ಸುಸಜ್ಜಿತ ಆರೈಕೆ ಕೇಂದ್ರವಾಗಿ ಬದಲಾದ ಹಜ್ ಭವನ

9:48 PM, Saturday, May 15th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

Haj Bhavanಬೆಂಗಳೂರು : ಬೆಂಗಳೂರಿನ ಉತ್ತರ ಭಾಗದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿಯೇ ಥಣಿಸಂದ್ರದ ಹಜ್ ಭವನದಲ್ಲಿ ಸಿದ್ಧಗೊಂಡಿರುವ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಈ ಭಾಗದ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಹಜ್ ಭವನವನ್ನ ಹಲವು ಅನುಕೂಲಗಳುಳ್ಳ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಸಜ್ಜುಗೊಳಿಸಿದೆ. ಇಲ್ಲಿ ನೂರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆ ಗಳಿದ್ದು, 50 ಐಸಿಯೂ ಹಾಗೂ 50 ಹೆಚ್‍ಡಿಯೂ ಹಾಸಿಗೆಗಳನ್ನ ಸಿದ್ಧಪಡಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಈ ಆರೈಕೆ ಕೇಂದ್ರವು 24 ಗಂಟೆಯು ಕಾರ್ಯನಿರ್ವಹಿಸಲಿದ್ದು, 8 ವೈದ್ಯರು, 12 ದಾದಿಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಸೋಂಕಿತರ ಅನುಕೂಲಕ್ಕಾಗಿ ಸಾಕಷ್ಟು ವ್ಯವಸ್ಥೆಗಳನ್ನ ಈ ಆರೈಕೆ ಕೇಂದ್ರದಲ್ಲಿ ಕೈಗೊಳ್ಳಲಾಗಿದ್ದು, ಗುಣಮಟ್ಟದ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಹಾಗೆಯೇ ಆ್ಯಂಬುಲೆನ್ಸ್ ಸೇವೆ ಕೂಡಾ ಇಲ್ಲಿ ಲಭ್ಯವಿರಲಿದೆ.” ಎಂದು ತಿಳಿಸಿದರು.

“ಲಾಕ್ ಡೌನ್ ನಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಸಧ್ಯ ಯಾರು ಆಕ್ಸಿಜನ್ ಕೊರತೆಯಿಂದ ತೊಂದರೆಗೀಡಾಗಬಾರದು ಎಂಬುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಕಾರಣಕ್ಕೆ ಎಲ್ಲಾ ಆರೈಕೆ ಕೇಂದ್ರಗಳಿಗೆ 800 ಆಕ್ಸಿಜನ್ ಕಾನ್ಸ್ಂಟ್ರೇಟರ್ ಗಳನ್ನ ನೀಡಲಾಗಿದೆ. ಹಾಗೆಯೇ ಆಕ್ಸಿಜನ್ ಆನ್ ವ್ಹೀಲ್ಸ್ ಎಂಬ ವಿಶೇಷ ಬಸ್ ವ್ಯವಸ್ಥೆಯನ್ನ ಕೂಡಾ ಪರಿಚಯಿಸಲಾಗಿದೆ. ಶುಕ್ರವಾರ 40 ಆಕ್ಸಿಜನ್ ವ್ಯವಸ್ಥೆ ಯುಳ್ಳ ಹಾಸಿಗೆಯ ಆಸ್ಪತ್ರೆಯನ್ನ ಹೊಸಕೆರೆಹಳ್ಳಿಯಲ್ಲಿ ಉದ್ಘಾಟಿಸಲಾಗಿದೆ. ಪ್ರತಿ ದಿನವೂ ಕನಿಷ್ಠ 100 ಆಕ್ಸಿಜನ್ ಹಾಸಿಗೆಗಳನ್ನ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡುತ್ತಿದ್ದೇವೆ”, ಎಂದರು.

Haj Bhavan“ತಜ್ಞರ ಅಭಿಪ್ರಾಯಪಡುತ್ತಿರುವಂತೆ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ತೊಂದರೆ ಮಾಡಬಹುದು ಎನ್ನಲಾಗುತ್ತಿದೆ. ಹೀಗಾಗಿ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ತಮ್ಮ, ತಮ್ಮ ಜಿಲ್ಲೆಯಲ್ಲಿ ಕೂಡಲೇ ಮಕ್ಕಳ ಆಸ್ಪತ್ರೆಯನ್ನ ಸಿದ್ಧಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಮೂರನೇ ಅಲೆ ಎದುರಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುತ್ತಿದ್ದ ಸಾಕಷ್ಟು ವೈದ್ಯಕೀಯ ಸೌಲಭ್ಯಗಳನ್ನ ಸಿದ್ಧ ಮಾಡಿಕೊಳ್ಳಲಾಗುತ್ತಿದೆ,” ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

ಈ ವೇಳೆ ಮುಖ್ಯ ಆಯುಕ್ತರು ಗೌರವ್ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ವಲಯ ಆಯುಕ್ತರು ಅನ್ಬುಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಂಟಿ ಆಯುಕ್ತರು ಸರ್ಫರಾಜ್ ಖಾನ್, ವಲಯ ಜಂಟಿ ಆಯುಕ್ತರು ಡಾ. ಅಶೋಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English