ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸರ್ವ ಮಾನ್ಯವಾದ ಅತ್ಯದ್ಭುತ ಸಂದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಒತ್ತು ನೀಡಿ ಕೇರಳದ ಶಿವಗಿರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು 70 ಕೋಟಿ ರೂಪಾಯಿಗಳನ್ನು ನೀಡಿದ್ದು, ರಾಜ್ಯದ ಜನತೆಗೆ ಅರಿವಿದೆ. ಸರಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಪಠ್ಯಪುಸ್ತಕವನ್ನು ಕೈಬಿಟ್ಟಿಲ್ಲ.
ಕಾಂಗ್ರೆಸ್ ಪಕ್ಷವು ಸತತ ಸೋಲಿನ ಹೊಡೆತದಿಂದ ಕಂಗೆಟ್ಟು ಇದೀಗ ಹಿಂದೂ ಸಮಾಜವನ್ನು ಪ್ರಚೋದಿಸಿ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ವಾಗ್ದಾಳಿ ನಡೆಸಿದ್ದಾರೆ.
ಸ್ವತಹ ಶಿಕ್ಷಣ ಸಚಿವರಾದ ನಾಗೇಶ್ , ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪಷ್ಟವಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಪಾಠವನ್ನು ಪಠ್ಯಪುಸ್ತಕದಿಂದ ತೆಗೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದು , ಆದರೂ ಸಹ ಕಾಂಗ್ರೆಸ್ ಜಾಣ ಕುರುಡರಂತೆ ವರ್ತಿಸುತ್ತಿದೆ. ಮುಂದಿನ ಚುನಾವಣೆಗೆ ಲಾಭ ಪಡೆಯುವ ಉದ್ದೇಶವಿದ್ದರೆ ನಿಮ್ಮ ಈ ತಂತ್ರ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು ಅರೆಬರೆ ಜ್ಞಾನದಿಂದ ಹೇಳಿಕೆಯನ್ನು ನೀಡಿದ್ದಾರೆ. ಪಠ್ಯ ದಿಂದ ಕೈ ಬಿಟ್ಟಿದ್ದರೆ ಸಾಕ್ಷ್ಯ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಈ ಹಿಂದೆ ಮಂಗಳೂರಿನ ಹೃದಯಭಾಗದಲ್ಲಿ ಸುಂದರರಾಮ ಶೆಟ್ಟಿ ಅವರ ಹೆಸರಿದ್ದ ರಸ್ತೆಯನ್ನು ಅವರದೇ ಸರಕಾರ ಇದ್ದಾಗ ಬದಲಾವಣೆ ಮಾಡಬಯಸಿತು.ಆಗ ಮೌನವಾಗಿದ್ದು ಸಮ್ಮತಿ ನೀಡಿದ್ದರು. ಆಗ ಬಂಟ ಸಚಿವರು ರಾಜೀನಾಮೆ ನೀಡಿದ್ದಾರೆಯೆ? ಈಗ ಮಾತ್ರ ಯಾಕೆ ಬಿಜೆಪಿ ಸಚಿವರಿಗೆ ರಾಜೀನಾನೆಗೆ ಕರೆ ನೀಡಿದ್ದೀರಿ? ಎಂದು ರೈ ಅವರಿಗೆ ತಿರುಗೇಟು ನೀಡಿದ್ದಾರೆ.
ಬಿಲ್ಲವ ಸಮುದಾಯದ ಸಚಿವರನ್ನು ರಾಜೀನಾಮೆ ನೀಡಿ ಹೊರಬರಲು ಹೇಳಲು ಯಾವ ನೈತಿಕ ಹಕ್ಕಿದೆ. ಬಿಲ್ಲವ ನಾಯಕ ಬಿ.ಜನಾರ್ಧನ ಪೂಜಾರಿ ಅವರನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ ಪಕ್ಷದಲ್ಲಿ, ಎಂಬುದು ಎಲ್ಲರಿಗೂ ತಿಳಿದ ವಿಚಾರ.ಈಗ ಸಮುದಾಯದ ಬಗ್ಗೆ ಅತೀ ನಾಟಕೀಯ ಅನುಕಂಪ ಅಗತ್ಯವಿಲ್ಲ. ಇದಕ್ಕೆ ಹಿಂದೂ ಸಮಾಜವೇ ಒಗ್ಗಟ್ಟಿನ ಮೂಲಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ
Click this button or press Ctrl+G to toggle between Kannada and English