ಮಂಗಳೂರು : ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆರ್ ಟಿ ಸಿ ಸಹಿತ ದಾಖಲೆಗಳು ಸಿಗುತ್ತಿಲ್ಲ ಎಂಬ ಜನರ ದೂರಿಗೆ ಸ್ಪಂದಿಸಿ ದಿಢೀರ್ ದಾಖಲೆ ಪರಿಶೀಲಿಸಿದ ಅವರು ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನ ಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಒಂದಾ ಕೆಲಸ ಮಾಡಿಸಿ ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕಿ ಬಿಡಿ ಎಂದು ತಹಶೀಲ್ದಾರ್ ಗುರುಪ್ರಸಾದ್ ಗೆ ಸೂಚಿಸಿದರು.
ನನ್ನ ಕಛೇರಿಯಲ್ಲಿ ಜನ ಬಂದು ದೂರು ಕೊಡುವ ಪ್ರಸಂಗ ಎದುರಿಸುವಂತಾಗಿದೆ. ಇಷ್ಟು ಜನ ಇದ್ದು ದಾಖಲೆ ನೀಡದೆ ತಿಂಗಳು ಗಟ್ಟಲೆ ಏಕೆ ಸತಾಯಿಸುತ್ತಿದ್ದೀರಿ, ಕಡತ ಯಾಕೆ ವಿಲೇವಾರಿ ಆಗುತ್ತಿಲ್ಲ, ಕಾರಣ ಕೊಡಿ. ಇಲ್ಲದಿದ್ದರೆ ಇಲಾಖೆಗೆ ಆದೇಶಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ರೆಕಾರ್ಡ್ ರೂಂನಲ್ಲಿ 4ಜನ ಕೆಲಸಕ್ಕೆ ಇದ್ದಾರೆ. ಕಳೆದ 6 ವರ್ಷದಿಂದ ಒಂದೆರೆಡು ವರ್ಷದವರೆಗೆ ಕೆಲಸ ಮಾಡಿದ ಅಧಿಕಾರಿಗಳಿದ್ದಾರೆ. ಕೆಲಸ ಆಗದ್ದಕೆ ಕಾರಣ ನೀಡಿ ಎಂದು ಆದೇಶಿಸಿದರು. 5-6 ತಿಂಗಳು ಕೆಲಸ ಆಗದಿದ್ದರೆ ಹೇಗೆ, ಹಳೆಯ ದಾಖಲೆ ಸರಿಪಡಿಸಿಕೊಳ್ಳಲು ಆಗದಿದ್ದರೆ ಏಕೆ ಎಂದು ಕಾರಣ ಹೇಳಿ. ಹೀಗೆಯೇ ಮುಂದುವರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಇದೇ ಸಂದರ್ಭ ಮಿನಿ ವಿಧಾನ ಸೌಧದಲ್ಲಿರುವ ವಿವಾಹ ನೋಂದಣಿ ಹಾಗೂ ಭೂದಾಖಲೆ ಪತ್ರಗಳ ರೆಕಾರ್ಡ್ ರೂಮಿಗೂ , ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಾರ್ವಜನಿಕರಿಗೆ ವಿನಾಕಾರಣ ಸತಾಯಿಸದಂತೆ ಸೂಚಿಸಿದರು.
Click this button or press Ctrl+G to toggle between Kannada and English