ವೆಚ್ಚ ಕಡಿತ, ಕಡತ ವಿಲೇವಾರಿ ಅಭಿಯಾನಕ್ಕೆ ಮುಖ್ಯಮಂತ್ರಿಗಳ ಸೂಚನೆ

11:00 AM, Thursday, July 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Basavaraja-Bommai ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದರು.

ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ, ಶಾಸಕಾಂಗ ಪಕ್ಷ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೆಲ್ಲರೂ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪೂರ್ಣಪ್ರಮಾಣದ ಸಚಿವ ಸಂಪುಟವನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದ ಅವರು ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಬಾರದು ಎಂಬ ದೃಷ್ಟಿಯಿಂದ ಇಂದು ಸಚಿವ ಸಂಪುಟ ಸಭೆ ಹಾಗೂ ಇಲಾಖಾ ಮುಖ್ಯಸ್ಥರ ಸಭೆ ನಡೆಸಲಾಯಿತು ಎಂದರು.

ಸಭೆಯಲ್ಲಿ ಸರ್ಕಾರದ ದಿಕ್ಸೂಚಿ ಯಾವ ರೀತಿ ಇರಬೇಕೆನ್ನುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ಸಮಾಜದ ಪ್ರತಿಯೊಬ್ಬರ ಪರವಾಗಿ ಅಂದರೆ, ಹಿಂದುಳಿದ ವರ್ಗ, ರೈತರು, ಕೂಲಿಕಾರ್ಮಿಕರೊಂದಿಗೆ ನಮ್ಮ ಸರ್ಕಾರವಿದೆ ಎನ್ನುವುದು ನಮ್ಮ ಆಡಳಿತ ವೈಖರಿಯಿಂದ ಮತ್ತು ಪರಿಣಾಮಗಳಿಂದ ಜನರಿಗೆ ತಿಳಿಯುವಂತಾಗಬೇಕು. ಮೈಕ್ರೋ ಮಟ್ಟದ ನಿರ್ವಹಣೆ, ಇಲಾಖಾ ಮಟ್ಟದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿ, ಅಂತರ ಇಲಾಖಾ ಸಮನ್ವಯ ಸಾಧಿಸಿ, ಒಟ್ಟಾರೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕು, ವಿಳಂಬವಾಗಬಾರದು ಎಂದು ಸ್ಪಷ್ಟಪಡಿಸಿದ್ದೇನೆ. ಕಾಲಮಿತಿಯಲ್ಲಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ನಾನೂ ಸಹ ತಂಡದ ಒಬ್ಬ ಸದಸ್ಯ ಎಂದು ತಿಳಿಸಿದ್ದೇನೆ. ಏನೇ ಮಾಡಿದರೂ ನಡೆಯುತ್ತದೆ ಎಂಬ ಉದಾಸೀನ ಭಾವನೆ ಅಧಿಕಾರಿಗಳಲ್ಲಿ ಇರಬಾರದು ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದೇನೆ. ಅಂತೆಯೇ ಯಾವುದೇ ಸಂದರ್ಭದಲ್ಲಿಯೂ ನನ್ನೊಂದಿಗೆ ಚರ್ಚೆ ಮಾಡಬಹುದು, ಕ್ಷಮತೆ ಗುರುತಿಸಿ ಜವಾಬ್ದಾರಿ ನೀಡಲಾಗವುದೆಂದು ತಿಳಿಸಿದ್ದೇನೆ.

ಕೋವಿಡ್ ತಂದೊಡ್ಡಿರುವ ಸಂಕಷ್ಟದ ಸಂದರ್ಭದಲ್ಲಿ ಹಣಕಾಸಿನ ಶಿಸ್ತು ತರಬೇಕು. ಮಾರ್ಚ್ 31 ರೊಳಗೆ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಕಾರ್ಯಕ್ರಮಗಳಿಗೆ ತೊಂದರೆಯಾದದಂತೆ ಕನಿಷ್ಠ ಶೇ. 5% ಆದರೂ ಕಡಿತವಾಗಬೇಕು ಎಂದು ತಿಳಿಸಿದ್ದೇನೆ. ಕಡತ ವಿಲೇವಾರಿ ವಿಳಂಬವಾಗದಂತೆ ಹೊಸ ವ್ಯವಸ್ಥೆ ತರಲಾಗುವುದು. ಕಡತ ವಿಲೇವಾರಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. 15 ದಿನಗಳೊಳಗೆ ಕಡತಗಳನ್ನು ಇಂದೀಕರಿಸಬೇಕು ಎಂದರು.

ಈ ನೂತನ ದಿಕ್ಸೂಚಿಯಿಂದ ಜನಸಾಮಾನ್ಯರಿಗೆ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು, ಯೋಜನೆಗಳು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ನಮ್ಮ ತಕ್ಷಣದ ಆದ್ಯತೆ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ. ಸರ್ಕಾರದ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಆರ್ಥಿಕ ಸ್ಥಿತಿಗತಿಗೆ ಸುಧಾರಣೆ ತರುವುದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಚಿವ ಸಂಪುಟದ ನಿರ್ಣಯಗಳು:

1. ರೈತರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಜಾರಿ. ಇದಕ್ಕಾಗಿ 1000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚ.
2. ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿರುವ 1000 ರೂ.ಗಳ ಮೊತ್ತವನ್ನು 1200 ರೂ.ಗಳಿಗೆ ಹೆಚ್ಚಳ. ಇದಕ್ಕಾಗಿ 863. 52 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವನ್ನು ಭರಿಸಲಾಗುವುದು. ಇದರಿಂದ ಸುಮಾರು 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
3. ವಿಧವಾ ವೇತನದಡಿ ನೀಡಲಾಗುತ್ತಿದ್ದ 600 ರೂ.ಗಳ ಮೊತ್ತವನ್ನು 800ಕ್ಕೆ ಹೆಚ್ಚಳ. ಇದಕ್ಕಾಗಿ 414 ಕೋಟಿ ಹೆಚ್ಚುವರಿ ವೆಚ್ಚ. 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
4. ಅಂಗವಿಕಲರ ವೇತನದಡಿ ಶೇಕಡಾ 40-75 ಅಂಗವೈಲಕಲ್ಯತೆ ಇರುವವರಿಗೆ ನೀಡುತ್ತಿರುವ 600 ರೂ.ಗಳನ್ನು 800 ರೂಗಳಿಗೆ ಹೆಚ್ಚಳ. ಇದಕ್ಕಾಗಿ 90 ಕೋಟಿ ವೆಚ್ಚ. 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
5. ಸಮಾಜಿಕ ಭದ್ರತೆ ಒದಗಿಸಬೇಕೆನ್ನುವ ದೃಷ್ಟಿಯಿಂದ ಆರ್ಥಿಕ ತೊಂದರೆಯಲ್ಲಿರುವವರಿಗೆ ಸಹಾಯವಾಗುವ ದೃಷ್ಟಿಯಿಂದ ಈ ತೀರ್ಮಾನ. ಮುಂಬರುವ ದಿನಗಳಲ್ಲಿ ಜನಕಲ್ಯಾಣ, ಜನಪರವಾದ ಕ್ರಮಗಳನ್ನು ಕೈಗೊಳ್ಳಲಿದ್ದು, ಅದರಲ್ಲೂ ವಿಶೇಷವಾಗಿ ದೀನದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English