ದಕ್ಷಿಣ ಕೊರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 13 ಲಕ್ಷ ವಂಚಿಸಿದ ಮಂಗಳೂರಿನ ನಕಲಿ ಏಜೆಂಟ್

3:47 PM, Friday, January 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Yogish Shettyಮಂಗಳೂರು  :  ದಕ್ಷಿಣ ಕೊರಿಯಾದಲ್ಲಿ ತಿಂಗಳಿಗೆ 2 ಲಕ್ಷ ರೂಪಾಯಿ ಸಿಗುವ ಉದ್ಯೋಗ ಇದೆ ಎಂದು 13 ಲಕ್ಷ ಪಡೆದು ಮೂವರು ಅಮಾಯಕರನ್ನು  ವಂಚಿಸಿರುವುದಾಗಿ  ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ.

ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್, ಬಂದರು, ಮಂಗಳೂರು ಎಂಬ ಕಚೇರಿ ತೆರೆದು ಶಂಶೀರ್ ರಿಜ್ವಾನ್ ಎಂಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸಕ್ತಿ ಇರುವವರನ್ನು ಕಚೇರಿಗೆ ಕರೆಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಮಹಮ್ಮದ್ ನಿಯಾಝ್, ಬಿನ್. ಅಬ್ದುಲ್ ಅಝೀಝ್,  ಶಹನವಾಜ್, ಬಿನ್. ಅಬ್ದುಲ್ ಕರೀಂ, ಮಹಮ್ಮದ್ ಇರ್ಫಾನ್, ಬಿನ್. ಮಹಮ್ಮದ್ ಮನ್ಸೂರ್ ಎಂಬವರು ಈ ವ್ಯಕ್ತಿಯ ಮಾತುಗಳನ್ನು ನಂಬಿ ಬಾರಿ ಮೊತ್ತದ ದುಡ್ಡನ್ನು ಕಳಕೊಂಡದಲ್ಲದೆ ಇಂಡೋನೇಷಿಯಾದ ಕ್ಕೆ ಅಕ್ರಮವಾಗಿ ಕಳುಹಿಸಿ ಅಲ್ಲಿನ  ಸೆರೆಮನೆ ವಾಸ ಮಾಡಿಸಿರುವುದಾಗಿಯೂ  ಹೇಳಿಕೊಂಡಿದ್ದಾರೆ.

ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್, ಬಂದರು, ಮಂಗಳೂರು ಸಂಸ್ಥೆಯ ಮಾಲೀಕ ಎ.ಕೆ. ಅಬ್ದುಲ್ಲ ಫೈಜಿ ಸಾಲೆತ್ತೂರು ಎಂಬವರ ಮಗ ಶಂಶೀರ್ ರಿಜ್ವಾನ್ ಎಂಬವರನ್ನು ಸಂಪರ್ಕಿಸಿರುತ್ತಾರೆ. ತಮ್ಮ ವಿದ್ಯಾರ್ಹತೆಗೆ ಹೊಂದಿಕೊಳ್ಳುವ ಉತ್ತಮ ಉದ್ಯೋಗವು ದಕ್ಷಿಣ ಕೊರಿಯಾದಲ್ಲಿದ್ದು, ಕೂಡಲೇ ವೀಸಾ ದೊರಕಿಸಿಕೊಡುವ ಭರವಸೆಯನ್ನು ಶಂಶೀರ್ ರಿಜ್ವಾನ್ ನೀಡಿ, ಮಹಮ್ಮದ್ ನಿಯಾಝ್,  ಶಹನವಾಜ್ ಮತ್ತು  ಮಹಮ್ಮದ್ ಇರ್ಫಾನ್ ಅವರ  ಅಸಲಿ ಪಾಸ್‌ಪೋರ್ಟ್‌ನ್ನು ಶಾಲಾ ದಾಖಲಾತಿಗಳ ಜೆರಾಕ್ಸ್ ಪ್ರತಿ, ಭಾವಚಿತ್ರಗಳ 5 ಪ್ರತಿಗಳು ಹಾಗೂ ಸುಮಾರು ರೂ.13,00,000/- ಲಕ್ಷ ಗಳನ್ನು ನಗದಿನ ರೂಪದಲ್ಲಿ ಪಡೆದು ಕೂಡಲೇ ದಕ್ಷಿಣ ಕೊರಿಯಾದಲ್ಲಿ ತಿಂಗಳೊಂದಕ್ಕೆ ರೂ. 2,00,000/-  ಲಕ್ಷ  ತಿಂಗಳ ಸಂಬಳ ಹಾಗೂ ಇತರ ಸೌಲಭ್ಯಗಳೊಂದಿಗೆ ಉತ್ತಮ ಹುದ್ದೆಯನ್ನು ಹೆಸರಾಂತ ಕಂಪನಿಯಲ್ಲಿ ಒದಗಿಸಿಕೊಡುವ ಆಸೆ ಹಾಗೂ ಆಮಿಷವನ್ನು ನೀಡಿರುವುದರಿಂದ ಆತನ ನಯ ವಿನಯದ ಮೋಡಿಯ ಮಾತನ್ನು ನಂಬಿ ಶಂಶೀರ್ ರಿಜ್ವಾನ್‌ರಿಗೆ ಸುಮಾರು ರೂ.13,00,000/- ಲಕ್ಷ ಗಳನ್ನು ನೀಡಿರುತ್ತಾರೆ. ಸದ್ರಿ ಮೊತ್ತವನ್ನು ಅವರು ಸಹೋದರಿಯ ಚಿನ್ನಾಭರಣಗಳನ್ನು ತಂದೆಯವರು ಅಡವಿಟ್ಟು ನೀಡಿರುತ್ತಾರೆ.  ಹಣ ಪಡೆದ ನಂತರ ಉದ್ಯೋಗ ಅರಸುವ ಯುವಕರಿಗೆ ‘ಶಂಶೀರ್ ರಿಜ್ವಾನ್’ ನೇರವಾಗಿ ಇಲ್ಲಿಂದ ದಕ್ಷಿಣ ಕೊರಿಯಾಕ್ಕೆ ವೀಸಾ ಪಡೆಯಲಾಗುವುದಿಲ್ಲ. ಆದ್ದರಿಂದ ತಾತ್ಕಲಿಕ ವೀಸಾದಲ್ಲಿ ಇಂಡೋನೇಷ್ಯಾ ತಲುಪಿ ಅಲ್ಲಿಂದ ಖಾಯಂ ವೀಸಾವನ್ನು ದಕ್ಷಿಣ ಕೊರಿಯಾಕ್ಕೆ ಒದಗಿಸಿಕೊಡುವ ವ್ಯವಸ್ಥೆಯನ್ನು ಇಂಡೋನೇಷಿಯಾದ ಕಛೇರಿ ಮೂಲಕ ಮಾಡಿಕೊಡುವುದಾಗಿ ನಂಬಿಸಿ ತಾತ್ಕಲಿಕ ವೀಸಾದಲ್ಲಿ ಇಂಡೋನೇಷ್ಯಾಕ್ಕೆ ತೆರಳುವ ಏರ್ಪಾಡು ಮಾಡಿರುತ್ತಾನೆ. ಇಂಡೋನೇಷ್ಯಾ ತಲುಪಿದ ಯುವಕರನ್ನು ಅಲ್ಲಿ ಏರ್‌ಪೋರ್ಟಿನಿಂದ ಕರೆದುಕೊಂಡು ಹೋಗಲು ಬಂದು ಅಲ್ಲಿ ಪುನಃ ರೂ.2,59,000/- ಲಕ್ಷ ವನ್ನು ಪಡೆದಿರುತ್ತಾನೆ.  ಬಳಿಕ ಯುವಕರನ್ನು ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕೊರಿಯಾ ಕಂಪನಿಯಲ್ಲಿ ಉದ್ಯೋಗ ಕೊಡಿಸುವ ಆಮಿಷದಲ್ಲಿ ತಾತ್ಕಾಲಿಕ ವೀಸಾದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಸದ್ರಿ ಶಂಶೀರ್ ರಿಜ್ವಾನ್ ಸಂಪರ್ಕದಲ್ಲಿದ್ದು ಆತನು ದಕ್ಷಿಣ ಕೊರಿಯದಲ್ಲಿ ಖಾಯಂ ವೀಸಾ ಸಿದ್ಧಗೊಳ್ಳುತ್ತಿರುವುದಾಗಿಯೂ, ಸ್ವಲ್ಪ ದಿವಸ ಕಾಯುವಂತೆಯೂ ಹೇಳುತ್ತಿದ್ದನು.

ದಿನಾಂಕ 06.09.2020 ರಂದು ಸದ್ರಿ ಮನೆಯಲ್ಲಿ ಅಕ್ರಮ ವಾಸ್ತವ್ಯ ಹೂಡಿರುವ ಆರೋಪದಲ್ಲಿ ಯುವಕರನ್ನು ಬಂಧಿಸಿ 14 ದಿನ ಇಂಡೋನೇಷಿಯಾದ ಕೋಟಾ ಬೊಗೊರ್ ಎಂಬಲ್ಲಿರುವ ಇಮಿಗ್ರೇಷನ್ ಆಫೀಸಿನ ಜೈಲ್ಲಿನಲ್ಲಿಡಲಾಗಿದ್ದು ಇಂಡೋನೇಷ್ಯಾದಲ್ಲಿ ಉಳಿದುಕೊಂಡಿದ್ದ ಸಮಯದ ಖರ್ಚು ವೆಚ್ಚಗಳಿಗೆ ಯುವಕರ ತಂದೆಯವರು ಸಾಲ ಮಾಡಿ ರೂ.6,29,000/- ವನ್ನು ಕಳುಹಿಸಿಕೊಟ್ಟಿದ್ದರು. ಸದ್ರಿ ಶಂಶೀರ್ ರಿಜ್ವಾನ್ ಮತ್ತು ಅವನೊಂದಿಗೆ ಉಳಿದುಕೊಂಡಿದ್ದ ಮೂರು ಮಂದಿಯ ಯಾವುದೇ ಯೋಗಕ್ಷೇಮಗಳನ್ನು ನೋಡಿಕೊಳ್ಳದೆ ಬಂಧಿತರಾಗಿ ಜೈಲು ಸೇರಿದ ನಂತರ ಅವರ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿರುತ್ತಾನೆ. ವಿದೇಶದಲ್ಲಿ ಮ್ಯಾನ್‌ಪವರ್ ಒದಗಿಸಿಕೊಡುವ ಅನುಮತಿ ಪತ್ರವನ್ನು ವಿದೇಶಾಂಗ ಇಲಾಖೆಯಿಂದ ಸದ್ರಿ ಶಂಶೀರ್ ರಿಜ್ವಾನ್ ಹೊಂದಿಲ್ಲದ ವಿಷಯ ಇಂಡೋನೇಷ್ಯಾದಲ್ಲಿ ಉಳಿದುಕೊಂಡಿದ್ದ ಸಮಯದಲ್ಲಿ ಯುವಕರಿಗೆ ತಿಳಿದುಬಂತು. ಸದ್ರಿ ಶಂಶೀರ್ ರಿಜ್ವಾನ್ ಇಂಡೋನೇಷ್ಯದಲ್ಲಿರುವ ಏಜೆನ್ಸಿಯೊಬ್ಬರಿಗೆ ಮಂಗಳೂರಿನಿಂದ ತಾತ್ಕಾಲಿಕ ವೀಸಾದಲ್ಲಿ ಜನರನ್ನು ಕಳುಹಿಸಿಕೊಟ್ಟು ಅವರಿಗೆ ಸ್ವಲ್ಪ ಹಣ ನೀಡಿ ಉಳಿದ ಹಣವನ್ನು ಆತನೇ ಲಪಟಾಯಿಸುತ್ತಿದ್ದ ಎಂಬ ಸಂಗತಿ ತಿಳಿದುಬಂತು. ಆದರೆ ದಕ್ಷಿಣ ಕೊರಿಯಾದಲ್ಲಿ ಖಾಯಂ ವೀಸಾ ಒದಗಿಸಿಕೊಡುವ ಬಗ್ಗೆ ಯಾವುದೇ ಕ್ರಮ ಇರಲಿಲ್ಲ, ಇಂಡೋನೇಷ್ಯಾದ ಯಾವುದೋ ಮೂಲೆಯಲ್ಲಿ ಪ್ರಯೋಜನವಿಲ್ಲದ ಕೆಲಸ ನೀಡಿ ಭಾರೀ ಮೊತ್ತದ ಹಣ ಲಪಟಾಯಿಸಲು ಈ ರೀತಿ ವಂಚನೆ ಮಾಡಲಾಗಿತ್ತು ಎಂದು ಅಲ್ಲಿನ ಪೋಲಿಸರಿಂದ ಯುವಕರಿಗೆ ತಿಳಿದುಬಂತು ಎಂದು ತಮ್ಮ ಕಷ್ಟವನ್ನು ಯುವಕರು ಮತ್ತು ಅವರ ಹೆತ್ತವರು ತುಳುನಾಡ ರಕ್ಷಣಾ ವೇದಿಕೆಯ ಕಛೇರಿಗೆ ಆಗಮಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ವಂಚಕರ ಜಾಲವನ್ನು ಭೇದಿಸುವಂತೆ ಮತ್ತು ಮುಂದೆ ನಕಲಿ ಏಜೆಂಟರ ಬಲೆಗೆ ನಿರುದ್ಯೋಗಿ ಯುವಕರು ಬಲಿಯಾಗದಂತೆ ಎಚ್ಚರಿಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ಶಶಿಕುಮಾರ್‌ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಸದ್ರಿ ಶಂಶೀರ್ ರಿಜ್ವಾನ್ ಹಣ ಮಾಡುವ ದುರುದ್ದೇಶದಿಂದ ಮಹಮ್ಮದ್ ನಿಯಾಝ್, ಶಹನವಾಜ್, ಮಹಮ್ಮದ್ ಇರ್ಫಾನ್ ರನ್ನು ವಂಚಿಸಿ ದಕ್ಷಿಣ ಕೊರಿಯಾದಲ್ಲಿ ಉತ್ತಮ ಉದ್ಯೋಗ ದೊರಕಿಸಿಕೊಡುವ ಆಮಿಷ ಒಡ್ಡಿ ಸುಳ್ಳು ಹೇಳಿ ದಕ್ಷಿಣ ಕೊರಿಯಾದ ಬದಲು ಇಂಡೋನೇಷ್ಯಾಕ್ಕೆ ತಾತ್ಕಾಲಿಕ ವೀಸಾದಲ್ಲಿ ಕಳುಹಿಸಿಕೊಟ್ಟು ಯಾವುದೇ ಜವಾಬ್ದಾರಿ ನಿರ್ವಹಿಸದೆ ಜೈಲಿನಲ್ಲಿದ್ದು ಕಷ್ಟ-ನಷ್ಟ ಅನುಭವಿಸಿದ ಯುವಕರ ಜೀವನದಲ್ಲಿ ಕಪ್ಪು ಚುಕ್ಕೆಗೆ ಕಾರಣನಾಗಿರುತ್ತಾನೆ. ಶಂಶೀರ್ ರಿಜ್ವಾನ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಲ್ಲಿ ಇಂತಹುದೇ ಹಲವಾರು ಜನರಿಗೆ ವಂಚನೆ ಮಾಡಿ ಹಣ ಲಪಟಾಯಿಸಿರುವ ಬಗ್ಗೆ ಬೆಳಕಿಗೆ ಬರುವುದು. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು ಒತ್ತಾಯಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English