ಮಂಗಳೂರು: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019-20ರಲ್ಲಿ ಕಳುವಾದ ಸ್ವತ್ತುಗಳ ಪರೇಡ್ ಶನಿವಾರ ಮಂಗಳೂರು ಪೊಲೀಸ್ ಕವಾಯತು ಮೈದಾನಿನಲ್ಲಿ ನಡೆಯಿತು.
ಮಂಗಳೂರು ನಗರ ಪೊಲೀಸರಿಂದ ವಾರಸುದಾರರಿಗೆ ಸ್ವತ್ತುಗಳ ಹಸ್ತಾಂತರ ಈ ಸಂದರ್ಭ ನಡೆಯಿತು. ಈ ಅವಧಿಯಲ್ಲಿ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9,05,35,412 ರೂ. ಮೌಲ್ಯದ ಸ್ವತ್ತುಗಳು ಕಳುವಾಗಿದ್ದು, ಅದರಲ್ಲಿ ಒಟ್ಟು 5,37,86,517 ರೂ. ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಲಾಗಿದೆ. ಅವುಗಳಲ್ಲಿ ಇಂದು 2.277 ಕೆಜಿ ಚಿನ್ನಾಭರಣ, 25 ದ್ವಿಚಕ್ರ ವಾಹನಗಳು, 19 ಮೊಬೈಲ್ ಫೋನ್ಗಳು, 11 ಇತರ ಸ್ವತ್ತುಗಳು ಸೇರಿ 48,13,951 ರೂ. ನಗದು ಹಾಜರುಪಡಿಸಲಾಗಿದೆ. ನಗ-ನಗದು ಹಾಗೂ ಸ್ವತ್ತಿನ ಮೌಲ್ಯ 1,49,35,611 ರೂ. ಆಗಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದರು.
ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆ ಬಂದರು, ಕೇಂದ್ರ ಉಪ ವಿಭಾಗ ಮಂಗಳೂರು ಪೂರ್ವ ಪೊಲೀಸ್ ಠಾಣೆ, ಉರ್ವ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆ, ಕಾವೂರು ಪೊಲೀಸ್ ಠಾಣೆ, ಮೂಡುಬಿದಿರೆ ಪೊಲೀಸ್ ಠಾಣೆ, ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಪ್ರಕರಣಗಳ ಸ್ವತ್ತುಗಳನ್ನು ಫಿರ್ಯಾದುದಾರರಿಗೆ ಹಸ್ತಾಂತರ ಮಾಡಲಾಯಿತು.
ಇಂದು ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಒಟ್ಟು 1,49,35,611 ರೂ. ಮೌಲ್ಯದ ನಗ-ನಗದು ಹಾಗೂ ಸ್ವತ್ತುಗಳನ್ನು ಫಿರ್ಯಾದುದಾರರಿಗೆ ಹಸ್ತಾಂತರ ಮಾಡಲಾಗಿದೆ. ಉಳಿದವುಗಳನ್ನು ಪರವಾನಗಿ ಬಂದ ತಕ್ಷಣ ಹಿಂದಿರುಗಿಸಲಾಗುತ್ತದೆ. ಈ ಸಂದರ್ಭದಲ್ಲಿ ತನಿಖೆ ನಡೆಸಿ ಕಳವು ಪ್ರಕರಣಗಳನ್ನು ಭೇದಿಸಿದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ವಿಕಾಸ್ ಕುಮಾರ್ ಹೇಳಿದರು.
Click this button or press Ctrl+G to toggle between Kannada and English