ್ಲಿ ‘ಮಹೇಕ್ ಮಿರ್ಜಾ’, ಪ್ರಭಾತ್ನಲ್ಲಿ ‘ಲೈಕಿ’, ಸುಚಿತ್ರಾದಲ್ಲಿ ‘ಪುಟ್ಟನ ಮಹಾಭಾರತ’, ರಾಮಕಾಂತಿಯಲ್ಲಿ ‘ಚಮತ್ಕಾರದ ಕೋಟು’, ನ್ಯೂಚಿತ್ರದಲ್ಲಿ ‘ಪ್ರಿನ್ಸ್ ಅಂಡ್ ದಿ ಕ್ರೌನ್ ಆಫ್ ಸ್ಟೋನ್ಸ್’, ರೂಪವಾಣಿಯಲ್ಲಿ ‘ಬಂಗಾರಿ’ ಚಲನಚಿತ್ರ ಪ್ರದರ್ಶನಗೊಂಡು ಬೆಳಗ್ಗಿನ ಪ್ರದರ್ಶನ ಮಕ್ಕಳಿಗೆ ಮೀಸಲಾಗಿತ್ತು.
ಮಕ್ಕಳ ಚಲನಚಿತ್ರೋತ್ಸವ ಸಮಿತಿ ಸಹಾಯಕ ವಿತರಣ ಅಧಿಕಾರಿ ಚಾರ್ಲ್ಸ್ ಡಿಸೋಜ ರವರು ಮಾತನಾಡಿ ಯಶಸ್ವಿ ಚಿತ್ರಗಳು ಮಾತ್ರ ಥಿಯೇಟರ್ಗಳಲ್ಲಿ ರಾರಾಜಿಸುತ್ತಿವೆ. ಮಕ್ಕಳ ಸಿನಿಮಾಗಳನ್ನು ಫ್ಲಾಪ್ ಎಂದು ಎಲ್ಲೂ ಪ್ರದರ್ಶನ ನೀಡುವುದಿಲ್ಲ. ನಮ್ಮ ಬಳಿ ಮನೋರಂಜನೆ, ಸಂದೇಶಗಳ 100ಕ್ಕೂ ಹೆಚ್ಚು ಮಕ್ಕಳ ಸಿನಿಮಾಗಳಿವೆ. ಆದರೆ, ಪ್ರದರ್ಶನಕ್ಕೆ ಸಮಸ್ಯೆ ಇದೆ. ಇಲ್ಲಿ ಜಿಲ್ಲಾಧಿಕಾರಿ ಹಾಗೂ ಥಿಯೇಟರ್ ಮಾಲೀಕರ ಸಹಾಯದಿಂದ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ ಎಂದರು.
ಹೆಚ್ಚುವರಿ ಜಿಲ್ಲಾ ಧಿಕಾರಿ ದಯಾನಂದ ಕೆ.ಎ., ಮಂಗಳೂರು ಉತ್ತಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಮಯ್ಯ, ಜ್ಯೋತಿ ಸಿನಿಮಾ ಮಂದಿರದ ಉಪಪ್ರಬಂಧಕ ಉದಯಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ನವೆಂಬರ್ 28ರಂದು ಸುರತ್ಕಲ್ ನಟರಾಜ್ ಥಿಯೇಟರ್ನಲ್ಲಿ ಅಂಗರಗುಂಡಿ, ಕೆಂಜಾರು, ಮೀನಕಳಿಯ, ವಿದ್ಯಾದಾಯಿನಿ ಶಾಲೆ ವಿದ್ಯಾರ್ಥಿಗಳಿಗೆ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದೆ.
Click this button or press Ctrl+G to toggle between Kannada and English