ಸೋಂಕು ತಡೆಗಟ್ಟಲು ಲಘು ವಿಮಾನದ ಮೂಲಕ ಔಷಧಿ ಸಿಂಪಡಣೆ

9:30 PM, Saturday, May 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

 organic disinfectantsಬೆಂಗಳೂರು : ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ಯಲಹಂಕದ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏರಿಯಲ್ ವಕ್ರ್ಸ್ ಏರೋ ಎಲ್ ಎಲ್ ಪಿಯು ಲಘು ವಿಮಾನದ ಮೂಲಕ ಸಾವಯವ ಕ್ರಿಮಿನಾಶಕ ಸಿಂಪಡಣೆಯ ಪ್ರಾಯೋಗಿಕ ಯೋಜನೆಗೆ ಕಂದಾಯ ಸಚಿವ ಆರ್ ಅಶೋಕ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ,”ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ಜನನಿಬಿಡ ಪ್ರದೇಶಗಳಾದ ಕೆ ಆರ್ ಮಾರುಕಟ್ಟೆ, ಕಲಾಸಿಪಾಳ್ಯ, ಶಿವಾಜಿನಗರ ಹಾಗೂ ಜಯನಗರದಂತಹ ಪ್ರದೇಶಗಳಲ್ಲಿ ಕೋವಿಡ್ ಸೇರಿದಂತೆ ಅಪಾಯಕಾರಿ ವೈರಸ್ ಗಳನ್ನು ನಾಶ ಮಾಡಲು ಈ ಸಾವಯವ ಔಷಧಿಯನ್ನ ಲಘು ವಿಮಾನದ ಮೂಲಕ ಸಿಂಪಡಣೆ ಮಾಡುತ್ತಿದ್ದಾರೆ. ಸೋಮವಾರದಿಂದ ವಾರಕ್ಕೆ ಮೂರು ಬಾರಿಯಂತೆ ಈ ಕಾರ್ಯ ನಡೆಯಲಿದ್ದು, ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಸಿಂಪಡಣೆ ಮಾಡಲಾಗುತ್ತದೆ. ಈ ಕಾರ್ಯವನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಯಾವುದೇ ರೀತಿಯಲ್ಲಿ ಧನ ಸಹಾಯ ನೀಡುತ್ತಿಲ್ಲ. ಇದರ ಪರಿಣಾಮವನ್ನ ಅಧ್ಯಯನ ಮಾಡಲಾಗುತ್ತಿದ್ದು, ಅದರ ಫಲಿತಾಂಶದ ಮೇಲೆ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ”, ಎಂದು ತಿಳಿಸಿದರು.

R-Ashoka

ಲಾಕ್ ಡೌನ್ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು,” ಪರಿಸ್ಥಿತಿಯನ್ನ ಅವಲೋಕಿಸಿ ಲಾಕ್ ಡೌನ್ ಮುಂದುವರೆಸಬೇಕೋ ಬೇಡವೋ ಎಂಬ ನಿರ್ಧಾರವನ್ನ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ. ಸಧ್ಯ ನಗರದಲ್ಲಿ ಲಾಕ್ ಡೌನ್ ಪರಿಣಾಮ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ಹಿಂದೆ ದಿನಕ್ಕೆ 22 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಆ ಸಂಖ್ಯೆ 5 ಸಾವಿರಕ್ಕೆ ಇಳಿದಿದೆ. ಜೂನ್ 7ರ ವರೆಗೂ ಲಾಕ್ ಡೌನ್ ಮುಂದುವರೆಯಲಿದೆ. ಹಂತ, ಹಂತವಾಗಿ ಲಾಕ್ ಡೌನ್ ತೆರವು ಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇವೆ. ಒಂದೇ ಬಾರಿ ಲಾಕ್ ಡೌನ್ ತೆರವು ಗೊಳಿಸಿದರೆ ಮತ್ತೇ ಗುಂಪು ಸೇರುವುದು ಹೆಚ್ಚಾಗಿ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ. ಪ್ರತಿದಿನಕ್ಕೆ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುವವರೆಗೂ ಕಠಿಣ ನಿಯಮಗಳ ಅಗತ್ಯವಿದೆ. ತಜ್ಞರು ಲಾಕ್ ಡೌನ್ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. ಆದರೆ ಅಂತಿ ನಿರ್ಧಾರ ಮುಖ್ಯಮಂತ್ರಿಗಳೇ ತೆಗೆದುಕೊಳ್ಳಲಿದ್ದಾರೆ. ಸಧ್ಯ ಬ್ಲ್ಯಾಕ್ ಫಂಗಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಮೂರನೇ ಅಲೆಗೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳು ನಡೆಯುತ್ತಿವೆ”, ಎಂದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಆರ್ ವಿಶ್ವನಾಥ, ಶಾಸಕ ಕೃಷ್ಣಭೈರೇಗೌಡ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಉಪಸ್ಥಿತರಿದ್ದರು.

ವರದಿ :ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English