ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸಲು ಸರ್ಕಾರ ಚಿಂತನೆ: ಸಚಿವ ಆರ್ ಅಶೋಕ

11:28 PM, Thursday, July 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು : “ನಾಲ್ಕು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿ, ಬದಲಿಗೆ ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ‌ ನಡೆಸಿದೆ”. ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವರು, “ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ಬದಲಿಗೆ ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತರನ್ನು ಸ್ಥಾಪಿಸಬಹುದು ಎಂದು ಶಿಫಾರಸು ಮಾಡಿದೆ. ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿ ಆನೆಗಳಾಗಿ ಹೊರಹೊಮ್ಮಿದ್ದರಿಂದ ನಾನು ಕಳೆದ ಆರು ತಿಂಗಳಿಂದ ಈ ಮಾರ್ಗಗಳಲ್ಲಿ ಯೋಚಿಸುತ್ತಿದ್ದೇನೆ. ಉದಾಹರಣೆಗೆ, ನಾವು ಈ ಕಚೇರಿಗಳಿಗೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಈ ಪ್ರತಿಯೊಂದು ಕಚೇರಿಗಳಲ್ಲಿ 125 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಆದಾಗ್ಯೂ, ಬಳಕೆಯ ಭಾಗದಲ್ಲಿ, ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ಇದುವರೆಗೆ ಕೇವಲ 250 ಮೇಲ್ಮನವಿಗಳು ಬಂದಿವೆ. ಇದು ಸಂಪನ್ಮೂಲಗಳ ವ್ಯರ್ಥವಲ್ಲದೆ ಮತ್ತೇನಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಲಾಗಿದೆ. ನಾವು ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಿದರೆ, ಸಾಕಷ್ಟು ಸಂಪನ್ಮೂಲ ಉಳಿಸಬಹುದು. ಅಲ್ಲಿರುವ ನೌಕರರನ್ನು ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮರು ನಿಯೋಜಿಸಬಹುದು” ಎಂದು ಅಶೋಕ ಹೇಳಿದರು.

ಮಾದರಿ ಬಾಡಿಗೆ ಕಾಯಿದೆ
ಸಚಿವ ಆರ್ ಅಶೋಕ ಮಾತನಾಡುತ್ತ, “ನಾವು ಪ್ರಸ್ತುತ ಬಾಡಿಗೆ ಕಾಯ್ದೆಯನ್ನು ಸರಳೀಕರಿಸುತ್ತಿದ್ದೇವೆ. ಈ ಮೊದಲು, ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಇಬ್ಬರೂ ಸೇರಿ (ಮಾಲೀಕರು ಮತ್ತು ಬಾಡಿಗೆದಾರರು) ನಿಗದಿಪಡಿಸಬೇಕು ಎಂದು ನಾವು ಈಗ ಪ್ರಸ್ತಾಪಿಸುತ್ತೇವೆ. ಒಪ್ಪಂದಕ್ಕೆ ಬಂದರೆ, ಅವರು ಅದನ್ನು ಕಾನೂನುಬದ್ಧವಾಗಿ ಅಂತಿಮಗೊಳಿಸಬೇಕು ಮತ್ತು ಅದನ್ನು ಪೋರ್ಟಲ್‍ ನಲ್ಲಿ ಅಪ್‍ ಲೋಡ್ ಮಾಡಬೇಕಾಗುತ್ತದೆ. ಯಾವುದೇ ವಿವಾದವಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು 60 ದಿನಗಳೊಳಗೆ ಪರಿಹರಿಸುತ್ತಾರೆ. ವಿವಾದಗಳನ್ನು 60 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಮತ್ತು ವಿಚಾರಣೆಯನ್ನು ಮುಂದೂಡಲು ಯಾರಾದರೂ ಯೋಜಿಸಿದರೆ, ಮೂರು ಅವಕಾಶಗಳಿಗಿಂತ ಹೆಚ್ಚು ಸಮಯ ಇರುವುದಿಲ್ಲ. ಪ್ರಸ್ತುತ, ಬೆಂಗಳೂರಿನಲ್ಲಿ ಸುಮಾರು ಎರಡು ರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆ. ಒಮ್ಮೆ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ, ಮಾಲೀಕರು ತಮ್ಮ ಬಾಡಿಗೆದಾರರನ್ನು ಪಡೆಯುತ್ತಾರೆ ಎಂಬ ಅಂದಾಜಿದೆ. ಹಾಗೆಯೇ ಬಾಡಿಗೆ ದರಗಳು ಸಹ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಖಂಡಿತ ಅನುಕೂಲವಾಗುತ್ತದೆ. ಇದು ಕೇವಲ ಪ್ರಸ್ತಾಪವಾಗಿದೆ ಮತ್ತು ನಾವು ಇದನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಚಯಿಸುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ, ಮಾದರಿ ಬಾಡಿಗೆ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಎಲ್ಲಾ ರಾಜ್ಯಗಳಿಗೆ ರೂಪಾಂತರಕ್ಕಾಗಿ ಕಳುಹಿಸಿಕೊಟ್ಟಿದೆ”, ಎಂದರು.

ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ
“ಕೋವಿಡ್‍ನಿಂದ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರೆ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದಂತೆ, ಆ ಆದೇಶಕ್ಕೆ ಸಹಿ ಹಾಕಲಾಗಿದೆ. ಸಧ್ಯದಲ್ಲೇ ಇದನ್ನ ಕಾರ್ಯಗತಗೊಳಿಸಲಾಗುವುದು” ಎಂದು ಸಚಿವರು ಮಾಹಿತಿ ನೀಡಿದರು.

ಪದ್ಮನಾಭನಗರ ಕ್ಷೇತ್ರದಲ್ಲಿ ಪ್ರವಾಹ ತಡೆಗಟ್ಟಲು ಸರ್ವಸನ್ನದ್ಧ: ಆರ್ ಅಶೋಕ್

ಕಂದಾಯ ಸಚಿವ ಶ್ರೀ ಆರ್ ಅಶೋಕ ಅವರು ಪದ್ಮನಾಭನಗರ ಕ್ಷೇತ್ರದಲ್ಲಿ ಗುರುವಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದರು. ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾದ ದತ್ತಾತ್ರೇಯ ನಗರದಲ್ಲಿ ರಾಜಕಾಲುವೆಯ ನವೀಕರಣ ಕಾರ್ಯಕ್ಕೆ ಅವರು ಚಾಲನೆ ನೀಡಿದರು. ನಂತರ, ಗುರುರಾಜ ಬಡಾವಣೆಯಲ್ಲಿ ಪ್ರವಾಹ ತಡೆಗಟ್ಟುವ ಕ್ರಮಗಳಿಗಾಗಿ ಭೂಮಿ ಪೂಜೆ ನಡೆಸಿದರು. ಅವರು ಸಮೃದ್ಧಿ ಲೇಔಟ್‍ನಲ್ಲಿ ಒಳಚರಂಡಿ ದುರಸ್ತಿ ಕಾರ್ಯವನ್ನು ಪರಿಶೀಲಿಸಿದರು. ಅಂತಿಮವಾಗಿ, ಸಚಿವರು ಗಣೇಶ ಮಂದಿರ ವಾರ್ಡ್‍ನ ಸಿಟಿ ಬೆಡ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಹಾಗೆಯೇ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೊಳಗಾದ‌ ನಾನಾ ಸಮುದಾಯದ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ಸಚಿವ ಆರ್‌ ಅಶೋಕ ವಿತರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English