ಕರ್ನಾಟಕದ ವಿದ್ಯಾರ್ಥಿ ರಷ್ಯಾದ ಪಡೆಗಳ ದಾಳಿಗೆ ಉಕ್ರೇನ್ ನಲ್ಲಿ ಬಲಿ

7:55 PM, Tuesday, March 1st, 2022
Share
1 Star2 Stars3 Stars4 Stars5 Stars
(No Ratings Yet)
Loading...

Naveen-Shekarappaಹಾವೇರಿ: ಉಕ್ರೇನ್‌ನಲ್ಲಿ  ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ  ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಆತನ ಜೊತೆಗಿದ್ದ ಸ್ನೇಹಿತರು ಖಚಿತ ಪಡಿಸಿದ್ದಾರೆ.

ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೂ ದಾಳಿಯನ್ನು ಪ್ರಾರಂಭಿಸಿದೆ.

ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು.

ಅರ್ಖಿಟೆಕ್ಟೋರಾ ಬೆಕೆಟೋವಾ ಮೆಟ್ರೋ ನಿಲ್ದಾಣದ ಬಂಕರ್‌ನಿಂದ ದಿನಸಿ ವಸ್ತುಗಳನ್ನು ತರಲು ಹೊರಟ ನವೀನ್, ಖಾರ್ಕಿವ್‌ನ ಬೀದಿಯಲ್ಲಿ ಶೆಲ್ ದಾಳಿಯಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ರಾಣೆಬೆನ್ನೂರಿನ ಪ್ರವೀಣ್ ಅವರ ಸ್ನೇಹಿತರೊಬ್ಬರು ಮೃತ ಕುಟುಂಬದ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ. ಸ್ಥಳೀಯ ಉಕ್ರೇನ್ ಕಾಲಮಾನ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸಾವನ್ನು ದೃಢಪಡಿಸಿದ್ದಾರೆ ಮತ್ತು ಟ್ವೀಟ್ ಮಾಡಿದ್ದಾರೆ. “ಗಹನವಾದ ದುಃಖದಿಂದ, ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ಖಚಿತಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ.

ಮೃತದೇಹವನ್ನು ಖಾರ್ಕಿವ್ ನಗರದ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೃತ ನವೀನ್ ಸ್ನೇಹಿತರು ಆತನ ಕುಟುಂಬ ಸದಸ್ಯರಿಗೆ ಖಚಿತಪಡಿಸಿದ್ದಾರೆ.

ಚಳಗೇರಿಯಲ್ಲಿರುವ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದು, ಗ್ರಾಮಸ್ಥರು, ಸ್ನೇಹಿತರು, ಸಂಬಂಧಿಕರು ಗ್ರಾಮದ ಅವರ ಮನೆ ಮುಂದೆ ಜಮಾಯಿಸಿದ್ದಾರೆ.

ಎಂಇಎ ಅಧಿಕಾರಿಗಳು ನವೀನ್ ಸೋದರ ಸಂಬಂಧಿಯೊಂದಿಗೆ ಮಾತನಾಡಿ ಸಾವನ್ನು ದೃಢಪಡಿಸಿದರು. ”ಯುದ್ಧ ಪ್ರದೇಶವಾಗಿರುವುದರಿಂದ ಈಗ ಶವವನ್ನು ತರಲು ಸಾಧ್ಯವಾಗುತ್ತಿಲ್ಲ. ದೇಹವನ್ನು ಸಂರಕ್ಷಿಸಲು ಮತ್ತು ಸಾಧ್ಯವಾದಷ್ಟು ಬೇಗ ಭಾರತಕ್ಕೆ ತರಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ” ಎಂಇಎ ಕಚೇರಿ ಹೇಳಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English