ಮಂಗಳೂರು : ಮಂಗಳೂರಿನ ವಿವಾದಿತ ಮಳಲಿ ದರ್ಗಾದಲ್ಲಿ ನಾಳೆ ತಾಂಬೂಲ ಪ್ರಶ್ನೆಗೆ ದಿನ ನಿಗದಿಯಾಗಿದೆ. ಮಳಲಿ ಮಸೀದಿಯಲ್ಲಿ ದೇಗುಲದ ಶೈಲಿ ಪತ್ತೆ ವಿಚಾರ ನ್ಯಾಯಾಲಯದಲ್ಲಿ ಇದ್ದು, ಇದರ ಮಧ್ಯೆ ವಿಹೆಚ್ಪಿ ಮತ್ತು ಬಜರಂಗದಳ ಜ್ಯೋತಿಷ್ಯದಲ್ಲಿ ಅತೀ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ಇಡಲು ನಿರ್ಧರಿಸಿದ್ದು, ಇದರ ಪೂರ್ವಭಾವಿಯಾಗಿ ಮೇ 25 ಬುಧವಾರ ಬೆಳಗ್ಗೆ ತಾಂಬೂಲ ಪ್ರಶ್ನೆ ನಡೆಯಲಿದೆ.
ತಾಂಬೂಲ ಪ್ರಶ್ನೆ ಹಿನ್ನಲೆಯಲ್ಲಿ ನಾಳೆ ಮಳಲಿ ಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಳ್ಳಲಿದ್ದಾರೆ. ಸದ್ಯ ಪ್ರಶ್ನೆಯಲ್ಲಿ ಯಾವ ಯಾವ ವಿಚಾರ ತಿಳಿದುಬರುತ್ತೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಮಳಲಿಯ ವಿವಾದಿತ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ಅನತಿ ದೂರದಲ್ಲೇ ನಾಳೆ ತಾಂಬೂಲ ಪ್ರಶ್ನೆ ನಡೆಯಲಿದೆ. ದೇವಸ್ಥಾನದ ಮಾದರಿ ಪತ್ತೆಯಾದ ದರ್ಗಾದ ಜಾಗದಲ್ಲಿ ದೈವಿಕ ಶಕ್ತಿ ಇದೆಯೋ ಎಂಬ ಬಗ್ಗೆ ತಿಳಿದುಕೊಳ್ಳುಲು ಈ ತಾಂಬೂಲ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಿದೆ. ದರ್ಗಾಕ್ಕಿಂತ ಸುಮಾರು 250 ಮೀ ದೂರದಲ್ಲಿರುವ ರಾಮಾಂಜನೇಯ ಭಜನಾ ಮಂದಿರಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕೇರಳ ಮೂಲದ ಪೊದುವಾಲ್ರು ಬೆಳಗ್ಗೆ ಎಂಟು ಗಂಟೆಗೆ ಪೂಜೆಯನ್ನು ನೆರವೇರಿಸಿ ಪ್ರಶ್ನೆಯನ್ನಿಡಲಿದ್ದಾರೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂಬುದು ಪತ್ತೆಯಾಗಲಿದೆ.
ಈ ವಿವಾದದ ಕುರಿತಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಅಧಿಕಾರಿಗಳು ಮತ್ತು ವಿವಾದಕ್ಕೆ ಸಂಬಂಧಿಸಿದವರ ಜೊತೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ನ್ಯಾಯಾಲಯ ದರ್ಗಾದ ನವೀಕರಣ ಕಾಮಗಾರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಯಾವುದೇ ಕಾಮಗಾರಿ ನಡೆಸದಂತೆ ಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳ, ಜುಮ್ಮಾ ಮಸೀದಿ ಅಧ್ಯಕ್ಷ ಕಾರ್ಯದರ್ಶಿಗಳ ಜೊತೆ ಸಭೆ ಮಾಡಿದ್ದೇವೆ. ಪ್ರಶ್ನಾ ಚಿಂತನೆ ಇನ್ನಿತರ ಧಾರ್ಮಿಕ ವಿಚಾರ ಅವರವರ ವೈಯಕ್ತಿಕ ವಿಚಾರವಾಗಿದೆ. ಆದ್ರೆ ಕಾನೂನು ಮೂಲಕವೇ ಹೋರಾಟ ಮಾಡಬೇಕಾಗಿದೆ ಎಂಬುದನ್ನು ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಯಾರೂ ಕೂಡಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಿ ಎಂದು ಡಿ.ಸಿ ಮನವಿ ಮಾಡಿದ್ದಾರೆ.
Tambula prashna to be held at Controversial Malali Dargah
Click this button or press Ctrl+G to toggle between Kannada and English