ಶಿಕ್ಷಕರನ್ನು ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ, ಅತಿಥಿ ಶಿಕ್ಷಕರೆಂಬ ಭೇದಭಾವ ಮಾಡದೇ ಶಿಕ್ಷಕರಿಗೆ ಎಲ್ಲ ಸೌಲಭ್ಯ ನೀಡಿ

10:58 PM, Monday, May 24th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Horattiಬೆಂಗಳೂರು : ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಅನುದಾನ ರಹಿತ ಮತ್ತು ಅತಿಥಿ (ಗುತ್ತಿಗೆ) ಶಿಕ್ಷಕರು ಸೇರಿದ್ದಾರೆ.

ಈ ಎಲ್ಲಾ ಶಿಕ್ಷಕರನ್ನು ಆಸ್ಪತ್ರೆ, ರೈಲು ಮತ್ತು ಬಸ್ ನಿಲ್ದಾಣ, ಚೆಕ್‍ಪೋಸ್ಟ್‍ಗಳಲ್ಲಿ ಶಿಕ್ಷಕರನ್ನು ನಿಯೋಜಿಸಲಾಗಿದೆ, ಕೋವಿಡ್ ವಾರ್‍ರೂಮ್, ಸಹಾಯವಾಣಿಯಲ್ಲಿ ಇವರು ಕೆಲಸ ಮಾಡುತ್ತಿರುವುದಲ್ಲದೇ ಸೋಂಕಿತರ ಮನೆಗೇ ಹೋಗಿ, ಅವರ ಮತ್ತು ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ವಿವರಗಳನ್ನು ಸಂಗ್ರಹಿಸಿ, ಅವರ ಕುಟುಂಬದವರೊಂದಿಗೆ ಫೋಟೋ ತೆಗೆಸಿ, ಅದನ್ನು ಸಂಬಂಧಪಟ್ಟವರಿಗೆ ರವಾನಿಸುವ ಕೆಲಸದಲ್ಲಿ ತಮ್ಮ ಜೀವದ ಹಂಗು ತೊರೆದು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ದುರ್ದೈವದ ಸಂಗತಿ ಎಂದರೆ, ಕರ್ತವ್ಯ ನಿರತ ಶಿಕ್ಷಕರ ಸುರಕ್ಷತೆ ಕುರಿತಂತೆ ತಮಗೆ ಹತ್ತಾರು ಪತ್ರಗಳ ಮೂಲಕ ಹಲವಾರು ಸಲಹೆಗಳನ್ನು ನೀಡಿ ಆಗ್ರಹಿಸಿದ್ದರೂ ಇದುವರೆಗೂ ಸರಕಾರ ಈ ಬಗ್ಗೆ ಅಸಡ್ಡೆ ವಹಿಸಿರುವುದು ನನ್ನ ಮನಸ್ಸಿಗೆ ತುಂಬಾ ನೋವುಂಟುಮಾಡಿದೆ.

ಕರ್ತವ್ಯದ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ರೂ. 30 ಲಕ್ಷ ಪರಿಹಾರ ಕೊಡುವುದು ಒಂದೆಡೆ ಇರಲಿ, ಈ ಶಿಕ್ಷಕರಿಗೆ ಕನಿಷ್ಠ ಮಾಸ್ಕ್, ಸ್ಯಾನಿಟೈಜರ್, ಗ್ಲೌಜ್‍ನಂತಹ ಸುರಕ್ಷತಾ ಸಾಮಗ್ರಿಗಳನ್ನು ಸರಕಾರ ಒದಗಿಸುತ್ತಿಲ್ಲ. ಶಿಕ್ಷಕರು ಸೋಂಕಿತರ ನೇರ ಸಂಪರ್ಕಕ್ಕೆ ಬರುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಅವರಿಗೆ ಕನಿಷ್ಠ ಸುರಕ್ಷತಾ ಪರಿಕರಗಳನ್ನು ಒದಗಿಸುತ್ತಿಲ್ಲ. ಶಿಕ್ಷಕರು ಮುಂಚೂಣಿ ಕಾರ್ಯಕರ್ತರು ಎಂದು ಸರಕಾರ ಘೋಷಿಸಿದ್ದರೂ ಅಧಿಕೃತವಾಗಿ ಕಂದಾಯ ಇಲಾಖೆಯಿಂದ ಆದೇಶ ಹೊರಬಿದ್ದಿಲ್ಲ. ಯಾವುದೇ ಸೌಲಭ್ಯ ಕೇಳಬೇಕು ಎಂದರೆ ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಕೇಳಬೇಕು. ಶಿಕ್ಷಣ ಇಲಾಖೆಯಿಂದ ಸರಿಯಾದ ಸ್ಪಂದನೆ ಇಲ್ಲ ಎನ್ನುವ ಭಾವನೆ ಶಿಕ್ಷಕರ ವಲಯದಿಂದ ಕೇಳಿಬರುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲಿಯೂ ಶಿಕ್ಷಕರು ಕೆಲಸ ಮಾಡುತ್ತಿದ್ದು ಅವರಿಗೆ ಗಳಿಕೆ ರಜೆ ಸೌಲಭ್ಯವನ್ನು ಇದುವರೆಗೂ ನೀಡಿರುವದಿಲ್ಲ ಎನ್ನುವುದು ತೀವ್ರ ವಿಷಾದನೀಯ ಸಂಗತಿ.

ಮತ್ತೊಂದು ಪ್ರಮುಖ ವಿಷಯವೆಂದರೆ, ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಕರನ್ನೂ ಸಮಾನ ರೀತಿಯಲ್ಲಿ ಕಾಣಬೇಕು, ಅವರ ಮಧ್ಯೆ ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ ಮತ್ತು ಗುತ್ತಿಗೆ ಹೀಗೆ ಯಾವುದೇ ರೀತಿಯ ತಾರತಮ್ಯ ಸಲ್ಲದು, ಈ ಕುರಿತು ತಾವು ಖುದ್ದಾಗಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕೆಂದು ಒತ್ತಾಯಪೂರ್ವಕವಾಗಿ ತಮ್ಮನ್ನು ಕೋರಿಕೊಳ್ಳುತ್ತೇನೆ.

ಒಂದು ವೇಳೆ ದುರದೃಷ್ಟವಶಾತ್ ಅನುದಾನಿತ ಅಥವಾ ಸರಕಾರಿ ಶಿಕ್ಷಕರು ಕೋವಿಡ್ ಕಾರ್ಯದ ಸಂದರ್ಭದಲ್ಲಿ ಸೋಂಕಿತರಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ರೂ. 30 ಲಕ್ಷ ಪರಿಹಾರ ಹಾಗೂ ಇನ್ನಿತರೆ ಪರಿಹಾರ ಸೌಲಭ್ಯವನ್ನು ಇತರೆ, ಅಂದರೆ ಖಾಸಗಿ ಅನುದಾನ ರಹಿತ ಹಾಗೂ ಗುತ್ತಿಗೆ ಅಥವಾ ಅತಿಥಿ ಶಿಕ್ಷಕರನ್ನು ಸಹ ಕೋವಿಡ್ ವಾರಿಯರ್ಸ್‍ಗಳೆಂದು ಪರಿಗಣಿಸಬೇಕು ಹಾಗೂ ಕೋವಿಡ್ ಕಾರ್ಯದ ಸಂದರ್ಭದಲ್ಲಿ ದುರ್ಘಟನೆಗೆ ತುತ್ತಾಗಿ ಮರಣ ಹೊಂದಿದರೆ, ಅವರ ಕುಟುಂಬಕ್ಕೂ ರೂ. 30 ಲಕ್ಷ ಪರಿಹಾರ ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ತಮ್ಮಲ್ಲಿ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತಾ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸುವಂತೆ ಸೂಚಿಸಬೇಕೆಂದು ಕೋರುತ್ತೇನೆ.

ಕಳೆದ ವಾರ ತಮಗೆ ಬರೆದ ಪತ್ರವೊಂದರಲ್ಲಿ ಆಗ್ರಹಪಡಿಸಿದಂತೆ, ಎಲ್ಲಾ ಶಿಕ್ಷಕರ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಲಸಿಕೆ ನೀಡುವುದಲ್ಲದೇ ಅವರ ಕುಟುಂಬಕ್ಕೂ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು ಹಾಗೂ ಸರಕಾರಿ, ಅನುದಾನಿತ, ಖಾಸಗಿ ಅನುದಾನರಹಿತ, ಗುತ್ತಿಗೆ ಅಥವಾ ಅತಿಥಿ ಶಿಕ್ಷಕರು ಕೋವಿಡ್ ನಿಯಂತ್ರಣಕ್ಕಾಗಿ ನಿಸ್ವಾರ್ಥತೆಯಿಂದ ಹಗಲಿರುಳು ಶ್ರಮಿಸುತ್ತಿದ್ದು, ಕರ್ತವ್ಯದ ವೇಳೆ ಒಂದು ವೇಳೆ ಸೋಂಕಿಗೆ ತುತ್ತಾದ ಶಿಕ್ಷಕರಿಗೆ ಯಾವುದೇ ತಾರತಮ್ಯ ಮಾಡದೇ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದರ ಜೊತೆಗೆ ಶಿಕ್ಷಕರಿಗಾಗಿಯೇ ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಿ ಅವರ ಆರೋಗ್ಯ ರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭಾಪತಿ ಬಸವರಾಜ ಹೊರಹಟ್ಟಿಯವರು ಮನವಿ ಮಾಡಿದ್ದಾರೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English