ವೀಕೆಂಡ್ ಕರ್ಫ್ಯೂ ಹಾಗೂ ಕೊರೋನಾ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ

6:06 PM, Friday, January 7th, 2022
Share
1 Star2 Stars3 Stars4 Stars5 Stars
(No Ratings Yet)
Loading...

cpim Protestಮಂಗಳೂರು : ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ವಿಧಿಸಿದ ವೀಕೆಂಡ್ ಕರ್ಫ್ಯೂ ಹಾಗೂ ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಹಾಗೂ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರ್ಕಾರದ ವಿರುದ್ಧ CPIM ನೇತ್ರತ್ವದಲ್ಲಿ ಮಂಗಳೂರು ನಗರದಲ್ಲಿಂದು (07-01-2021) ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ರಾಜ್ಯ ಸರಕಾರದ ಅವೈಜ್ಞಾನಿಕ ಕ್ರಮಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿಯವರು,‍ *ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬೊಮ್ಮಯಿ ನೇತ್ರತ್ವದ ಬಿಜೆಪಿ ಸರಕಾರ ಹೆಜ್ಜೆಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಅದರ ಜೊತೆಗೆ ತನ್ನ ಕೋಮುವಾದಿ ಅಜೆಂಡಾವನ್ನು ಜಾರಿಗೊಳಿಸಿ ಜನರ ಗಮನವನ್ನು ಬೇರೆಡೆಗೆ ಸೆಲೆಯಲು ಯತ್ನಿಸುತ್ತಿದೆ. ಮಾತ್ರವಲ್ಲದೆ ಸರಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶವನ್ನು ಶಮನ ಮಾಡಲು ಕೊರೋನಾವನ್ನು ಮುಂದಿಟ್ಟುಕೊಂಡು ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ* ಎಂದು ತೀವ್ರವಾಗಿ ಟೀಕಿಸಿದರು.

CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ, *ರಾಜ್ಯದ ಜನತೆಯ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಸರಕಾರವು ಅಧಿಕಾರ ನಡೆಸಲು ಅಯೋಗ್ಯರು. ಅಂದು ಭ್ರಷ್ಟಾಚಾರದ ವಿರುದ್ಧ ಬೊಗಳೆ ಬಿಟ್ಟವರು ಇಂದು 40% ಕಮಿಷನ್ ಪಡೆಯುವ ಸರಕಾರವೆಂದು ತನ್ನವರಿಂದಲೇ ಕರೆಸಿಕೊಂಡಿದೆ* ಎಂದು ವ್ಯಂಗ್ಯವಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು, *ಕೊಳೆತು ನಾರುತ್ತಿರುವ ಮಾಧ್ಯಮ ರಂಗ,ಕುಲಗೆಟ್ಟ ರಾಜಕಾರಣ ಹಾಗೂ ಜನರ ಪ್ರಾಣ ದಲ್ಲಿ ಚೆಲ್ಲಾಟವಾಡುವ ಮೆಡಿಕಲ್ ಮಾಫಿಯಾಗಳ ಸಮ್ಮಿಶ್ರಣವು ಇಡೀ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿಟ್ಟು ಕೊರೋನಾ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ. ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳಿಗಾಗಿ ಜನರ ಹಿತವನ್ನು ಬಲಿ ಕೊಡುವ ಕೇಂದ್ರ ಸರ್ಕಾರದ ವಿರುದ್ಧವೂ ಜನತೆ ತಿರುಗಿ ಬೀಳುತ್ತಿದ್ದಾರೆ* ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿ, ಸುಕುಮಾರ್ ರವರು ಮಾತನಾಡಿ,ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಸದಾಶಿವದಾಸ್, ಜಯಂತ ನಾಯಕ್,ಬಶೀರ್ ಪಂಜಿಮೊಗರು, ಸಂತೋಷ್ ಬಜಾಲ್,ಯೋಗೀಶ್ ಜಪ್ಪಿನಮೊಗರು, ಬಿ.ಕೆ.ಇಮ್ತಿಯಾಜ್,ಜಯಂತಿ ಶೆಟ್ಟಿ,CITU ಜಿಲ್ಲಾ ನಾಯಕರಾದ ರಾದಾ ಮೂಡಬಿದ್ರೆ,ಗಿರಿಜಾ, ರವಿಚಂದ್ರ ಕೊಂಚಾಡಿ, ಮಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್,ನಾಗೇಶ್ ಕೋಟ್ಯಾನ್,DYFI ನಾಯಕರಾದ ನವೀನ್ ಕೊಂಚಾಡಿ, ದಯಾನಂದ ಶೆಟ್ಟಿ, ಮನೋಜ್ ವಾಮಂಜೂರು, ನೌಷಾದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕ್ರಷ್ಣ ತಣ್ಷೀರುಬಾವಿ, ಜನವಾದಿ ಮಹಿಳಾ ಸಂಘಟನೆಯ ನಾಯಕರಾದ ಭಾರತಿ ಬೋಳಾರ,ಪ್ರಮೀಳಾ ಶಕ್ತಿನಗರ,ಖ್ಯಾತ ಕಲಾವಿದರಾದ ಕೀತು ಫುರ್ಟಾಡೋ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ,ಜೆರಾಲ್ಡ್ ಟವರ್,ಉದಯ ಆಚಾರ್ಯ, SFI ನಾಯಕರಾದ ಮಾಧುರಿ ಬೋಳಾರ,ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English