ಶ್ರೀ ಧಾಮ ಮಾಣಿಲದಲ್ಲಿ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಆರಂಭ

2:35 PM, Monday, July 5th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

Manila ವಿಟ್ಲ:  ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಪ್ರಯುಕ್ತ 48 ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಪ್ರಥಮ ಪೂಜೆಯು ಜು.4ರಂದು ಆರಂಭ ಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ  ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಕಾರಸ್ಮರಣೆ ನಮ್ಮೊಳಗಿದ್ದರೆ ಪರಮಾತ್ಮನ ಶ್ರೀರಕ್ಷೆ ಸದಾ ಇರುತ್ತದೆ ಎಂದು ಹೇಳಿದರು.

ಬಾಲಭೋಜನ ಕಾರ್ಯಕ್ರಮಕ್ಕೆ  ಸ್ವಾಮೀಜಿಯವರು ಚಾಲನೆ ನೀಡಿ ಆಶೀರ್ವಚನ ನೀಡಿದರು.

ಎಲ್ಲಾ ಜೀವ ರಾಶಿಗಳು ಇವತ್ತು ಕೋವಿಡ್‌ನಿಂದಾಗಿ ನಲುಗಿ ಹೋಗಿದೆ. ನಾನು ನನ್ನಿಂದ ಎನ್ನುವ ವ್ಯಾಮೋಹವನ್ನು ಮರೆತು ನಾವೆಲ್ಲರೂ ಒಂದಾಗಿ ಬಾಳುವ ಮನಸ್ಸು ನಮ್ಮದಾಗಬೇಕು. ಶ್ರೀ ಧಾಮ ಆರಂಭವಾದ ದಿನದಿಂದಲೂ ದೇವತಾ ಆರಾಧನೆಯ ಜೊತೆಗೆ ಸಮಾಜದ ಒಳಿತಿಗಾಗಿ ಸದಾ ಸೇವೆಯನ್ನು ಮಾಡುತ್ತಾ ಬರುತ್ತಿದೆ. ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಿದಾಗ ಎರಡು ಜನ ಮುತ್ತೈದೆಯರಿಗೆ ವಾಯನದಾನ ಮಾಡಿದ ಕಾಲವಿತ್ತು ಆದರೆ ಇದೀಗ ಶ್ರೀಧಾಮ ಸಾವಿರಾರು ಜನ ಮುತೈದೆಯರಿಗೆ ವಾಯನ ದಾನ ಮಾಡುತ್ತಿದೆ. ಗುರು ಒಂದೇ. ಗುರುವಿನ ಶಕ್ತಿ ಒಂದೇ. ನಿಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಲು ಗುರು ಭಕ್ತಿ ಅತೀ ಮುಖ್ಯ ಎಂದವರು ಹೇಳಿದರು.

Manila ಮಾಣಿಲ ಗ್ರಾಮದಲ್ಲಿ ಕೊರೋನಾದಿಂದ ಯಾವುದೇ ಸಮಸ್ಯೆಯಾಗಿಲ್ಲ. ಕೊರೋನಾ ಮಹಾಮಾರಿಯಿಂದ ಯಾವುದೇ ಆಪತ್ತು ಉಂಟಾಗದಿರಲಿ ಎಂದು 46 ಆಯುರ್ವೇದ ಸಮಿದೆಗಳನ್ನು ಉಪಯೋಗಿಸಿ ಶ್ರೀಧಾಮದಲ್ಲಿ ಯಜ್ಞಗಳನ್ನುಮಾಡಲಾಗಿದೆ. ಒಟ್ಟಿನಲ್ಲಿ ಲೋಕಕಲ್ಯಾಣಾರ್ಥವಾಗಿ ಕ್ಷೇತ್ರದಲ್ಲಿ ಪ್ರತಿನಿತ್ಯ ಯಜ್ಞಾ ಯಾಗಾದಿಗಳನ್ನುಮಾಡಲಾಗುತ್ತಿದೆ ಎಂದರು.

ಬಿ.ಸಿರೋಡ್ ವಿಜಯಲಕ್ಷ್ಮೀ ಟ್ರೇಡರ್ಸ್ ನ ಮಾಲಕ, ಉದ್ಯಮಿ ಶ್ರೀನಿವಾಸ್ ಪ್ರಭು ,ಪತ್ನಿ ಶೋಭಾ ಎಸ್. ಪ್ರಭು, ಟ್ರಸ್ಟಿಗಳಾದ ಜಯರಾಜ್ ಪ್ರಕಾಶ್, ಚಂದ್ರಶೇಖರ, ಮಹಾಲಕ್ಷ್ಮಿ ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟ್ರಸ್ಟಿ ತಾರನಾಥ ಕೊಟ್ಟಾರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಮಚ್ಚೇಂದ್ರನಾಥ್ ವಂದಿಸಿದರು.

ಬೆಳಗ್ಗೆ ಗಣಪತಿ ಹೋಮ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕೀರಾಭಿಷೇಕ, ಗೋಮಾತಾ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English