ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳಪೆ ನೆಟ್ ವರ್ಕ್ ಒದಗಿಸುವ ಮೊಬೈಲ್ ಕಂಪೆನಿಗಳು, ಕ್ರಮಕ್ಕೆ ಸೂಚನೆ

11:06 PM, Tuesday, June 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

mobile-network-issueಮಂಗಳೂರು : ಬೆಂಗಳೂರು ಅಥವಾ ಮುಂಬೈಗೆ ಹೋಲಿಸಿದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊಬೈಲ್ ಕಂಪೆನಿಗಳು ಬಹುತೇಕ ಕಳಪೆ ನೆಟ್ ವರ್ಕ್ ಒದಗಿಸುತ್ತಿವೆ. ಪದೇ ಪದೇ ಫೋನ್ ಡಿಸ್ ಕನೆಕ್ಷನ್, ಇಂಟರ್ನೆಟ್ ವೇಗ ಕಡಿತ ದ ಸಮಸ್ಯೆ ಎದುರಾಗಿದೆ.  ಕಂಪೆನಿಗಳ ಗ್ರಾಹಕ ಸೇವಾ ಸಿಬ್ಬಂದಿಗಳನ್ನು ಸಂಪರ್ಕಿಸಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ. ದೂರು ನೀಡಲು ಕನಿಷ್ಠ ಹತ್ತು ನಿಮಿಷಗಳಾದರೂ ಕಾಯುವ ಪರಿಸ್ಥಿತಿ ಉಂಟಾಗಿದೆ.

ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸೌಲಭ್ಯ ಒದಗಿಸುವುದರೊಂದಿಗೆ ಮೊಬೈಲ್ ಸೇವಾ ಪೂರೈಕೆದಾರರು ಉತ್ತಮ ಸೇವೆಯನ್ನು ಒದಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.

ಅವರು ಇಂದು ಮಂಗಳೂರಿನ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸರ್ಕಾರದ ಅನೇಕ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಜನಸಾಮಾನ್ಯರ ದೈನಂದಿನ ದೂರವಾಣಿ ಸೌಲಭ್ಯವನ್ನು ಉಪಯೋಗಿಸಲು ತೊಂದರೆ ಉಂಟಾಗುತ್ತಿದೆ. ಹೀಗಾಗದಂತೆ ಎಲ್ಲಾ ಮೊಬೈಲ್ ನೆಟ್‍ವರ್ಕಿಂಗ್ ಕಂಪೆನಿಗಳು ಎಚ್ಚರ ವಹಿಸುವುದರೊಂದಿಗೆ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ನೆಟ್‍ವರ್ಕ್ ಸಮಸ್ಯೆಯಿಂದಾಗಿ ಕೋವಿಡ್ ಸೋಂಕಿತರಿಗೆ ಮೆಡಿಕಲ್ ಟ್ರೀಟ್‍ಮೆಂಟ್ ಕೊಡಲು ಪಡಿತರ ವಿತರಣೆ, ಜಿ.ಪಿ.ಎಸ್ ಆಧಾರದ ಮೇಲೆ ಗೃಹ ನಿರ್ಮಾಣದ ಅನುದಾನ ನೀಡಲು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕಳೆದ ವರ್ಷ ಕೊರೋನಾದಿಂದ ಶಾಲಾ –ಕಾಲೇಜುಗಳು ಪ್ರಾರಂಭವಾಗದಿದ್ದರೂ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ವರ್ಕ್‍ಫ್ರಮ್ ಹೋಮ್‍ನಡಿ ಕಾರ್ಯನಿರ್ವಹಿಸುತ್ತಿರುವವರಿಗೆ ನೆಟ್‍ವರ್ಕ್ ಸಮಸ್ಯೆ ಉಂಟಾಗಿ ಎತ್ತರ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವಂತ ಪರಿಸ್ಥಿತಿ ಉಂಟಾಗಿದೆ ಎಂದರು.

ಸರ್ಕಾರ ಸ್ವಾಮ್ಯದ ಬಿ.ಎಸ್.ಎನ್.ಎಲ್ ಮುಂಚೂಣಿ ಟೆಲಿ ಕಂಪೆನಿಯಾಗಿದ್ದರೂ ಸಹ ಜಿಲ್ಲೆಯಲ್ಲಿನ ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಯೋಜನೆಯನ್ನು ರೂಪಿಸುವುದರೊಂದಿಗೆ ಉತ್ತಮ ನೆಟ್‍ವರ್ಕ್ ಸೌಲಭ್ಯವನ್ನು ಒದಗಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರಿಗೆ ತೊಂದರೆಯಾಗದಂತೆ ಉತ್ತಮ ಮೊಬೈಲ್ ನೆಟ್‍ವರ್ಕಿಂಗ್ ಸೇವೆಯನ್ನು ಒದಗಿಸಲು, ಅಗತ್ಯವಿರುವ ಮೊಬೈಲ್ ಗೋಪುರಗಳ ನಿರ್ಮಾಣಕ್ಕೆ ಸರ್ಕಾರದ ಜಾಗವನ್ನು ಅಥವಾ ಕಟ್ಟಡಗಳ ಮೇಲೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಮೊಬೈಲ್ ಟವರ್‍ಗಳನ್ನು ನಿರ್ಮಿಸಲು ಅಗತ್ಯ ವಿರುವ ಎಲ್ಲಾ ರೀತಿಯ ಕ್ರಮಬದ್ಧ ದಾಖಲೆಗಳನ್ನು ಕಂಪೆನಿಗಳು ಒದಗಿಸಿದ್ದಲ್ಲಿ ವಿಳಂಬವಿಲ್ಲದೇ ಅವರುಗಳಿಗೆ ಅನುಮತಿ ನೀಡಬೇಕು ಎಂದ ಅವರು ಕಂಪೆನಿಗಳು ಸಹ ಸರ್ಕಾರದ ವತಿಯಿಂದ ವಿಧಿಸುವ ಕರಗಳನ್ನು ಚಾಚೂ ತಪ್ಪದೇ ಪಾವತಿಸಬೇಕುಎಂದರು.

ಮೀನುಗಾರಿಕಾ ಹಾಗೂ ಬಂದರು ಸಚಿವರಾದ ಎಸ್. ಅಂಗಾರ ಮಾತನಾಡಿ, ಎಲ್ಲಾ ಮೊಬೈಲ್ ನೆಟ್‍ವರ್ಕ್ ಸಂಸ್ಥೆಗಳು ಜನರಿಗೆ ಉತ್ತಮ ಸೇವೆ ಒದಗಿಸಲು ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ಸ್ಥಳೀಯ ಶಾಸಕರುಗಳನ್ನು ಸಂಪರ್ಕಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉತ್ತಮ ಮೊಬೈಲ್ ನೆಟ್‍ವರ್ಕ್ ಸೇವೆಯನ್ನುಒದಗಿಸಬೇಕುಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ನೆಟ್‍ವರ್ಕಿಂಗ್ ಸೌಲಭ್ಯವನ್ನು ಒದಗಿಸುವ ಸಂಬಂಧ ಈಗಾಗಲೇ ಸಭೆಯನ್ನು ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸಲು ಮುಂದಾಗಲಾಗಿದೆ ಎಂದ ಅವರು ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕುಎಂದರು.

ಮಾನ್ಸೂನ್ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಶಕ್ತಿ ಸಮಸ್ಯೆಯಿಂದಾಗಿ ಮೊಬೈಲ್ ಟವರ್‍ಗಳು ಇದ್ದರೂ ಸಹ ಅವುಗಳ ಕಾರ್ಯ ಸ್ತಬ್ಧವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪೆನಿಗಳು ವಿದ್ಯುತ್ ಶಕ್ತಿ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳುವುದರೊಂದಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಜಿಲ್ಲೆಯ 223 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 676 ಮೊಬೈಲ್ ಟವರ್‍ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಹೊಸದಾಗಿ ನಿರ್ಮಾಣ ಮಾಡಲು 26 ಅರ್ಜಿಗಳು ಬಾಕಿ ಇವೆ. ಬಂಟ್ವಾಳ ತಾಲೂಕಿನಲ್ಲಿ 5, ಬೆಳ್ತಂಗಡಿ ತಾಲೂಕಿನಲ್ಲಿ 1, ಕಡಬ ತಾಲೂಕಿನಲ್ಲಿ 2, ಮಂಗಳೂರು ತಾಲೂಕಿನಲ್ಲಿ 5, ಪುತ್ತೂರು ತಾಲೂಕಿನಲ್ಲಿ 5 ಹಾಗೂ ಸುಳ್ಯ ತಾಲೂಕಿನಲ್ಲಿ 7, ಮೂಡಬಿದ್ರೆ ತಾಲೂಕಿನಲ್ಲಿ 1 ಬಾಕಿ ಇವೆ. ಕೆಲವು ಜನರಿಂದ ಮೊಬೈಲ್ ಟವರ್ ನಿರ್ಮಾಣಕ್ಕೆ ಆಕ್ಷೇಪಣೆಗಳು ಬಂದರೆ ಕೆಲವೊಂದು ಕಂಪೆನಿಗಳು ತಮ್ಮ ವಾರ್ಷಿಕ ಶುಲ್ಕವನ್ನು ಪಾವತಿ ಮಾಡದೇ ಇರುವುದು ಕಾರಣವಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿರುವ ಪ್ರತಿಯೊಂದು ಟವರ್‍ಗಳಿಗೆ ಸರ್ಕಾರ ವಿಧಿಸಿರುವ ವಾರ್ಷಿಕ 12,000 ಶುಲ್ಕವನ್ನು ಪಾವತಿ ಮಾಡಬೇಕು. ಆದರೆ, ಈವರೆಗೆ ವಿವಿಧ ಕಂಪೆನಿಗಳ ಪಾವತಿ ಬಾಕಿಯು 83 ಲಕ್ಷ ಗಳಷ್ಟಿವೆ. ಬಂಟ್ವಾಳ ತಾಲೂಕಿನಲ್ಲಿ 47 ಲಕ್ಷ, ಬೆಳ್ತಂಗಡಿ ತಾಲೂಕಿನಲ್ಲಿ 9 ಲಕ್ಷ, ಕಡಬ ತಾಲೂಕಿನಲ್ಲಿ 2 ಲಕ್ಷ, ಮಂಗಳೂರು ತಾಲೂಕಿನಲ್ಲಿ 1.80 ಲಕ್ಷ , ಪುತ್ತೂರುತಾಲೂಕಿನಲ್ಲಿ 17 ಲಕ್ಷ. ಮೂಡಬಿದ್ರೆ ತಾಲೂಕಿನಲ್ಲಿ 1.20 ಲಕ್ಷ ಹಾಗೂ ಸುಳ್ಯ ತಾಲೂಕಿನಲ್ಲಿ 4 ಲಕ್ಷ ಬಾಕಿ ಇರುತ್ತದೆ ಎಂದರು.

ಸಭೆಯಲ್ಲಿ ಕಾರ್ಯ ಅಪರ ಜಿಲ್ಲಾಧಿಕಾರಿ ಪ್ರಜ್ಞಾ, ಶಾಸಕರಾದ ಉಮಾನಾಥ್ ಕೋಟ್ಯಾನ್, ಭರತ್ ವೈ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯಕ್, ಸಂಜೀವ ಮಠಂದೂರ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English