ಅಮೃತ ಕೌಶಲ್ಯ ತರಬೇತಿ’ಯಡಿ 36 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ: ಡಾ. ಅಶ್ವತ್ಥನಾರಾಯಣ

9:37 PM, Thursday, March 3rd, 2022
Share
1 Star2 Stars3 Stars4 Stars5 Stars
(No Ratings Yet)
Loading...

Amruta Kushlyaಮಂಗಳೂರು : ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲಿರುವ `ಅಂತಾರಾಷ್ಟ್ರೀಯ ವಲಸೆ ಕೇಂದ್ರ’ ದ ಮಂಗಳೂರು ಪ್ರಾದೇಶಿಕ ಕಚೇರಿಯನ್ನು  ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾ.3ರ ಗುರುವಾರ ಎ.ಜೆ. ಇನಿಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ  ವರ್ಚುಯಲ್ ರೂಪದಲ್ಲಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಮೇಕ್ ಇಂಡಿಯಾ ಕೇಪಬಲ್’ ಕಾರ್ಯಕ್ರಮದಡಿ ಇಂಗ್ಲೀಷ್ ಲ್ಯಾಬ್ ಕೇಂದ್ರವನ್ನೂ ಲೋಕಾರ್ಪಣೆ ಮಾಡಿದರು. ಈ ಕೇಂದ್ರದಲ್ಲಿ ಪ್ರತೀ 3 ತಿಂಗಳಿಗೊಮ್ಮೆ ತಲಾ 300 ಜನರಿಗೆ ಉದ್ಯೋಗಕ್ಕೆ ಅಗತ್ಯವಾಗಿರುವ ಇಂಗ್ಲೀಷ್ ಭಾಷಾ ಕೌಶಲ್ಯವನ್ನು ಕಲಿಸಿ ಕೊಡಲಾಗುವುದು, ಈ ಕೇಂದ್ರವು ಮಂಗಳೂರು ನಗರದ ಮಹಿಳಾ ಐಟಿಐ ಕಾಲೇಜಿನಲ್ಲಿ ಹಾಗೂ `ಅಂತಾರಾಷ್ಟ್ರೀಯ ವಲಸೆ ಕೇಂದ್ರ’ದ ಮಂಗಳೂರು ಪ್ರಾದೇಶಿಕ ಕಚೇರಿಯು ಊರ್ವ ಸ್ಟೋರ್ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಪ್ಲೆಕ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

`ಅಮೃತ ಕೌಶಲ್ಯ ತರಬೇತಿ’ ಯೋಜನೆಯಡಿ ಈ ವರ್ಷ 36 ಸಾವಿರಕ್ಕೂ ಹೆಚ್ಚು ಯುವಜನರಿಗೆ ಉಚಿತವಾಗಿ ಕೌಶಲ್ಯಗಳನ್ನು ಕಲಿಸಿ, ಎಲ್ಲರಿಗೂ ಉದ್ಯೋಗ ದೊರೆಯುವಂತೆ ಮಾಡಲಾಗುವುದು, ಸರ್ಕಾರವು ರೂಪಿಸಿರುವ `ಸರ್ವರಿಗೂ ಉದ್ಯೋಗ’ ಸಮಗ್ರ ಯೋಜನೆಯಡಿ ನಡೆಯುತ್ತಿರುವ ಮೂರನೇ ಉದ್ಯೋಗ ಮೇಳ ಇದಾಗಿದೆ’ ಎಂದು ಹೇಳಿದರು.
ಈ ಯೋಜನೆಯಡಿ ಈಗಾಗಲೇ ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ಇಂತಹ ಮೇಳಗಳನ್ನು ನಡೆದಿರುವುದನ್ನು ಇಲ್ಲಿ ನೆನೆಯಬಹುದು. ಇಲ್ಲಿನ ಉದ್ಯೋಗ ಮೇಳದಲ್ಲಿ ಅಗತ್ಯ ವಿದ್ಯಾಭ್ಯಾಸ ಇದ್ದೂ ಅವಕಾಶ ಪಡೆಯದೆ ಹೋಗುವವರಲ್ಲಿ ಇರುವ ಕೊರತೆ ಏನೆಂಬುದನ್ನು ತಕ್ಷಣವೇ ತಿಳಿದುಕೊಳ್ಳಲಾಗುವುದು. ಇಂಥವರಿಗೆಲ್ಲ ಸರ್ಕಾರದ ವತಿಯಿಂದಲೇ ಅಗತ್ಯ ಕೌಶಲ್ಯಗಳನ್ನು ಕಲಿಸಲಾಗುವುದು ಎಂದು ನುಡಿದರು.

ಇಂತಹ ಮೇಳಗಳ ಮೂಲಕ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗಗಳನ್ನು ದೊರಕಿಸಿ ಕೊಡಲಾಗಿದೆ. ಯುವಜನರಿಗೆ ಉದ್ಯೋಗಾವಕಾಶಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳೂ ಸುಲಭವಾಗಿ ಸಿಗಬೇಕೆನ್ನುವ ಸದುದ್ದೇಶದಿಂದಲೇ ರಾಮನಗರದಲ್ಲಿ `ಸ್ಕಿಲ್ ಹಬ್’ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಕೌಶಲ್ಯ ತರಬೇತಿ ಮತ್ತು ಉಮದ್ಯಮಶೀಲತೆಗೆ ಸಂಬಂಧಿಸಿದ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ಸ್ ಗಳನ್ನು ಕೂಡ ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ನಿರುದ್ಯೋಗ ನಿವಾರಣೆಯನ್ನು ಸರ್ಕಾರ ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ 150 ಸರ್ಕಾರಿ ಐಟಿಐಗಳ ಉನ್ನತೀಕರಣ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 9 ತಿಂಗಳ ಕಡ್ಡಾಯ ಇಂಟರ್ನ್ ಶಿಪ್ ಮುಂತಾದ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರಲಾಗುತ್ತಿದೆ. ಕಲಿಕೆಯ ಹಂತದಲ್ಲೇ ಪ್ರತಿಯೊಬ್ಬರನ್ನೂ ಆಧುನಿಕ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡುವ ಗುರಿಯೊಂದಿಗೆ ಸಮಕಾಲೀನ ಪಠ್ಯಕ್ರಮವನ್ನು ರೂಪಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಈಗ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದ್ದು, ಗುಣಮಟ್ಟದ ಶಿಕ್ಷಣವೊಂದೇ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, ಅತ್ಯುತ್ತಮ ಶೈಕ್ಷಣಿಕ ಸಂಸ್ಕøತಿ ಮತ್ತು ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲಿ ಸುಸಜ್ಜಿತ ಐಟಿ ಪಾರ್ಕ್ ಸ್ಥಾಪನೆ ಅಗತ್ಯವಿದ್ದು, ಇದಕ್ಕೆ ಬೇಕಾಗಿರುವ ಭೂಮಿ ಮತ್ತಿತರ ಸೌಲಭ್ಯಗಳನ್ನು ಕೊಡಲಾಗುವುದು ಎಂದು ಹೇಳಿದರು.

ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಮಗದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ವಿದ್ಯುನ್ಮಾನ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ದಿ ನಿಮಗದ ಅಧ್ಯಕ್ಷ ರವೀಂದ್ರ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳಾ ರಾವ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಸಂಜೀವ್ ಗುಪ್ತ, ಸಂದೀಪ್ ಮೈನಿ, ಸುಧಾಕರ ಗುಡಿಪಾಟಿ  ಎ.ಜೆ. ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಸೇರಿದಂತೆ ಮುಂತಾದವರಿದ್ದರು ವೇದಿಕೆಯಲ್ಲಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English